ವಿಭಾಗಗಳು

ಸುದ್ದಿಪತ್ರ


 

ತೋಯಿಸಿದ ಮಳೆ ಕಲಿಸಿದ ಪಾಠಗಳು..

ಇಡಿಯ ಚೆನ್ನೈ ವಿಚಾರದಲ್ಲಿ ಅಪಹಾಸ್ಯಕ್ಕೆ ಒಳಗಾಗಿದ್ದು ಹವಾಮಾನ ಇಲಾಖೆ. ಅವರು ಮಳೆಯಾಗುತ್ತದೆಂದು ಯಾವಾಗ ಮುನ್ಸೂಚನೆ ಕೊಟ್ಟರೋ ಆಗೆಲ್ಲ ಸೂರ್ಯ ಪ್ರಖರವಾಗಿ ಮೂಡಿ ಬಂದ. ಅವರು ಮಳೆಯಾಗುವುದಿಲ್ಲವೆಂದಿದ್ದಾರೆಂದು ಜನ ನಿಟ್ಟುಸಿರು ಬಿಟ್ಟಾಗಲೇ ಮತ್ತೆ ಜೋರು ಮಳೆ!

Rains in Chennai

Chennai: People wade through flood waters in rain-hit Chennai on Thursday. PTI Photo (PTI12_3_2015_000383B)

ಚೆನ್ನೈ ಪ್ರವಾಹ. ಕಳೆದ ಸುಮಾರು ಮೂರು ವಾರಗಳಿಂದ ಅದೇ ಸುದ್ದಿ. ಮಳೆ ನಿಲ್ಲದೇ ಸುರಿದ ಪರಿಣಾಮವಾಗಿ ಮನೆ ಮನೆ ನುಗ್ಗಿದ ನೀರು ಬದುಕನ್ನೇ ದುಸ್ತರಗೊಳಿಸಿಬಿಟ್ಟಿತು. ಅನೇಕ ಕಡೆಗಳಲ್ಲಿ ನುಗ್ಗಿದ್ದು ಮಳೆಯ ನೀರಷ್ಟೇ ಅಲ್ಲ. ಇಡಿಯ ಚೆನ್ನೈನ ಕೊಳಕು ನೀರು! ಚರಂಡಿಗಳು ಉಕ್ಕಿ ಹರಿದು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಹರಿದವು. ಯಾವ ಮನೆಯ ಜನ ಅದನ್ನು ಕೊಳಕೆಂದು ಹೊರದಬ್ಬಿದರೋ ಈಗ ಆ ಮನೆಯ ಪ್ರತೀ ಇಂಚನ್ನೂ ಈ ನೀರು ಆವರಿಸಿಕೊಂಡಿತ್ತು. ಚರಂಡಿಯ ಬದಿಯಲ್ಲಿದ್ದವರ, ಕೊಳಕು ನಾಲೆಯ ಪಕ್ಕದಲ್ಲಿದ್ದವರಂತೂ ಅದು ಹೇಗೆ ಬದುಕಿದ್ದಾರೋ ದೇವರೇ ಬಲ್ಲ.

ಕೆಲವು ಮಿತ್ರರೊಂದಿಗೆ ಸೇರಿ ನೀಳಂಕರಿಯ ಭಾಗದಲ್ಲಿ ಅಡ್ಡಾಡುತ್ತಿದ್ದೆ. ಯಾವುದನ್ನು ಊರಿನಲ್ಲಿ ಅಶುದ್ಧವೆಂದು ಜರಿಯುತ್ತಿದ್ದೆವೋ ಅದೇ ಕಡುಗಪ್ಪು ನೀರು ರಸ್ತೆಯಲ್ಲೆಲ್ಲಾ. ಮಳೆ ಬಂದು ನೀರಿಳಿದ ಮೇಲೆ ಈಗ ಪರಿಸ್ಥಿತಿ ತಿಳಿಯಾಗಿದೆಯಲ್ಲ; ಅದೇ ರಸ್ತೆಯ ಆಜೂ ಬಾಜೂ ಅಂಗಡಿಗಳು ತೆರೆಕೊಂಡಿವೆ. ರಸ್ತೆಯ ಬದಿಯಲ್ಲಿಯೇ ಎಣ್ಣೆಯಲ್ಲಿ ಬಜ್ಜಿ ಕರೆದು ಮಾರುತ್ತಾರೆ. ಹೋಟೆಲುಗಳು ಅದ್ಯಾವ ನೀರಿನಿಂದ ಅಡುಗೆ ಮಾಡಿ ಬಡಿಸುತ್ತವೋ ದೇವರೇ ಬಲ್ಲ!

