ವಿಭಾಗಗಳು

ಸುದ್ದಿಪತ್ರ


 

ಕಮ್ಯುನಿಸ್ಟ್ ಥಂಡಿಗೆ, ಸನಾತನ ಧರ್ಮವೆಂಬ ಕಷಾಯ!

ಭಾರತದೊಂದಿಗೆ ಘನಿಷ್ಠ ಸಂಬಂಧ ಹೊಂದಿದ್ದ ಚೀನಾ ಕಮ್ಯುನಿಸ್ಟರ ತೆಕ್ಕೆಗೆ ಸಿಲುಕಿದ ಮೇಲೆ ನಿಧಾನಕ್ಕೆ ಬದಲಾಯಿತು. ಕಳೆದ ನೂರು ವರ್ಷಗಳಲ್ಲಿ ಜಾಗತಿಕವಾಗಿ ಕಂಡು ಬಂದ ಉತ್ಕ್ರಾಂತಿಗೆ ಚೀನಾ ಬಲಿಯಾಯ್ತು. ರಷ್ಯಾದಲ್ಲಿ ಕಂಡು ಬಂದ ಕಮ್ಯುನಿಸ್ಟ್ ಬಿರುಗಾಳಿ ಮೊದಲು ಮಂಗೋಲಿಯಾವನ್ನು ಆವರಿಸಿಕೊಂಡಿತು, ಆಮೇಲೆ ಇಡಿಯ ಚೀನಾಕ್ಕೆ ಹಬ್ಬಿತು. ಅಲ್ಲಿನ ಧಾಮರ್ಿಕ ಪರಂಪರೆ ಉಧ್ವಸ್ತಗೊಂಡಿತು. ಭಾರತಕ್ಕೆ ಸಂವಾದಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಈಗ ಅವಸಾನದ ಅಂಚಿಗೆ ಬಂದು ನಿಂತಿತು. ಮಾವೊತ್ಸೆತುಂಗನಂತೂ ತನ್ನ ವಿಸ್ತರಣಾ ವಾದದ ನೀತಿಯಿಂದ ಚೀನಾವನ್ನು ಮೆಟ್ಟಿನಿಂತ.

indo china6

ಅಮೇರಿಕದಲ್ಲಿದ್ದ ಚೀನೀ ರಾಯಭಾರಿ ಹ್ಯೂಶಿ ಬಲು ಹಿಂದೆಯೇ ಅಚ್ಚರಿಯಿಂದ ‘ಎರಡು ಸಾವಿರ ವರ್ಷಗಳ ಕಾಲ ಭಾರತ ಒಬ್ಬೇ ಒಬ್ಬ ಸೈನಿಕನನ್ನು ಕಳಿಸದೇ ಚೀನಾದ ಮೇಲೆ ಆಳ್ವಿಕೆ ಮಾಡಿತು’ ಎಂದುದ್ಗರಿಸಿದ್ದ! ಜಗತ್ತಿನ ಪಾಲಿಗೆ ಇತರ ರಾಷ್ಟ್ರಗಳನ್ನು ಗೆಲ್ಲುವುದೆಂದರೆ ಕತ್ತಿ-ಪಿಸ್ತೂಲು ಹಿಡಿದ ಸೈನಿಕರು ನುಗ್ಗೋದು ಎಂಬ ಭಾವನೆ ಇದ್ದಾಗ ಭಾರತ ಚೀನಾದಂತಹ ಬೃಹತ್ ರಾಷ್ಟ್ರವನ್ನು ಬಲಾತ್ಕಾರವಿಲ್ಲದೇ ವಶಪಡಿಸಿಕೊಂಡಿದ್ದು ಹೇಗೆ? ಖಂಡಿತ ಕೇಳಬೇಕಾದ ಪ್ರಶ್ನೆ. ಅಸಹಿಷ್ಣುತೆಯ ಚಚರ್ೆ ತೀವ್ರವಾಗಿ ನಡೆದು ದೇಶವನ್ನೇ ತ್ಯಜಿಸಲು ಕೆಲವರು ನಿರ್ಧರಿಸಿರುವಾಗ ಹಿಂದೂ ಸಂಸ್ಕೃತಿ ವಿಶ್ವಕ್ಕೆ ಹಬ್ಬಿದ ರೀತಿ ತಿಳಿಯುವುದು ಬಲು ಆರೋಗ್ಯಕರ.

