ವಿಭಾಗಗಳು

ಸುದ್ದಿಪತ್ರ


 

ಮರೆಯಲಾಗದ ಜನವರಿ 2016!

18

ಹೊಸ ಕ್ಯಾಲೆಂಡರ್ ಬಂದಂತೆ ಹೊಸತನದ ತುಡಿತವೂ ಸಹಜವೇ. ಯಾರು ಹೇಗೋ ಗೊತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಡಿಸೆಂಬರ್ 31ಕ್ಕೆ ಕಷ್ಟಪಟ್ಟಾದರೂ ಬೇಗ ಮಲಗಿ ಬಿಡುತ್ತೇನೆ, ಯಾರ ಕಿರಿಕಿರಿಯೂ ಇರದಿರಲಿ ಅಂತ!
ಬಿಡಿ. ಅದು ಸಂಸ್ಕೃತಿಗಳ ತಾಕಲಾಟ ನಮ್ಮನ್ನು ಆವರಿಸಿರುವ ಪರಿ. ಆದರೆ ನಾನು ಹೇಳ ಹೊರಟಿದ್ದು ಅದಲ್ಲ. 2016ರ ಜನವರಿ ಬಹುಶಃ ಜೀವಮಾನದ ಶ್ರೇಷ್ಠ ತಿಂಗಳು ನನ್ನ ಪಾಲಿಗೆ. ಗೊಂದಲಗಳು, ಆರೋಪಗಳು, ಕಿರಿಕಿರಿಗಳು ಒಂದೆಡೆ ಜೀವವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆನಿಸಿದರೆ; ನಂಬಿದ ದೈವ ದಿವ್ಯತ್ರಯರು ಮತ್ತೆ ಮತ್ತೆ ಕಾಪಾಡುವ ಶಕ್ತಿಯಾಗಿ ನಿಲ್ಲುವುದನ್ನು ಅನುಭವಕ್ಕೆ ತಂದರಲ್ಲ.. ಓಹ್ ಅದ್ಭುತ. ನಿಸ್ವಾರ್ಥ ಮತ್ತು ಪ್ರಾಮಾಣಿಕತೆಗಳು ಅಸಾಧ್ಯವಾದುದನ್ನೂ ಸಾಧಿಸಬಲ್ಲವೆಂಬುದನ್ನು ಈ ಜನವರಿ ನನಗಂತೂ ಕಲಿಸಿತು. ಕಲಿತ ಪಾಠ ಮತ್ತೊಬ್ಬರಿಗೆ ಹೇಳದಿದ್ದರೆ ‘ಸ್ವಾಧ್ಯಾಯ ಪ್ರವಚನಾಭ್ಯಾಂ ನ ಪ್ರಮದಿತವ್ಯಂ’ ಎಂಬ ಋಷಿವಾಕ್ಯಕ್ಕೆ ದ್ರೋಹ ಬಗೆದಂತೆ!
ಡಿಸೆಂಬರ್ ಮಧ್ಯಭಾಗದಲ್ಲಿ ಒಂದಷ್ಟು ಜನ ಕ್ರಿಶ್ಚಿಯನ್ನರ ಕುರಿತ ಹೇಳಿಕೆಯ ಹಿಂದೆ ಬಿದ್ದು ನನ್ನ ಪೀಡಿಸಲಾರಂಭಿಸಿದರು. ನಾನು ಹೇಳಿರುವ ಮಾತು ಅದರ ಹಿಂದಿರುವ ಉದ್ದೇಶವನ್ನೂ ಅರಿಯದೆ ಮನಸಿಗೆ ಬಂದಂತೆ ಅರಚಿದರು. ನಾನೂ ಸುಮ್ಮನಿದ್ದೆ. ಜನವರಿ ಆರಂಭವಾಗುವುದರೊಳಗೆ ಯೇಸು ಕ್ರಿಸ್ತನ ಅನುಯಾಯಿಗಳು ನಾನು ವಿಜಯವಾಣಿಯಲ್ಲಿ ಬರೆದ ಲೇಖನಕ್ಕೆ ನ್ಯಾಯಾಲಯದ ನೋಟೀಸ್ ಕಳಿಸಿ ಹೆದರಿಸುವ ಯತ್ನ ಮಾಡಿದರು. ಒಬ್ಬರಂತೂ ಈ ಮೇಲ್ ಕಳಿಸಿ ‘ಭಗವಂತನ ಕುರಿತು ಬರೆದದ್ದಕ್ಕೆ ಕೋಪಕ್ಕೆ ಪಾತ್ರರಾಗುವಿರಿ’ ಎಂದು ಮತಾಂತರಕ್ಕೆ ಬರುವ ಪಾದ್ರಿಯ ಭಾಷೆಯಲ್ಲೇ ಹೆದರಿಸಿದರು. ಆಗೆಲ್ಲ ನನಗೆ ನಗು. ನಾನು ಯಾರಿಗೆ ಉತ್ತರಿಸಲಿ? ನೋಟೀಸು ಕಳಿಸಿರುವ ಕ್ರಿಶ್ಚಿಯನ್ನರಿಗೋ, ಅವರ ಹೆಸರಿನಲ್ಲಿ ಮುರಕೊಂಡು ಬಿದ್ದ ನಮ್ಮವರಿಗೋ!
