ಇವರು ನಮ್ಮ ಸ್ವಾಭಿಮಾನ ವೃದ್ಧಿಸುವ ಕೆಲಸ ಮಾಡಿದ್ದಾರಾ?
ಆಗಲೇ ನಾವು ಜಪಾನ್, ಉತ್ತರ ಕೊರಿಯಾ, ವಿಯೆಟ್ನಾಂ, ಮ್ಯಾನ್ಮಾರ್, ರಷ್ಯಾಗಳಲ್ಲಿ ನಮ್ಮ ಕೈ ಚಾಚಿದ್ದರೆ ಚೀನಾ ಬಾಲ ಮುದುರಿಕೊಂಡು ಬಿದ್ದಿರುತ್ತಿತ್ತು. ದುರ್ದೈವ ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್ರೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಣಾಕ್ಷತನ ತೋರೋದು ಬಿಟ್ಟು ಅಣ್ಣಾ, ಬಾಬಾ ಹಾಗೂ ಇಲ್ಲಿನ ರಾಜಕೀಯ ನಾಯಕರುಗಳ ಹಿಂದೆ ಬಿದ್ದಿದ್ದರು.
ಜನಸಾಮಾನ್ಯರ ನೆನಪು ಅಲ್ಪಕಾಲದ್ದಂತೆ. ಈ ಮಾತನ್ನು ಕಾಂಗ್ರೆಸ್ಸು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿಯೇ ಜನರೆದುರು ಮತ್ತೆ ಬಂದು ನಿಲ್ಲುತ್ತೆ. ತ್ಯಾಗಮಯಿ ಸೋನಿಯಾರಿಂದ ಅಽಕಾರ ಪಡಕೊಂಡಂದಿನಿಂದ ಇಂದಿನವರೆಗೂ ಮನಮೋಹನ್ ಸಿಂಗ್ರು ಭಾರತದ ಸ್ವಾಭಿಮಾನ ವೃದ್ಧಿಸುವ ಒಂದಾದರೂ ಕೆಲಸ ಮಾಡಿದ್ದಾರಾ?
ಬುಧವಾರ ರಾತ್ರಿ ಪಾಕಿಸ್ತಾನದ ಜಿನ್ನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದನಲ್ಲ ಸರಬ್ಜಿತ್, ಅವನ ಶವ ಕೂಡ ಕೇಂದ್ರ ಸರ್ಕಾರವನ್ನು ಕ್ಷಮಿಸಲಾರದು. ತನ್ನದಲ್ಲದ ತಪ್ಪಿಗೆ ೨೩ ವರ್ಷಗಳ ಕಾಲ ಅಂಧಕಾರದಲ್ಲಿ ಕಳೆದ ಸರಬ್ಜಿತ್ ಕೊನೆಗೆ ಗೌರವಯುತವಾದ ಸಾವನ್ನೂ ಹೊಂದಲಿಲ್ಲ. ಜೈಲಿನೊಳಗೆ ಆರೇಳು ಕೈದಿಗಳು ಇಟ್ಟಿಗೆಗಳಿಂದ ತಲೆಗೆ ಬಡಿಬಡಿದೇ ಅವನನ್ನು ಕೋಮಾಕ್ಕೆ ತಳ್ಳಿಬಿಟ್ಟರು. ಯಾವ ಕೈದಿಯನ್ನೂ ಹೀಗೆ ನಡೆಸಿಕೊಳ್ಳಬಾರದೆಂಬ ನಿಯಮವಿದೆ. ಅಂಥದ್ದರಲ್ಲಿ ಹೊರದೇಶದ ಬಂಽಯೊಂದಿಗಿನ ವರ್ತನೆ ಸುತರಾಂ ಒಪ್ಪುವಂಥದ್ದಲ್ಲ. ಆದರೇಕೋ? ಕಾಂಗ್ರೆಸ್ಸು ಮೌನ ಮುರಿಯಲೇ ಇಲ್ಲ. ಅತ್ತು ಅತ್ತು ಸರಬ್ ಮಗಳು ಪೂನಂಳ ಕಂಗಳು ಬತ್ತಿ ಹೋಗಿದ್ದವು. ಪದೇಪದೇ ಸೋನಿಯಾ, ಮನಮೋಹನ್ರ ಬಾಗಿಲು ಬಡಿದ ನಂತರವೂ ಆ ಕುಟುಂಬಕ್ಕೆ ದೊರೆತದ್ದು ಸಾವಿನ ಸುದ್ದಿ ಮಾತ್ರ! ತಮ್ಮನನ್ನು ಕರೆತರುವವರೆಗೂ ಅನ್ನ ಸೇವಿಸುವುದಿಲ್ಲವೆಂದ ಸೋದರಿ ಬಲಬೀರ್ ಕೌರ್ಳದು ವ್ಯರ್ಥ ಕಣ್ಣೀರಾಯಿತು.