ಹಾಗೆ ನೋಡಿದರೆ ನಮ್ಮ ಅತಿ ಸಮೀಪದ ನೆರೆ ರಾಷ್ಟ್ರ ಚೀನಾ. ಬಲು ವಿಸ್ತಾರವಾದ, ಬಲಿಷ್ಠವಾದ ರಾಷ್ಟ್ರ. ಸಾಂಸ್ಕೃತಿಕವಾಗಿಯೂ ಬಲು ಸಿರಿವಂತ. ಕುಟುಂಬ ವ್ಯವಸ್ಥೆ, ದೈವಭಕ್ತಿಯ ತತ್ತ್ವ ಚಿಂತನೆಗಳಲ್ಲೆಲ್ಲಾ ನಮಗೆ ಬಲುವಾಗಿ ಹೋಲುವ ರಾಷ್ಟ್ರ ಇದು. ಆದರೆ ನಮ್ಮಿಬ್ಬರನ್ನು ಬೇರ್ಪಡಿಸುವ ಘನವಾದ ಗೋಡೆಯೊಂದು ಹಿಮಾಲಯದ ರೂಪದಲ್ಲಿ ನಿಂತಿದೆ. ಬಹುಶಃ ಆಕ್ರಮಣಕಾರಿ ಮನೋವೃತ್ತಿಯ ಮಂಗೋಲಿಯನ್ನರಿಂದ ನಮ್ಮ ರಕ್ಷಣೆಗೆ ನಿಂತಿದ್ದಿರಬಹುದು ಹಿಮಾಲಯ. ಸಾಹಸಿ ಭಾರತೀಯನಿಗೂ ಇದು ತಡೆಗೋಡೆಯೇ ಆಗಿತ್ತು. ಚೀನಾವನ್ನು ಮುಟ್ಟಿ ನಮ್ಮ ಸಾಂಸ್ಕೃತಿಕ ಧಾರೆಯಿಂದ ಅದನ್ನು ತಟ್ಟಿ ಭೂ ಕುಟುಂಬ ರಚಿಸಲು ಅದು ಅಡ್ಡಿಯೇ. ಹಾಗಂತ ನಮ್ಮ ಪೂರ್ವಜರು ಸುಮ್ಮನಾಗಲಿಲ್ಲ. ಕೆಲವೊಮ್ಮೆ ಮಂಜಿನಿಂದ ಆವೃತವಾದ ಬೆಟ್ಟಗಳನ್ನು ಎದುರಿಸಿ, ದುರ್ಗಮ ಹಾದಿ ಸವೆಸಿ ಚೀನಾ ಮುಟ್ಟಿದರು. ಕೆಲವೊಮ್ಮೆ ಮಯನ್ಮಾರ್ ಮೂಲಕ ಮತ್ತೂ ಅನೇಕ ಬಾರಿ ಮಧ್ಯ ಏಷಿಯಾದ ದ್ವೀಪಗಳನ್ನು ದಾಟಿ ಸಿಕಿಯಾಂಗ್ ಭಾಗ ಸೇರಿಕೊಳ್ಳುತ್ತಿದ್ದರು. ಇದನ್ನು ಬಿಟ್ಟರೆ ಬಂಗಾಳ ಕೊಲ್ಲಿ ಮಹಾಸಾಗರ ಹಾದು ಸುಮಾತ್ರ ಸೇರಿಕೊಂಡು ಅಲ್ಲಿಂದ ಚೀನಾ ಮುಟ್ಟುವುದು! ಹಾದಿಯುದ್ದಕ್ಕೂ ಹಿಂದೂ-ಬೌದ್ಧ ಸಂಸ್ಕೃತಿ ವ್ಯಾಪಕವಾಗಿ ಹರಡಿದ್ದರಿಂದ ಭಾರತೀಯ ವ್ಯಾಪಾರಿಗಳಿಗೆ, ಸಾಹಸಿಗರಿಗೆ ಇಲ್ಲಿ ಸಹಜವಾಗಿಯೇ ಗೌರವವಿತ್ತು. ಜೊತೆಗೆ ಈ ಜನರ ತ್ಯಾಗ, ಅಹಿಂಸಾ ಭಾವ, ಸರಳತೆ, ಸಜ್ಜನಿಕೆಗಳೆಲ್ಲ ಅವೆಷ್ಟು ಮನಮೋಹಕವಾಗಿದ್ದವೆಂದರೆ ಜನ ಸಹಜವಾಗಿಯೇ ಈ ಸಂಸ್ಕೃತಿಯನ್ನು ತಬ್ಬಿಕೊಳ್ಳುತ್ತಿದ್ದರು. ಬುದ್ಧನ ಅನುಯಾಯಿಗಳ ಆಗಮನಕ್ಕೂ ಬಲು ಮುನ್ನವೇ ಹಿಂದೂ ಸಂಸ್ಕೃತಿ ಅಲ್ಲಿ ತನ್ನ ಬಾಹುಗಳನ್ನು ಚಾಚಿದ್ದಕ್ಕೆ ಉಲ್ಲೇಖಗಳು ದೊರೆಯುತ್ತವೆ. ಆದರೆ ಬೌದ್ಧ ಮತಪ್ರಚಾರಕರ ಆಗಮನದ ನಂತರ ಚೀನದ ಚಿತ್ರಣವೇ ಬದಲಾಯಿತು. ಹಾನ್ ಸಾಮ್ರಾಜ್ಯದ ‘ಮಿಂಗ್’ ರಾಜನ ಕಾಲಕ್ಕೆ ಆಗಮಿಸಿದ ಕಾಶ್ಯಪ ಮಾತಂಗ ಮತ್ತು ಧರ್ಮರಕ್ಷರೇ ಬಹುಶಃ ಆದ್ಯ ಆಚಾರ್ಯರು. ಬುದ್ಧನ ಉಪದೇಶಗಳ ಮೊದಲ ಚೀನಿ ಅವತರಿಣಿಕೆ ಇವರ ಕಾಲದ್ದೇ ಎಂದು ನಂಬಲಾಗುತ್ತದೆ.