ಈ ನಡುವೆಯೇ ಯೇಸುವಿನ ಅನುಯಾಯಿಯ ಮಾತು ಸತ್ಯವಾಗಿಸುವ ಘಟನೆಗಳು ನಡೆದೇ ಬಿಟ್ಟವು. ಮಂಗಳೂರಿನಲ್ಲಿ ಜಾಕೀರ್ ನಾಯ್ಕರ ಕಾರ್ಯಕ್ರಮ ನಿಶ್ಚಿತವಾದ ಮರುದಿನವೇ ಫೈಜ್ ಖಾನ್ರನ್ನು ಕರೆಸಿ ಉತ್ತರ ಕೊಡಿಸುವ ಸಂಕಲ್ಪ ಮಾಡಿದ್ದೆವು. ನಮ್ಮ ಕಾರ್ಯಕ್ರಮ ನಿಗದಿಯಾಯಿತು, ಆದರೆ ಜಾಕಿರ್ ನಾಯ್ಕರದು ರದ್ದಾಯ್ತು. ಈ ಹಂತದಲ್ಲಿಯೇ ಜಾಕೀರ್ ನಾಯ್ಕರ ಕಾರ್ಯಕ್ರಮ ವಿರೋಧಿಸಿದ, ಎಲ್ಲರೂ ಪ್ರೀತಿಯಿಂದ ಬದುಕಬೇಕೆಂದು ಬಯಸುವ ಮುಸಲ್ಮಾನ ಮಿತ್ರರನ್ನು ಅಂದೇ ಕರೆಸಿ ಫೈಜ್ಖಾನ್ರೆದುರು ಚಚರ್ೆಗೆ ಕೂರಿಸಬೇಕೆಂದು ಬಲು ಹಿಂದೆಯೇ ಯೋಜನೆ ರೂಪಿಸಿದ್ದೆವು. ಅಂದುಕೊಂಡಂತೆ ಆಯಿತು. ಸ್ವತಃ ನಾನು ಆಗಮಿಸಿದ್ದನ್ನು ಕಂಡು ಮುಸ್ಲೀಂ ತರುಣರಿಗೆ ಗಾಬರಿ. ಒಳಗೆ ಬರುವುದಿಲ್ಲವೆಂದು ಕೆಲವರು ಹಠ ಮಾಡಿದರು. ಆಮೇಲೆ ಒತ್ತಾಯಕ್ಕೆ ಕುಳಿತರು. ಮಾತುಕತೆ ಶುರುವಾಯ್ತು. ಅನುಮಾನದಿಂದಲೇ ಇದ್ದ ಗೆಳೆಯರ ಹೃದಯಗಳು ತೆರೆದುಕೊಂಡವು. ಭಾರತ ಜಗದ್ವಂದ್ಯವಾಗಬೇಕೆಂಬುದರಲ್ಲಿ ಅವರ್ಯಾರಿಗೂ ಅನುಮಾನವಿರಲಿಲ್ಲ. ಹೃದಯಕ್ಕೆ ತಂಪೆರೆದ ಮಾತುಕತೆ ಅದು. ಎರಡು ವರ್ಷಗಳಲ್ಲಿ ಈ ರೀತಿ ಬಯಕೆ ಇರುವವರೆಲ್ಲ ಒಟ್ಟಾಗಿ ಹಿಂದೂ-ಮುಸಲ್ಮಾನರು ಕೂಡಿ ಮಾಡುವ ಭಾರತ ಉತ್ಸವಕ್ಕೆ ಸಜ್ಜಾಗುವ ಸಂಕಲ್ಪದೊಂದಿಗೆ ಬಿಳ್ಕೊಟ್ಟೆವು.