ನೆನಪು ಮಾಡಿಕೊಳ್ಳಿ. ಇದಕ್ಕೂ ಕೆಲ ದಿನ ಹಿಂದೆ ಭಾರತದ ಗಡಿಯೊಳಕ್ಕೆ ನುಸುಳಿದ ಪಾಕ್ ಸೈನಿಕರು ಲಾನ್ಸ್ ನಾಯಕ್ ಹೇಮರಾಜನ ತಲೆ ಕಡಿದೊಯ್ದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹಲ್ಲು ಕಡಿಯುವ ಪರಿಸ್ಥಿತಿ. ಕೇಂದ್ರ ಸರ್ಕಾರ ಮಾತ್ರ ಸೊಲ್ಲೆತ್ತಲಿಲ್ಲ. ಹೇಮರಾಜನ ಪತ್ನಿ ‘ಜೀವವಂತೂ ಬರಲಾರದು, ತಲೆಯನ್ನಾದರೂ ತರಿಸಿಕೊಡಿ’ ಎಂದು ಉಪವಾಸ ಕುಂತಳು. ಸರ್ಕಾರದ ನಿರ್ವೀರ್ಯತೆಗೆ ಮಣಿದು ಆಕೆ ಅನ್ನ ಸೇವಿಸಬೇಕಾಯಿತೇ ಹೊರತು ಪತಿಯ ತಲೆ ವಾಪಾಸು ತರಲಾಗಲಿಲ್ಲ. ಆ ವೇಳೆಗೆ ಅಜ್ಮೀರದತ್ತ ಹೆಜ್ಜೆ ಹಾಕಿದ್ದ ಪಾಕಿಸ್ತಾನದ ಅಧ್ಯಕ್ಷನಿಗೆ ಬಹುಪರಾಕ್ ಹೇಳುವುದರಲ್ಲಿ ನಿರತವಾಗಿದ್ದರು ಕಾಂಗ್ರೆಸ್ ಮಂತ್ರಿಗಳು.
ಜಾರ್ಖಂಡ್ನಲ್ಲಿ ಮಾವೋವಾದಿಗಳು ಪೊಲೀಸರನ್ನು ಅಟ್ಟಾಡಿಸಿ ಕೊಲ್ಲುತ್ತಿದ್ದಾರಲ್ಲ, ಹೇಗಿದೆ ನಮ್ಮ ಪ್ರತಿಕ್ರಿಯೆ? ಕಾನ್ಸ್ಟೆಬಲ್ ಬಾಬುಲಾಲ್ ಪಟೇಲನ ಹೊಟ್ಟೆ ಕೊಯ್ದು ಅದರೊಳಗೆ ಹಸಿಬಾಂಬಿಟ್ಟು ಕಳಿಸಿದರಲ್ಲ, ಪ್ರಭುತ್ವಕ್ಕೆ ಸವಾಲಾಗುವ ಧಾರ್ಷ್ಟ್ಯ ಅವರಲ್ಲಿ ಅದೆಷ್ಟಿರಬೇಕು! ಹಾಗಂತ ಅದು ಏಕಾಏಕಿ ಆದ ದಾಳಿಯಲ್ಲ. ಅದಕ್ಕೂ ಮುನ್ನವೇ ಐವರು ಪೊಲೀಸರನ್ನು ಚೆನ್ಪುರದಲ್ಲಿ ಕೊಂದು ಮಾವೋಗಳು ಪರಾರಿಯಾಗಿಬಿಟ್ಟಿದ್ದರು.