ಇದುವರೆಗಿನ ಸವಾಲು ಒಂದು ಬಗೆಯದ್ದಾಗಿದ್ದರೆ ಈಗ ಬೇರೆಯದ್ದೇ. ಇನ್ನು ಮುಂದೆ ವ್ಯಾಪಕವಾಗಿ ಹರಡಲಿರುವ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಸಾಹಸ ಆಗಬೇಕು. ವೇಗವಾಗಿ ಬೆಳೆಯುತ್ತಿರುವ ಸೊಳ್ಳೆಗಳ ಸಂತಾನ ನಿಯಂತ್ರಣ ಮಾಡಬೇಕಿದೆ. ಹೆಣ್ಣು ಮಕ್ಕಳಿಗೆ ಶುದ್ಧತೆಯ ಪಾಠ ಹೇಳಿಕೊಟ್ಟು ಅಗತ್ಯ ವಸ್ತುಗಳ ಬಳಕೆಗೆ ಪ್ರೇರೇಪಿಸಬೇಕಿದೆ. ಒಟ್ಟಿನಲ್ಲಿ ಸಕರ್ಾರೇತರ ಸಂಸ್ಥೆಗಳು ಕನಿಷ್ಠ ಒಂದು ವರ್ಷ ಇನ್ನು ಮುಂದೆ ಕೆಲಸ ಮಾಡಬೇಕಾಗಿದೆ.

ಆದರೂ ಚೆನ್ನೈ ಮಳೆ ಕಲಿಸಿದ ಪಾಠ ದೇಶ ಮತ್ತು ಜಗತ್ತು ಮುಟ್ಟಿ ನೋಡಿಕೊಳ್ಳುವಂಥದ್ದು. ದೇಶಕ್ಕೆ ನಮ್ಮ ವ್ಯವಸ್ಥೆಯ ಖೋಟಾತನ, ನಗರಗಳ ನಿಮರ್ಾಣದಲ್ಲಿ, ನಿರ್ವಹಣೆಯಲ್ಲಿ ನಮ್ಮ ಸೋಲು, ಎಲ್ಲಕ್ಕೂ ಮಿಗಿಲಾಗಿ ಅಸಹ್ಯಕರ ರಾಜಕೀಯ ಪರಿಸ್ಥಿತಿ. ಇವೆಲ್ಲವೂ ಭಾರತದ ಪಾಲಿಗೆ ಬಲುದೊಡ್ಡ ಕಳಂಕವಾಗಿ ಮುಂದಿನ ಅನೇಕ ವರ್ಷಗಳ ಕಾಲ ಕಾಡಲಿದೆ. ಖುದ್ದು ನಾನೇ ಗಮನಿಸಿದ್ದೇನೆ. ಮಳೆ ಬಂದು ನಗರ-ಹಳ್ಳಿಗಳೆಲ್ಲ ಉಧ್ವಸ್ತಗೊಂಡವಲ್ಲ ಆ ಸಂದರ್ಭದಲ್ಲೂ ಸಕರ್ಾರದಿಂದ ನಡೆಸಲ್ಪಡುವ ಹೆಂಡದಂಗಡಿಗಳು ನಡೆದೇ ಇದ್ದವು. ಬೆಳಗ್ಗೆ ಬೆಳಗ್ಗೆ ಕುಡಿದು ಬರುವ ಗಂಡಸರು, ಅಕ್ಕಿ ಬೇಳೆ ವಿತರಿಸುತ್ತಿರುವ ಸ್ವಯಂ ಸೇವಕರ ವಿರುದ್ಧ ಗಲಾಟೆ ನಡೆಸುತ್ತಾ ರಂಪಾಟ ಮಾಡಿ ಒಂದಕ್ಕೆರಡು ಕಿತ್ತುಕೊಂಡು ಹೋಗುತ್ತಿದ್ದರು. ಹೀಗಾಗಿ ಪೊಲೀಸರ ಸಹಕಾರವಿಲ್ಲದೇ ವಿತರಣೆ ಅಸಾಧ್ಯವೇ ಆಗಿತ್ತು. ಅಮ್ಮನ ಬಂಟರಂತೂ ದೂರದೂರಿನಿಂದ, ಪರರಾಜ್ಯಗಳಿಂದ ಬರುವ ವಸ್ತುಗಳನ್ನು ದಾರಿಯಲ್ಲಿಯೇ ತಡೆದು ತಮ್ಮ ಪ್ರದೇಶಗಳಿಗೊಯ್ದು ಅಲ್ಲಿ ಅದನ್ನು ಅಮ್ಮನ ಹೆಸರಿನಲ್ಲಿ ದಾನಗೈಯ್ಯುತ್ತಿದ್ದರು. ಹೀಗಾಗಿ ಅನೇಕರು ಸ್ಥಳಿಯ ಪುಢಾರಿಗಳ ಸಹಕಾರವನ್ನು ಅನಿವಾರ್ಯವಾಗಿ ಪಡೆಯಬೇಕಾದ್ದು ವೈಚಿತ್ರ್ಯ.