ಆ ಚಿತ್ರಗಳು ಫೇಸ್ ಬುಕ್ಕಿನಲ್ಲಿ ಅಡ್ಡಾಡುತ್ತಿದ್ದಂತೆ ಮಲಗಿದ್ದ ಆತ್ಮಗಳು ಜಾಗೃತಗೊಂಡವು. ನಮ್ಮನ್ನು ಢೋಂಗೀ ಎಂದವು. ಅವಕಾಶವಾದಿ ಎಂದವು. ನಾನು ಉತ್ತರಿಸಲೇ ಇಲ್ಲವೆಂದಾಗ ಮೈ ಪರಚಿಕೊಂಡವು!
ಇಷ್ಟಕ್ಕೂ ಮುಸಲ್ಮಾನರನ್ನು ಓಲೈಸಿ ಆಗಬೇಕಾದ್ದೇನಿದೆ? ನಾನು ಚುನಾವಣೆಗೆ ಬರಲಾರೆನೆಂಬುದನ್ನು ಅದೆಷ್ಟು ಬಾರಿ ಪುನರುಚ್ಚರಿಸಿದ್ದೇನೋ ದೇವರೇ ಬಲ್ಲ. ಕಳೆದ ಬಾರಿ ಮನೆ ಬಾಗಿಲವರೆಗೆ ಬಂದಿದ್ದ ಎಂ.ಪಿ. ಟಿಕೇಟನ್ನು ಧಿಕ್ಕರಿಸಿದ್ದನ್ನೂ ಅನೇಕರು ಬಲ್ಲರು. ಅಷ್ಟೇ ಅಲ್ಲ. ಇನ್ನೊಂದೆರೆಡು ಬಾರಿ ಉಗ್ರ ಹಿಂದೂ ಭಾಷಣ ಮಾಡಿದರೆ ಹೆಚ್ಚು-ಹೆಚ್ಚು ಅನುಯಾಯಿಗಳನ್ನು ಪಡಕೊಳ್ಳುವ ಅವಕಾಶವಿದ್ದಾಗ್ಯೂ ಮುಸಲ್ಮಾನರೊಂದಿಗೆ ಮಾತುಕತೆ ನಡೆಸುವ ದದರ್ೇಕೆ ಎಂಬುದನ್ನು ವಿಶ್ಲೇಷಿಸುವ ಮನಸ್ಸೂ ಯಾರಿಗೂ ಇರಲಿಲ್ಲ.
ಕೆಲವರಿಗೆ ಅವರ ಹೋರಾಟಕ್ಕೆ ನಾನು ಬೆಂಬಲ ಕೊಡಲಿಲ್ಲವೆಂಬ ಕೋಪ; ಇನ್ನೂ ಕೆಲವರಿಗೆ ಅವರು ಕರೆದಾಗ ಕಾರ್ಯಕ್ರಮಕ್ಕೆ ಬರಲಿಲ್ಲವೆಂಬ ಆಕ್ರೋಶ. ಇವರಿಬ್ಬರೊಂದಿಗೆ ಯುವಾ ಬ್ರಿಗೇಡಿನ ಬೆಳವಣಿಗೆ ಸಹಿಸಲಾಗದೇ ಸಿಕ್ಕ ಅವಕಾಶದಲ್ಲಿ ತದುಕಿಬಿಡುವ ಆಸೆಯೊಂದಿಗೆ ಒಂದಷ್ಟು ಜನ ಸೇರಿಕೊಂಡರು. ಇಷ್ಟೂ ಸೇರಿದರೂ ಸಂಖ್ಯೆ ನೂರು ದಾಟಲಿಲ್ಲ! ಒಂದಷ್ಟು ಜನ ಚಳಿಯಲ್ಲಿ ಮೈ ಕಾಯಿಸಿಕೊಂಡುಬಿಟ್ಟರು!