ಹೇಳಿ ಸೈನಿಕರ ಮಾನಸಿಕ ಸ್ಥಿತಿಗತಿಗಳು ಹೇಗಿರಬೇಕು. ಯುದ್ಧದಲ್ಲಿ ಸಾಯುವುದಿರಲಿ, ನಮ್ಮ ಸರ್ಕಾರದ ನೀತಿಗಳಿಂದಾಗಿ ಶಾಂತಿಯ ಹೊತ್ತಲ್ಲೂ ಸೈನಿಕರ ಹೆಣಗಳು ಬೀಳುತ್ತಿವೆಯಲ್ಲ ಯಾರು ಹೊಣೆ ಇದಕ್ಕೆ? ಸೈನಿಕನಿರಲಿ, ತನ್ನ ದೇಶದ ನಾಗರಿಕನನ್ನು ಮುಟ್ಟಿದರೆ ಪಕ್ಕದ ದೇಶದ ಧ್ವಂಸಕ್ಕೆ ತಯಾರಾಗುತ್ತಲ್ಲ ಇಸ್ರೇಲು; ನಿರ್ಜೀವ ಕಟ್ಟಡ ಮುಟ್ಟಿದ್ದಕ್ಕೆ ಅ-ನಿಸ್ತಾನದ ಮುಖಚರ್ಯೆಯನ್ನೇ ಬದಲಾಯಿಸಿಬಿಟ್ಟಿತ್ತಲ್ಲ ಅಮೆರಿಕಾ, ಇವುಗಳಿಂದ ಕಲಿಯಬೇಕಾದ್ದಿಲ್ಲವೇನು?
ಅದೂ ಸರಿ. ಸೈನಿಕರು ಇವನ್ನೆಲ್ಲ ಸಹಿಸಲಿಕ್ಕೆ ತರಬೇತಿ ಪಡೆದಿದ್ದಾರೆಂದು ಹೇಳಿಬಿಡಬಹುದು. ಆದರೆ ಜನಸಾಮಾನ್ಯರದೇನು ಕತೆ. ಅಸ್ಸಾಂನ ಕೊಕ್ರಾಜಾರ್ನಲ್ಲಿ ಬಾಂಗ್ಲಾ ಒಳನುಸುಳುಕೋರರ ದಬ್ಬಾಳಿಕೆಯಿಂದಾಗಿ ನೂರಕ್ಕೂ ಹೆಚ್ಚು ಜನ ಸತ್ತರು (ಸರ್ಕಾರಿ ಲೆಕ್ಕ ೫೮ ಅಂತಿತ್ತು, ಇರಲಿ). ಐನೂರು ಹಳ್ಳಿಗಳು ಮರುಭೂಮಿಯಂತಾಗಿಬಿಟ್ಟಿದ್ದವು. ಮೂರು ಲಕ್ಷಕ್ಕೂ ಹೆಚ್ಚು ಮಹಿಳೆಯರು, ವೃದ್ಧರು, ಮಕ್ಕಳು ಪುನರ್ವಸತಿ ಟೆಂಟುಗಳಲ್ಲಿ ಆಶ್ರಯ ಪಡಕೊಂಡರು. ಜೈಂತ್ಯ, ಬೋಡೋ, ಡಿಮಾಸಾ, ಖಾಸಿಯಂತಹ ಮೂಲ ಬುಡಕಟ್ಟು ಜನಾಂಗಗಳನ್ನು ಪೂರ್ಣ ತೊಳೆದು ಬಿಡುವ ‘ಎಥ್ನಿಕ್ ಕ್ಲೆನ್ಸಿಂಗ್’ ನಡೆದುಹೋಯಿತು. ರಾಜ್ಯ ರಾಜ್ಯಗಳಿಂದ ಜನ ಗುಳೆ ಎದ್ದು ಹೊರಟರು. ರಾಷ್ಟ್ರೀಯ ಏಕತೆಯ ಪರಿಕಲ್ಪನೆ ನಮ್ಮ ಕಣ್ಣೆದುರೇ ಮಣ್ಣುಮುಕ್ಕಿತು. ಸ್ವತಃ ಗುವಾಹಟಿಯ ಉಚ್ಚ ನ್ಯಾಯಾಲಯ ‘ನುಸುಳುಕೋರರು ಮೂಲೆ ಮೂಲೆಗೆ ನುಗ್ಗಿದಷ್ಟೇ ಅಲ್ಲ, ಅವರು ಕಿಂಗ್ಮೇಕರ್ಗಳಾಗುತ್ತಿದ್ದಾರೆ. ಈ ಓಟವನ್ನು