ಇನ್ನು ಚೆಂಬರಂಬಾಕ್ಕಂ ಅಣೇಕಟ್ಟಿನ ನೀರನ್ನು ಏಕಾಏಕಿ ಬಿಡದಿದ್ದರೆ ಈ ಸಮಸ್ಯೆ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ ಎಂಬ ವಾದವೂ ಕೇಳಿಬರುತ್ತಿದೆ. ನಗರ ಪ್ರದೇಶದೊಳಕ್ಕೆ ಏಕಾಏಕಿ ನೀರು ನುಗ್ಗಲು ಅದೂ ಒಂದು ಕಾರಣ ಅಂತಾರೆ. ನೀರಿನ ಪ್ರಮಾಣ ಮಳೆಯೊಂದಿಗೆ ಏರುತ್ತಾ ಹೋಗಲಿಲ್ಲ. ಏಕಾಏಕಿ ಏರಿ ಎಲ್ಲೆಡೆ ಆವರಿಸಿಕೊಂಡುಬಿಡ್ತಲ್ಲ ಅದು ಈ ಕಾರಣದಿಂದಾಗಿಯೇ ಎಂಬುದು ಈಗ ಬರುತ್ತಿರುವ ವರದಿ. ಆದರೆ ಇವುಗಳನ್ನು ಅಧ್ಯಯನ ಮಾಡುವ, ಎಚ್ಚರಿಕೆ ಕೊಡುವ, ವ್ಯವಸ್ಥಯೇ ನಮ್ಮಲ್ಲಿಲ್ಲ ಎಂಬುದನ್ನು ನಾಚಿಕೆಯಿಂದಲೇ ಹೇಳಿಕೊಳ್ಳಬೇಕು! ಇನ್ನು ಒಳಚರಂಡಿ ವ್ಯವಸ್ಥೆಯ ಬಗ್ಗೆಯಂತೂ ಮಾತನಾಡದಿದ್ದರೆ ಒಳಿತು.

ಇಡಿಯ ಚೆನ್ನೈ ವಿಚಾರದಲ್ಲಿ ಅಪಹಾಸ್ಯಕ್ಕೆ ಒಳಗಾಗಿದ್ದು ಹವಾಮಾನ ಇಲಾಖೆ. ಅವರು ಮಳೆಯಾಗುತ್ತದೆಂದು ಯಾವಾಗ ಮುನ್ಸೂಚನೆ ಕೊಟ್ಟರೋ ಆಗೆಲ್ಲ ಸೂರ್ಯ ಪ್ರಖರವಾಗಿ ಮೂಡಿ ಬಂದ. ಅವರು ಮಳೆಯಾಗುವುದಿಲ್ಲವೆಂದಿದ್ದಾರೆಂದು ಜನ ನಿಟ್ಟುಸಿರು ಬಿಟ್ಟಾಗಲೇ ಮತ್ತೆ ಜೋರು ಮಳೆ!