ನನಗಾದ ಲಾಭ ಒಂದೇ. ಒಬ್ಬೊಬ್ಬರನ್ನೇ ಫೇಸ್ ಬುಕ್ಕಿನಿಂದ ಆಚೆ ದಬ್ಬಿದೆ. ನನ್ನ ಮಿತ್ರರೂ ಅನುಸರಿಸಿದರು. ಸ್ವಚ್ಛ ಫೇಸ್ ಬುಕ್ ಆಯಿತು!
ಈ ನಡುವೆ ಜನವರಿ ತಿಂಗಳ ಆರಂಭದ ಮೂರು ದಿನ ರಾಮಕೃಷ್ಣಾಶ್ರಮದಲ್ಲಿ ನನ್ನ ಉಪನ್ಯಾಸ. ಗೋಖಲೆಯ ವೇದಿಕೆ ಬಿಟ್ಟರೆ ನಾನು ಅತ್ಯಂತ ಭಯ ಭಕ್ತಿಯಿಂದ ಆರಾಧಿಸುವ ವೇದಿಕೆ ಅದು. ಫೇಸ್ ಬುಕ್ಕಿನ ಅವಾಂತರಗಳ ಕಡೆಗೆ ಕಣ್ನು ಹಾಯಿಸಲೂ ಪುರುಸೊತ್ತು ಸಿಗದಷ್ಟು ದಿವ್ಯತ್ರಯರ ಪುಸ್ತಕಗಳಲ್ಲಿ ಲೀನವಾಗಿಬಿಟ್ಟಿದ್ದೆ. ಸ್ವಾಮಿ ಸ್ವಾತ್ಮಾರಾಮಾನಂದ ಜೀ ಅಮೇರಿಕದಿಂದ ತರಿಸಿಕೊಟ್ಟ ಶಾರದಾಮಾತೆಯವರ ಪುಸ್ತಕವಂತೂ ಅದೆಷ್ಟು ಬಾರಿ ನನ್ನನ್ನು ಕಣ್ಣೀರಿನ ಕೋಡಿಯೊಳಗೆ ಮುಳುಗಿಸಿತೋ ದೇವರೇ ಬಲ್ಲ.
ಕೊಲಂಬೋದಿಂದ ಆಲ್ಮೋರಕ್ಕೆ ಕೃತಿಯಲ್ಲಂತೂ ಸ್ವಾಮಿ ವಿವೇಕಾನಂದರು ‘ಧರ್ಮ ಜಾಗೃತಿ ಮತಾಂಧತೆಯೆಡೆ ತಿರುಗುವ ಸಾಧ್ಯತೆ ಇದೆ ಎಚ್ಚರಿಕೆ’ ಎಂದು ಹೇಳಿದ್ದು ನನ್ನ ಚಟುವಟಿಕೆಗೆ ಬಲ ತುಂಬಿತ್ತು. ಅಲ್ಲದೇ ಮತ್ತೇನು. ಭವಿಷ್ಯ ಭಾರತದ ಕಲ್ಪನೆಗಳಿಲ್ಲದೇ ತಮ್ಮ ಮೂಗಿನ ನೇರಕ್ಕೇ ಯೋಚಿಸುವವರು ಅತಿ ಧರ್ಮ ಜಾಗೃತಿಯ ಸಮಸ್ಯೆಗೆ ಸಿಲುಕಿದವರೇ.