ತಡೆಯದಿದ್ದರೆ ಅವರು ಅಽಕಾರದ ಪಡಸಾಲೆಗೂ ನುಗ್ಗಿಬಿಡುತ್ತಾರೆ’ ಎಂದು ಅಭಿಪ್ರಾಯಪಟ್ಟಿತು. ಅಸ್ಸಾಂ ಮುಖ್ಯಮಂತ್ರಿಯೇ ಈ ಕುರಿತಂತೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ಕೇಂದ್ರ ಮಂತ್ರಿಗಳು ಮಾತ್ರ ಇದರಲ್ಲಿ ನುಸುಳುಕೋರರ ತಪ್ಪೇ ಇಲ್ಲವೆಂದು ವಾದಿಸುತ್ತಿದ್ದರು. ಬಾಂಗ್ಲಾವನ್ನು ಒಮ್ಮೆ ಗುರಾಯಿಸಿ ನೋಡಿದ್ದರೆ ಅದು ಬಾಲಮುದುರಿಕೊಂಡು ಬಿದ್ದಿರುತ್ತಿತ್ತು. ಹಾಗಾಗಲಿಲ್ಲ. ಹೇಳಿ. ಇನ್ನು ಮುಂದೆ ನುಸುಳುಕೋರರ ವಿರುದ್ಧ ಕಾದಾಡುವ ಶಕ್ತಿ ಜನಸಾಮಾನ್ಯರಿಗೆ ಉಳಿದೀತೇ?
ರಾತ್ರಿ ಹತ್ತು ಗಂಟೆಯ ವೇಳೆಗೆ ದೆಹಲಿಯ ಬಸ್ಸಿನಲ್ಲಿ ‘ದಾಮಿನಿ’ಯ ರೇಪ್ ಆಯಿತಲ್ಲ; ಆ ಹೆಣ್ಣು ಮಗಳ ಕರುಳು ಕಿತ್ತುಬರುವಂತೆ ಕಬ್ಬಿಣದ ಸಲಾಕೆ ತುರುಕಿದರಲ್ಲ, ಆಗಲೂ ಕೇಂದ್ರ ಸರ್ಕಾರ ಕಂಬನಿ ಮಿಡಿಯಲಿಲ್ಲ. ಅವರಿಗೆ ಕೊಡುವ ಶಿಕ್ಷೆಯ ಕುರಿತಂತೆ ಚರ್ಚೆ ಮಾಡುತ್ತ ಉಳಿದಿದ್ದಲ್ಲದೇ ಹೆಣ್ಮಕ್ಕಳು ಹಾಕುವ ಉಡುಪಿನ ಬಗ್ಗೆ ನಾಯಕರೇ ರಂಗುರಂಗಿನ ಹೇಳಿಕೆ ಕೊಟ್ಟು ಮಂಗಗಳಂತಾಡಿದರಲ್ಲ. ಜನ ಮರೆತಿಲ್ಲ. ಮರೆತು ಬಿಡುತ್ತಿದ್ದರೋ ಏನೋ? ಆದರೆ ದೆಹಲಿಯಲ್ಲಿ ನಿತ್ಯ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ಸುದ್ದಿಯನ್ನು ಹಸಿಯಾಗಿಟ್ಟಿವೆ. ಐದು ವರ್ಷದ ಮಗುವನ್ನು ನಾಲ್ಕು ದಿನಗಳ ಕಾಲ ಬರ್ಬರವಾಗಿ ಹಿಂಸಿಸಿ ಅತ್ಯಾಚಾರ ಮಾಡಿದವರ ವಿರುದ್ಧ ದೂರು ಪಡೆಯಲೂ ನಿರಾಕರಿಸಿದರು ದಿಲ್ಲಿ ಪೊಲೀಸರು. ಹೋಗಲಿ. ನಿಮ್ಮ ಕಣ್ತೆರೆಯಲು ಇನ್ನೆಷ್ಟು ಹೆಣ್ಮಕ್ಕಳ ಅತ್ಯಾಚಾರ ಆಗಬೇಕು ಹೇಳಿ.