ಒಟ್ಟಾರೆ ಚೆನ್ನೈ ತನ್ಮೂಲಕ ತಮಿಳುನಾಡು ಉಧ್ವಸ್ಥಗೊಂಡಿದೆ. ಈಗಿನ ಸ್ಥಿತಿಯಿಂದ ಸಹಜ ಸ್ಥಿತಿಗೆ ತರಲು ಒಂದು ವರ್ಷವಾದರೂ ಬೇಕು. ಜನರ ಜೀವನವನ್ನು ಸುಧಾರಿತ ಮಟ್ಟಕ್ಕೇರಿಸಲು ಕನಿಷ್ಠ ಮೂರು ವರ್ಷ. ಒಟ್ಟಾರೆ ದೇಶಕ್ಕೆ ಅನೇಕ ಸಾವಿರ ಕೋಟಿಗಳಷ್ಟು ನಷ್ಟ. ಈ ಪ್ರಕೃತಿ ವಿಕೋಪ ದೇಶಕ್ಕೆ ಅನೇಕ ಪಾಠ ಕಲಿಸಿಕೊಟ್ಟಿತು. ನಾವು ಮುಟ್ಟಿನೋಡಿಕೊಳ್ಳಲೇಬೇಕು ಅಂತಹ ಪಾಠಗಳು!

ಅದೇ ವೇಳೆಗೆ ಈ ಹೊತ್ತಿನಲ್ಲಿ ಭಾರತ ಸವಾಲುಗಳನ್ನೆದುರಿಸಿ ನಿಲ್ಲುವ ಪರಿ ಜಗತ್ತನ್ನೇ ಬೆರಗುಗೊಳಿಸಿತು. ಬಹುಶಃ ಜಗತ್ತಿನಲ್ಲಿ ಮೊದಲ ಬಾರಿಗೆ ಪೀಡಿತರಿಗಿಂತ ಹೆಚ್ಚು ಸೇವಕರೇ ಸರತಿಗಟ್ಟಿನಿಂತಿದ್ದರು. ಅನೇಕ ಕಡೆ ಊಟದ ಪೊಟ್ಟಣಗಳನ್ನು ಕೊಡಲು ಹೋದರೆ ಅದಾಗಲೇ ಮತ್ತೊಂದಷ್ಟು ಜನ ಬಂದು ಕೊಟ್ಟು ಹೋಗಿದ್ದಾರೆ ಎಂಬ ಉತ್ತರ ಬರುತ್ತಿತ್ತು. ಕೆಲವು ಕಡೆಗಳಲ್ಲಂತೂ ಮುಂದಿನ ಒಂದು ತಿಂಗಳಿಗಾಗುವಷ್ಟು ಅಕ್ಕಿ ಬೇಳೆ ಅದಾಗಲೇ ಮುಟ್ಟಿದೆ. ಪರಿಸ್ಥಿತಿ ಹೇಗಿದೆಯೆಂದರೆ ಸೇವೆಗೆಂದು ನಿಂತ ಸೇವಕರ ಬಳಿ ಬಿಸ್ಕತ್ತು, ಸಾಂಬಾರ ಪುಡಿ, ನೀರು ರಾಶಿ ರಾಶಿ ಇದೆ. ಅಗತ್ಯ ಮಾತ್ರ ಯಾರಿಗೂ ಇಲ್ಲ. ಜಾತಿ-ಮತ-ಪಂಥಗಳೆಂದು ಬೇರೆ ಸಂದರ್ಭದಲ್ಲಿ ಬಡಿದಾಡುತ್ತಿದ್ದವರೂ ಕೂಡ ಈಗ ಪರಮ ಶಾಂತ ಸ್ಲಂಗಳಿಗೆ ಎಗ್ಗಿಲ್ಲದೇ ನುಗ್ಗಿ ಊಟ-ತಿಂಡಿ-ಬಟ್ಟೆ ಕೊಡುವುದರಲ್ಲಿ ಎಲ್ಲ ಮುಂದೆ. ಆಹ್! ಅದೊಂದು ಮೋಹಕ ದೃಶ್ಯ.