ಕೆಲವರ ಅಪಪ್ರಚಾರ ನಿಜಕ್ಕೂ ಜನರಲ್ಲಿ ಗೊಂದಲವುಂಟುಮಾಡಿದೆಯಾ? ನನಗೆ ಅನುಮಾನ ಶುರುವಾಗಿದ್ದು ಈ ಮೂರು ದಿನಗಳ ಉಪನ್ಯಾಸದ ನಂತರವೇ. ಜನವರಿ ಒಂಭತ್ತು-ಹತ್ತರಂದು ಹೊಸನಗರ ಮತ್ತು ಅರಳಸುರುಳಿಯ ಕಾರ್ಯಕ್ರಮಗಳು ಆ ಅನುಮಾನವನ್ನು ಹೋಗಲಾಡಿಸಿದವು. ಜನ ಕಿಕ್ಕಿರಿದು ಸೇರಿದ್ದರು. ಎಂದಿನಂತೆ ಪ್ರೀತಿಸಿದರು. ನಿರಾಳವಾಯ್ತು. ಫೇಸ್ ಬುಕ್ಕಿನ ಯೋಗ್ಯತೆ ನೆಲದ ಮಟ್ಟಿನ ಕೆಲಸ ಮೀರಲಾರದೆಂಬುದು ಅನುಭಕ್ಕೆ ಬಂತು.
ಆಮೇಲೇನು? ಬಳ್ಳಾರಿ, ರಾಯಚೂರು, ಗದಗ್ ಪ್ರವಾಸಗಳು! 1965ರ ಯುದ್ಧದ ಕಥನ ಕೇಳಲು ಸಿಂಧನೂರಿನಲ್ಲಿ ನೆರೆದ 10 ಸಾವಿರ ಜನ, ಗದಗಿನಲ್ಲಿ ವಿಶ್ವಗುರು ಕಲ್ಪನೆಗೆ ಕಿವಿಯಾದ ಏಳೆಂಟು ಸಾವಿರ ಜನ ನನ್ನ ಆತ್ಮಶಕ್ತಿಗೆ ಬೆಂಬಲವಾಗಿ ನಿಂತಿದ್ದರು. ಮೈಸೂರಿನಲ್ಲಿ ಸಾಂಸ್ಕೃತಿಕ ಆಕ್ರಮಣಗಳ ಕುರಿತಂತೆ ಮಾತನಾಡಲು ನಿಂತಿದ್ದಾಗ ಎದುರಿಗಿದ್ದ ಶಿಕ್ಷಿತ ವರ್ಗ ನನ್ನ ಪಾಲಿಗೆ ಸವಾಲಾಗಿತ್ತು.
ಓಹ್! ರಾಮಕೃಷ್ಣರ ಕೃಪೆಗೆ ಏನೆನ್ನಬೇಕು? ಒಂದೇ ವಾರದಲ್ಲಿ ಹಳ್ಳಿಯ ಕೂಲಿ ಕಾಮರ್ಿಕನಿಂದ ಹಿಡಿದು ಪಟ್ಟಣದ ಬುದ್ಧಿವಂತ ಪ್ರೊಫೆಸರ್ ವರೆಗೆ ಎಲ್ಲರೂ ನನ್ನೊಂದಿಗೆ ಬೆರೆಯುವಂತಾಯ್ತು.
ಅಷ್ಟೇ ಅಲ್ಲ. ಜಗತ್ತಿನಾದ್ಯಂತ ತಮ್ಮ ಪ್ರಖರ ಬರಹ ಧಾರೆಯಿಂದ ಹಿಂದೂ ಶಕ್ತಿಗೆ ಬೆಂಗಾವಲಾಗಿ ನಿಂತ ರಾಜೀವ್ ಮಲ್ಹೋತ್ರಾರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ದೊರೆತದ್ದೂ ಈ ತಿಂಗಳ ವಿಶೇಷವೇ. ಈ ಇಡಿಯ ಕಾರ್ಯಕ್ರಮ ಯುವಾ ಬ್ರಿಗೇಡಿನ ಕಿರೀಟಕ್ಕೊಂದು ಗರಿ. ಅವರ ಬಹು ನಿರೀಕ್ಷೆಯ ‘Battle For Samskrita’ ಮೊದಲ ಬಾರಿಗೆ ಲಭ್ಯವಾದದ್ದು ನಮ್ಮ ಕಾರ್ಯಕ್ರಮದಲ್ಲಿಯೇ ಎಂಬುದು ನಮ್ಮ ಪಾಲಿನ ಹೆಮ್ಮೆ! ಹಹ್ಹ. ಹಿಂದೂತ್ವದ ಝಂಡಾ ಹಾರಿಸಿ ತಮ್ಮ ತಾವು ‘ಕೇಸರೀ’ ಎಂದು ಕರಕೊಳ್ಳುವ ಅನೇಕರಿಗೆ ರಾಜೀವ್ ಮಲ್ಹೋತ್ರಾ ಗೊತ್ತಿರಲಿಕ್ಕಿಲ್ಲ! LOL!