ರಾಜನೇ ಬುದ್ಧನ ಸಂದೇಶಗಳಿಂದ ಪ್ರಭಾವಿತನಾಗಿಬಿಟ್ಟಿದ್ದರಿಂದ ಇಡಿಯ ದೇಶವೇ ಬೌದ್ಧಮತಾವಲಂಬಿಯಾಗಲು ಅಣಿಯಾಗುವಂತಿತ್ತು. ರಾಜ ಮಂದಿರದಲ್ಲಿಯೇ ಬುದ್ಧನ ಉಪಾಸನೆ ಶುರುವಾಯಿತು. ಅಕ್ಕ ಪಕ್ಕದ ರಾಷ್ಟ್ರಗಳಿಂದಲೂ ಭಿಕ್ಷುಗಳ ಆಗಮನ ಆರಂಭವಾಯಿತು. ವಿಹಾರಗಳು-ಸ್ತೂಪಗಳ ನಿಮರ್ಾಣ ಒಂದೆಡೆ; ಭಾರತೀಯ ಸಾಹಿತ್ಯದ ಅನುವಾದ ಮತ್ತೊಂದೆಡೆ. ಬುದ್ಧ ಕಥೆಗಳ ಶಿಲಾರೂಪದ ಅನಾವರಣ ಒಂದೆಡೆ; ಭಾರತೀಯ ವಿಜ್ಞಾನ ಪರಂಪರೆಯ ಪರಿಚಯ ಮತ್ತೊಂದೆಡೆ. ಒಟ್ಟಾರೆ ಅದು ಚೀನಾದ ಪಾಲಿನ ಸಂಭ್ರಮದ ಯುಗ.