ಶರವಣ ನಗರದ ಆರೇಳು ಅಪಾಟರ್್ಮೆಂಟಿನ ಸುಮಾರು ಇನ್ನೂರು ಮನೆಗಳ ಜನ ಮಳೆ ಶುರುವಾದ ದಿನವೇ ಸಭೆ ಸೇರಿದರು. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಇಪ್ಪತ್ತು ಜನರಿಗಾಗುವಷ್ಟು ಅಡುಗೆಯನ್ನು ಪ್ರತಿಯೊಬ್ಬರೂ ಮನೆಯಲ್ಲಿಯೇ ಮಾಡಬೇಕೆಂದು ನಿಶ್ಚಯಿಸಿದರು. ಅದನ್ನು ಎದುರಿಗೆ ಮಳೆಯೊಳಗೆ ಮುಳುಗಿ ಹೋಗಿದ್ದ ಸ್ಲಂ ಜನರಿಗೆ ಐದು ದಿನಗಳ ಕಾಲ ಖುದ್ದು ಹೋಗಿ ಕೊಟ್ಟರು! ಸುಮಾರು 20 ಸಾವಿರ ಜನರಿಗೆ ಸ್ವಯಂ ಪ್ರೇರಿತರಾಗಿಯೇ ಊಟ ಬಡಿಸಿದ ಕೀತರ್ಿ ಅವರದ್ದು. ಅವರ ಈ ಕಾರ್ಯ ಎಲ್ಲಯೂ ಸುದ್ದಿಯಾಗಲಿಲ್ಲ. ಅದಕ್ಕಾಗಿ ಮಾಡಿದವರೂ ಅಲ್ಲ ಅವರು ಬಿಡಿ!

Flood in Chennai

Chennai: NDRF volunteers distributing free milk packets to residents of Kotturpuram, one of the worst flood-hit localities in Chennai on Saturday. PTI Photo (PTI12_5_2015_000177B)

ಮಹಾಬಲಿಪುರಂ ಬಳಿ ಭಾವನಾ ಎಂಬ ಮಹಿಳೆ. ಆಕೆಯದು ಬಂಗಲೆಯಂತೆ ವಿಶಾಲವಾದ ಮನೆ. ಕಡು ಬಡವರು, ಮನೆ ಕಳೆದುಕೊಂಡವರಿಗೆ ಸಕರ್ಾರ ಬೇರೆಡೆ ವ್ಯವಸ್ಥೆ ಮಾಡಿತು ಸರಿ; ಮಧ್ಯಮವರ್ಗದವರ ಮನೆಗಳಿಗೆ ನೀರು ನುಗ್ಗಿ ಉಳಿಯಲು ನೆಲೆ ಇಲ್ಲದ ಬಹಳ ಜನ ಇದ್ದರಲ್ಲ. ಅವರೇನು ಮಾಡಬೇಕು? ಅಂತಹವರಿಗಾಗಿ ಆಕೆ ತನ್ನ ಮನೆ ಬಾಗಿಲು ತೆರೆದಿಟ್ಟರು. ಒಂದು ಮನೆಯೊಳಗೆ ಆ ತಾಯಿ 120 ಜನರಿಗೆ ಆಶ್ರಯ ನೀಡಿ ಸಾಧ್ಯವಾದಷ್ಟು ಅವರ ಯೋಗಕ್ಷೇಮವನ್ನು ನೋಡಿಕೊಂಡಳು!