ಭ್ರಷ್ಟಾಚಾರದ ವಿಚಾರಕ್ಕೆ ಬಂದರಂತೂ ಕೇಂದ್ರದ ಸಾಧನೆಗೆ ಎಲ್ಲ ರಾಜ್ಯ ಸರ್ಕಾರಗಳ ಒಟ್ಟು ಮೊತ್ತವೂ ತೂಗಲಾರದು. ಜಗತ್ತನ್ನೇ ಬೆಚ್ಚಿ ಬೀಳಿಸಿದ ೨ಜಿ ತರಂಗಗುಚ್ಛ ಹಗರಣದ ಒಟ್ಟು ಮೊತ್ತ ಕರ್ನಾಟಕದ ಬಜೆಟ್ಟಿನ ದುಪ್ಪಟ್ಟಿನಷ್ಟು! ಕಾಮನ್ವೆಲ್ತ್ ಗೇಮ್ಸ್ ಕೇಂದ್ರ ಸರ್ಕಾರದ ಮೂಗಿನಡಿಯೇ ನಡೆಯಿತಲ್ಲ, ಅದರ ಆಯೋಜನೆ ಅದೆಷ್ಟು ಭಯಾನಕವಾಗಿತ್ತೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆಯುವಷ್ಟು. ಹೆಲಿಕಾಪ್ಟರುಗಳ ಖರೀದಿಯಿರಲಿ, ಸೈನ್ಯಕ್ಕಾಗಿ ಖರೀದಿಸಿದ ಟ್ರಕ್ಕುಗಳಿರಲಿ ಎಲ್ಲೆಲ್ಲೂ ಕಿಕ್ಬ್ಯಾಕ್ ಪಡೆದು ದೇಶವೇ ತಲೆತಗ್ಗಿಸುವಂತಾಯಿತು. ಹೀಗೆ ಪಡೆದು ಕೂಡಿಟ್ಟ ಹಣ ಕಪ್ಪು ಹಣವಾಗಿ ಕೊಳೆಯುತ್ತಿದೆ ಎಂದು ಉಪವಾಸ ಕುಳಿತ ಸಾಧು ರಾಮದೇವ್ ಬಾಬಾ ಮತ್ತವರ ಅನುಯಾಯಿಗಳನ್ನು ಲಾಠಿಯಿಂದ ಹೊಡೆಸಲಾಯಿತು. ಕಪ್ಪು ಹಣದ ಕುರಿತಂತೆ ವಿಚಾರಗಳೆಲ್ಲವೂ ಕಟ್ಟುಕತೆ ಎಂದ ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ ಶ್ವೇತಪತ್ರವೊಂದನ್ನು ಹೊರಡಿಸಿ ಬಾಬಾ ರಾಮದೇವರ ಬಹುಪಾಲು ವಿಚಾರಗಳನ್ನು ಒಪ್ಪಿಕೊಂಡೇ ಬಿಟ್ಟಿತಲ್ಲ! ಆಗಲಾದರೂ ಸಾಧುವಿಗಾದ ಅನ್ಯಾಯಕ್ಕೆ ಕ್ಷಮೆ ಕೇಳಿತಾ ಕೇಂದ್ರ ಸರ್ಕಾರ?
ನಿಯತ್ತಾದ ಸರ್ಕಾರ ನಡೆಯಲೆಂದು ಅಣ್ಣಾ ಹಜಾರೆ ದೇಶದ ತರುಣರನ್ನು ಒಗ್ಗೂಡಿಸಿ ಬಲಿಷ್ಠ ಜನಲೋಕಪಾಲ್ಗೆ ಒತ್ತಾಯಿಸಿದರೆ ಕಪಿಲ್ ಸಿಬಲ್ರಂತಹ ಆಂಗ್ಲ ಮಾನಸಿಕತೆಯ ಬುದ್ಧಿವಂತರು ಆಂದೋಲನವನ್ನೇ ಚೂರುಚೂರು ಮಾಡಿಬಿಟ್ಟರಲ್ಲ!