ಬಿಡಿ. ನಮ್ಮ ಗುರಿ, ಮಾರ್ಗ ಸ್ಪಷ್ಟವಾಗಿರಬೇಕು. ಆಗ ಸುತ್ತಲೂ ಕಿರಿಕಿರಿಯಾದರೂ ನಿಲ್ಲುವ ಪ್ರಮೇಯವೇ ಇಲ್ಲ. ಇಷ್ಟಕ್ಕೂ ‘ನೀವು ಸಾಗುವ ಮಾರ್ಗದಲ್ಲಿ ಅಡೆತಡೆಗಳೆಷ್ಟಿವೆಯೋ ಅಷ್ಟರಮಟ್ಟಿಗೆ ನೀವು ಸರಿಯಾದ ಮಾರ್ಗದಲ್ಲಿದ್ದೀರಿ ಅಂತರ್ಥ’ ಎಂದಿದ್ದಾರಲ್ಲವೇ ವಿವೇಕಾನಂದರು. ಹೀಗಾಗಿಯೇ ನಮಗೆ ಧೈರ್ಯ.
ಅಂದಹಾಗೆ ಇದೇ ಜನವರಿಯಲ್ಲಿಯೇ ನನ್ನ ಅತ್ಯಂತ ಮಹತ್ವಾಂಕ್ಷೆಯ ‘ವಿಶ್ವಗುರು’ ವಿಶೇಷ ಕಾರ್ಯಕ್ರಮ ಅನಾವರಣಗೊಂಡಿದ್ದು. ಮೂರ್ನಾಲ್ಕು ಸಾವಿರ ಜನ ಈ ಚೊಚ್ಚಲ ಪ್ರಯೋಗಕ್ಕೆ ಕಿಕ್ಕಿರಿದು ತುಂಬಿ ಬೆನ್ತಟ್ಟಿ ಹೋಗುವಾಗ ತಿಂಗಳ ಆರಂಭದ ಕಿರಿಕಿರಿಗಳೆಲ್ಲ ಕಳೆದೇ ಹೋಗಿದ್ದವು! ತಿಂಗಳ ಕೊನೆಗೆ ಮಿತ್ರ ಸುನೀಲ್ ಮಿಶ್ರಾನ ವಿದ್ಯಾಥರ್ಿಗಳ ಪೇಂಟಿಂಗ್ಗಳನ್ನು ಚಿತ್ರಕಲಾ ಪರಿಷತ್ನಲ್ಲಿ ಪ್ರದಶರ್ಿಸುವಾಗ ‘ಇದು ದೇಶದ ಅತ್ಯಂತ ವಿಶಿಷ್ಟ ಪ್ರಯೋಗ’ ಎಂದು ಎಲ್ಲರೂ ಕಣ್ಣರಳಿಸಿದರಲ್ಲ ಮರೆಯುವುದು ಹೇಗೆ?