ಚೆನ್ನೈನ ಒಎಂಆರ್ ರಸ್ತೆಯ ಸೀಬ್ರೂಸ್ ಅಪಾಟರ್್ಮೆಂಟಿನಲ್ಲಿದ್ದ ಧರ್ಮ ಶಿವರಾಂ ಮತ್ತವರ ಗೆಳೆಯರು ನೋಡ ನೋಡುತ್ತಿದ್ದಂತೆ ಗ್ರೌಂಡ್ ಫ್ಲೋರಿನ ಮನೆಗಳೊಳಗೆ ನೀರು ತುಂಬಿದವು. ಅಪಾಟರ್್ಮೆಂಟಿನ ಸುತ್ತಲಿನ ಮನೆಗಳು ನೀರಿನಿಂದಾವೃತವಾಗಿಬಿಟ್ಟವು. ಆಂಧ್ರದ ಈ ಗೆಳೆಯರೆಲ್ಲ ಗುಂಪು ಮಾಡಿಕೊಂಡರು. ಸಹಾಯಕ್ಕೆ ನಾವಿದ್ದೇವೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡರು. ಸಹಾಯಕ್ಕಾಗಿ ಕರೆ ಬಂದೆಡೆ ಓಡಿದರು. ಅಕ್ಕಿ, ಬೇಳೆ ಸಂಗ್ರಹಿಸಿದರು, ತಾವೇ ಅಡುಗೆ ಮಾಡಿದರು. ಅವಶ್ಯಕತೆ ಇದ್ದವರಿಗೆ ಒಯ್ದು ತಲುಪಿಸಿದರು. ಸೆಕೆಂಡು, ನಿಮಿಷ, ಗಂಟೆ ಬಿಡಿ ಅವರಿಗೆ ರಾತ್ರಿ ಯಾವುದು? ಬೆಳಿಗ್ಗೆ ಯಾವುದೆಂದು ತಿಳಿಯದಷ್ಟು ಕೆಲಸ. ಅವರಿರುವ ಅಪಾಟರ್್ಮೆಂಟ್ ನಲ್ಲಿ ಕನಿಷ್ಠ 25 ಮಂದಿ. ಮೂರು ಜನ ಹೆಣ್ಣು ಮಕ್ಕಳದು ಇವರಿಗೆ ಅಡುಗೆ ಮಾಡಿ ಹಾಕುವ ಕೆಲಸ. ಬಂದ ಸರಕನ್ನು ವಿಂಗಡಿಸಿ ಕವರ್ಗಳಿಗೆ ತುಂಬಿಸಿ ಗಾಡಿಗೇರಿಸಿ ಒಯ್ದು ಸೂಕ್ತ ಜಾಗಗಳಿಗೆ ತಲುಪಿಸುವ ಕೆಲಸ ಮತ್ತೊಂದಷ್ಟು ಕಾರ್ಯಕರ್ತರದ್ದು!

ಇವೆಲ್ಲವನ್ನೂ ನೋಡುವಾಗ ನಮ್ಮ ದೇಶದ ಶ್ರೇಷ್ಠತೆ ಏನೆಂಬುದು ಅರಿವಿಗೆ ಬರುತ್ತದೆ. ಬಹುಶಃ ಇಡಿಯ ಜಗತ್ತಿಗೆ ಇದು ಕಲಿಯಬಹುದಾದ ಪಾಠ. ಒಂದು ಸುಂಟರಗಾಳಿ ಅಮೇರಿಕಾದ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಬಲ್ಲುದು. ನಿರಂತರ ಮೂರು ದಿನ ಸುರಿಯುವ ಮಳೆ ಯೂರೋಪನ್ನು ಅಲ್ಲೋಲ ಕಲ್ಲೋಲ ಮಾಡಬಲ್ಲುದು. ಆದರೆ ಭಾರತ ಮಾತ್ರ ಈ ರೀತಿಯ ಸವಾಲುಗಳು ಎದುರಾದಾಗ ಇನ್ನೂ ಬಲಾಢ್ಯವಾಗುತ್ತದೆ. ಕೈ ಕೈ ಸೇರಿಸಿ ಭ್ರಾತೃತ್ವದ ಗೀತೆ ಹಾಡುತ್ತದೆ. ಭಾರತ ವಿಶ್ವಗುರು ಎನ್ನುವುದು ಸುಮ್ಮನೇ ಅಲ್ಲ!

 

Comments are closed.