ಇನ್ನು ಕೇಂದ್ರದ ಮಂತ್ರಿಗಳಲ್ಲಿ ಒಬ್ಬರಾದರೂ ಗೌರವ ಪಡೆಯಬಲ್ಲವರಿದ್ದಾರಾ? ವಿಮಾನಗಳ ಎಕಾನಮಿ ದರ್ಜೆಯನ್ನು ‘ದನಗಳ ದೊಡ್ಡಿ’ ಎಂದ ಶಶಿ ತರೂರ್ರಿಂದ ಹಿಡಿದು, ಬಿಜೆಪಿ, ಸಂಘ ನಡೆಸುವ ಕ್ಯಾಂಪ್ನಲ್ಲಿ ಹಿಂದು ಉಗ್ರವಾದಿಗಳು ತಯಾರಾಗುತ್ತಾರೆನ್ನುವ ಶಿಂಧೆಯವರೆಗೂ ಒಬ್ಬೊಬ್ಬರೂ ನಮೂನಾಗಳೇ. ಗೃಹ ಸಚಿವರಂತೂ ತಾವು ಮಾಡಿದ ಆರೋಪಕ್ಕೆ ಆಧಾರವೇ ಇರಲಿಲ್ಲವೆಂದು ಕ್ಷಮೆ ಕೇಳಿದ್ದಂತೂ ಅಸಹ್ಯಕರವಾಗಿತ್ತು. ಆಧಾರವೇ ಇಲ್ಲದೆ ಮಾಡಿದ ಈ ಆರೋಪಕ್ಕೆ ಪಾಕಿಸ್ತಾನ ಬಲು ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದು ದೇಶದ್ರೋಹವಲ್ಲವೇನು? ಕಾಶ್ಮೀರದಲ್ಲಿ ಪೊಲೀಸರ ಹತ್ಯೆಯಾದಾಗ ಸರ್ಕಾರ ಕೈಗೊಂಡ ಕ್ರಮ ವಿವರಿಸಬೇಕಿದ್ದ ಶಿಂಧೆ, ಪತ್ರಿಕಾ ವರದಿಯನ್ನೇ ಹೇಳಿಕೆಯೆಂಬಂತೆ ಎರಡೆರಡು ಬಾರಿ ಓದಿ ಛೀಮಾರಿಗೆ ಗುರಿಯಾಗಿದ್ದರು. ವಿದೇಶಾಂಗ ಸಚಿವರೊಬ್ಬರು ಪರದೇಶೀಯರ ಕಡತ ಓದಿದ್ದರ ಪರಂಪರೆ ನೆನಪಿಸಬೇಕಿತ್ತಲ್ಲ!
ಎಲ್ಲ ಬಿಡಿ, ಹತ್ತು ವರ್ಷಗಳ ಅಽಕಾರದತ್ತ ದಾಪುಗಾಲಿಡುತ್ತಿರುವ ಯುಪಿಎ ಕುರಿತಂತೆ ಮಿತ್ರಪಕ್ಷಗಳಿಗೇ ಸಂತಸವಿಲ್ಲ. ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಯಾದವರು ‘ಕಾಂಗ್ರೆಸ್ಸು ಅಽಕಾರ ನಡೆಸುತ್ತಿರೋದು ಸಿಬಿಐ ಮತ್ತು ತೆರಿಗೆ ಅಽಕಾರಿಗಳ ಚಾಟಿಯಿಂದ’ ಅಂತ ನೇರ ಆರೋಪ ಮಾಡಿದ್ದರು. ಪುಟಿಯುತ್ತಿದ್ದ ಡಿಎಂಕೆಯನ್ನು ಮಟ್ಟ ಹಾಕಲೆಂದು ಕರುಣಾನಿಽಯ ಮುದ್ದಿನ ಮಗಳನ್ನೇ ಜೈಲಿಗೆ ತಳ್ಳಲಾಯಿತು. ರೆಡ್ಡಿ ಸಹೋದರರು ಕಾಂಗ್ರೆಸ್ಸಿನ ವಿರುದ್ಧ ಬೆಳೆಯುತ್ತಿರುವ ಅನುಮಾನ ಬಂದೊಡನೆ ಸಿಬಿಐ ದಾಳಿಯಾಯಿತು. ತಿರುಗಿಬಿದ್ದ ಜಗನ್ ಜೈಲು ಸೇರಿದರು. ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ‘ನಾವು ಸ್ವತಂತ್ರರಲ್ಲ, ಸರ್ಕಾರದ ಅಂಗಗಳು’ ಎಂದು ಹೇಳಿ ನ್ಯಾಯಾಲಯಕ್ಕೂ ಅಚ್ಚರಿ ಉಂಟುಮಾಡಿಬಿಟ್ಟರು. ಹೇಳಿ, ಸರ್ಕಾರ ನಡೆಸುವ ಯೋಗ್ಯತೆ ಇದೆಯಾ ಇವರಿಗೆ?