ಸತ್ಯವಾಗಿಯೂ ಈ ತಿಂಗಳು ಬಲು ವಿಶಿಷ್ಟವೇ. ಕಾರ್ಯಕ್ರಮವೊಂದಕ್ಕೆ 20 ಸಾವಿರ ರೂಪಾಯಿ ಪಡೆಯುತ್ತಾರೆಂಬ ಆರೋಪವೊಂದು ಬಂದಿತ್ತು. ಇದುವರೆಗೂ ಕನಿಷ್ಠ 5 ಸಾವಿರ ಕಾರ್ಯಕ್ರಮಗಳಾದರೂ ಆಗಿರಬೇಕು. ಆ ಲೆಕ್ಕಕ್ಕೆ ನನ್ನ ಆಸ್ತಿ ಹತ್ತು ಕೋಟಿ!! ಅಷ್ಟಾದರೂ ಸಾಮಾನ್ಯ ಜ್ಞಾನ ಬಳಸಬಹುದಿತ್ತು! ನನ್ನ ಕೈಲಿರೋ ವಾಚು ನಂದು ಮತ್ತು ಶಾಸ್ತ್ರಿ ಕೊಡಿಸಿದ್ದು, ಕುತರ್ಾಗಳಲ್ಲಿ ಬಹುಪಾಲು ಬೇರೆಯವರು ಕೊಡಿಸಿದ್ದೇ. ಫೋನು ಶಶಿ ಪ್ರೀತಿಯಿಂದ ಕೈಲಿಟ್ಟಿದ್ದು, ಸೆಕೆಂಡ್ ಹ್ಯಾಂಡ್ ಕಾರು ಮಿತ್ರ ಗಣೇಶನದ್ದು! ಎಲ್ಲರ ಪ್ರೀತಿಯನ್ನು ಸವಿದು ಕೊಬ್ಬಿ ಬೆಳೆದಿದ್ದೇನೆ ನಾನು ಅಷ್ಟೇ! ಅದಕ್ಕೇ ಈ ಆರೋಪ ನನ್ನನ್ನು ಬಲುವಾಗಿ ಹಿಂಡಿತು. ಇದೇ ತಿಂಗಳ 26 ಕ್ಕೆ ಶಿವಮೊಗ್ಗದ ಭಾರತಮಾತೆಯ ಮೂತರ್ಿಯೆದುರು ಸಂಸ್ಕಾರ ಭಾರತಿಯ ಮಕ್ಕಳೊಂದಿಗೆ ಮಾತನಾಡುತ್ತಿರುವಾಗ ಭಿಕ್ಷೆ ಬೇಡುವ ಅಜ್ಜಿಯೋರ್ವಳು ಬಂದು ಕೈತುಂಬಾ ಹತ್ತರ ಹತ್ತಾರು ನೋಟನ್ನು ಹಿಡಕೊಂಡು ‘ಮಾತೆಗೆ, ಮಾತೆಗೆ’ ಎಂದಷ್ಟೇ ಹೇಳಿ ನನ್ನ ಕೈಲಿಟ್ಟು ಹರಸಿ ಹೊರಟುಬಿಟ್ಟಳು. ಭಾರತ ಮಾತೆಯ ಸೇವೆ ಮಾಡಲು ನಾನು ಯೋಗ್ಯವೆಂದು ಆಕೆ ನಂಬಿದಳಲ್ಲ, ಹೃದಯ ತುಂಬಿ ಬಂತು. ‘ನೀವು ನಂಬಿದರೆಷ್ಟು ಬಿಟ್ಟರೆಷ್ಟು’ ಅಂತ ಒಮ್ಮೆ ಹೃದಯಕ್ಕೆ ಹೇಳಿಕೊಂಡೆ!
ಯಾವ ದಿಕ್ಕಿನಿಂದ ನೋಡಿದರೂ ಈ ಜನವರಿ ಮತ್ತೆಂದಿಗೂ ಬರಲಾರದು. ಯೇಸು ಕ್ರಿಸ್ತನ ಕೋಪ ನಮ್ಮವರ ಮೂಲಕ ಕಾಡಿತು, ದಿವ್ಯತ್ರಯರು ರಕ್ಷೆಯಾಗಿ ನಿಂತು ಹೊಸಬರನೇಕರ ಮೂಲಕ ಹರಸಿದರು. ನನ್ನ ವಿರೋಧಿಸುವ ನೆಪದಲ್ಲಿ ಜೀವನದ ಅನೇಕ ಕಹಿ ಸತ್ಯಗಳನ್ನು ಅನಾವರಣ ಮಾಡಿಸಿದ ಆ ನನ್ನ ಮಿತ್ರರೆಲ್ಲರಿಗೂ ಶತ-ಶತ ನಮನ. ದಿವ್ಯತ್ರಯರ ಕೃಪೆ ನಿಮಗೂ ಇರಲಿ..

Comments are closed.