ಎಲ್ಲಕ್ಕಿಂತಲೂ ನೋವಿನ ಸಂಗತಿ ಏನು ಗೊತ್ತೇ? ಚೀನಾ ೧೯ ಕಿ.ಮೀ. ನುಗ್ಗಿ ಬಂದು ೧೯ ದಿನ ಕಳೆಯಿತು. ನಾಯಕರೆಲ್ಲ ನಿಸ್ತೇಜರಾದಂತಿದ್ದಾರೆ. ಬಲು ಹಿಂದೆಯೇ ಚೀನಾ, ಪಾಕ್, ಶ್ರೀಲಂಕಾ, ಭೂತಾನ್, ಬಾಂಗ್ಲಾಗಳೊಳಕ್ಕೆ ಕೈಚಾಚಿ ನಮ್ಮ ಕತ್ತು ಹಿಸುಕುತ್ತಲೇ ಬಂತು. ಇಲ್ಲಿನ ಕಮ್ಯುನಿಸ್ಟರಿಗೆ ಬಿಸ್ಕತ್ತುಗಳನ್ನು ಹಾಕಿ ಆಂತರಿಕ ಕೋಲಾಹಲ ಸದಾ ಇರುವಂತೆ ನೋಡಿಕೊಂಡಿತ್ತು. ಆಗಲೇ ನಾವು ಜಪಾನ್, ಉತ್ತರ ಕೊರಿಯಾ, ವಿಯೆಟ್ನಾಂ, ಮ್ಯಾನ್ಮಾರ್, ರಷ್ಯಾಗಳಲ್ಲಿ ನಮ್ಮ ಕೈ ಚಾಚಿದ್ದರೆ ಚೀನಾ ಬಾಲ ಮುದುರಿಕೊಂಡು ಬಿದ್ದಿರುತ್ತಿತ್ತು. ದುರ್ದೈವ ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್ರೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಣಾಕ್ಷತನ ತೋರೋದು ಬಿಟ್ಟು ಅಣ್ಣಾ, ಬಾಬಾ ಹಾಗೂ ಇಲ್ಲಿನ ರಾಜಕೀಯ ನಾಯಕರುಗಳ ಹಿಂದೆ ಬಿದ್ದಿದ್ದರು.
ಕಳೆದೊಂದು ದಶಕದಲ್ಲಿ ಶ್ರೀಲಂಕಾ, ಬಾಂಗ್ಲಾ, ಇಟಲಿಯಂತಹ ದೇಶಗಳೂ ನಮ್ಮನ್ನು ಗುರಾಯಿಸುವಂತಾಗಿಬಿಟ್ಟಿವೆ. ಸ್ವಾಭಿಮಾನದ ಕಿಚ್ಚು ಧಗಧಗನೆ ಉರಿಯುತ್ತಿದೆ. ಇಷ್ಟಾದರೂ ಸೋನಿಯಾ-ರಾಹುಲ್-ಮನಮೋಹನ್ ಸಿಂಗ್ ಮತ ಯಾಚಿಸುತ್ತಾರಲ್ಲ. ಅದೇ ನನಗೆ ಅಚ್ಚರಿ!