ಆ ಕಾಲದ ಚೀನೀ ರಾಜರಿಗೆ ಭಾರತದಿಂದ ಪಂಡಿತರನ್ನು ಕರೆಸಿಕೊಳ್ಳುವುದೆಂದರೆ ಹೆಮ್ಮೆಯ ಸಂಗತಿಯಾಗಿತ್ತು. ಮಗಧ ರಾಜ ವಿಷ್ಣುಗುಪ್ತರಿಗೆ ಪತ್ರ ಬರೆದು ಚೀನೀ ಸಮ್ರಾಟ ‘ವೂ’ ಆಚಾರ್ಯ ಪರಮಾರ್ಥರನ್ನು ತನ್ನ ದೇಶಕ್ಕೆ ಕರೆಸಿಕೊಂಡಿದ್ದ. ಸಮ್ರಾಟ ಟಾಯಿಸುಂಗ್ರ ಆಮಂತ್ರಣಕ್ಕೆ ಒಪ್ಪಿ ಆಚಾರ್ಯ ಪ್ರಭಾಕರ ಮಿತ್ರರು ಚೀನಾಕ್ಕೆ ಹೋಗಿದ್ದರು.

indo china3

ಅನುಮಾನವೇ ಇಲ್ಲ. ಚೀನಾದ ಜನ ಸುಸಂಸ್ಕೃತರಾಗಿದ್ದರು. ತಮ್ಮದೇ ಧರ್ಮ, ಆಚರಣೆಗಳ ಮೂಲಕ ಬದುಕು ನಡೆಸಿದ್ದರು. ಇಂತಹವರಿಗೂ ಭಾರತದ ಆಚಾರ್ಯರು ಬದುಕಿನ ಘನವಾದ ಉದ್ದೇಶ, ಗುರಿ, ಜೀವನ ರೀತಿ-ನೀತಿಗಳನ್ನು ಕಲಿಸಿಕೊಟ್ಟು ಇರುವ ಜಾಗದಿಂದ ಮೇಲೇರುವುದಕ್ಕೆ ಅನುವು ಮಾಡಿಕೊಟ್ಟರು. ಹೀಗಾಗಿಯೇ ಪ್ರತಿಯೊಬ್ಬ ಚೀನಿಯನ ಜೀವಿತಾವಧಿಯ ಗುರಿ ಭಾರತಕ್ಕೆ ಭೇಟಿ ನೀಡುವುದೇ ಆಗಿತ್ತು. ಒಂದು ಹೆಜ್ಜೆ ಮುಂದಿಟ್ಟು ಹೇಳಬೇಕೆಂದರೆ, ಭಾರತವೆಂದರೆ ಚೀನಿಯರ ಪಾಲಿಗೆ ಸಾಕ್ಷಾತ್ ಸ್ವರ್ಗವೇ ಆಗಿತ್ತು! ಈ ಹಿನ್ನೆಲೆಯಲ್ಲಿಯೇ ಫಾಹಿಯಾನ್, ಇತ್ಸಿಂಗ್, ಹ್ಯುಯೆನ್ತ್ಸಾಂಗ್ರ ಭಾರತ ಪ್ರವಾಸ ಬಲು ಮಹತ್ವದ್ದು! ಆಗೆಲ್ಲಾ ಇಲ್ಲಿ ಕವನವೊಂದು ಚಾಲ್ತಿಯಲ್ಲಿತ್ತು.

‘ಭಿಕ್ಷುಗಳು ಅಧ್ಯಯನಕ್ಕೆಂದು ಭಾರತಕ್ಕೆ ಹೋಗುತ್ತಾರೆ.

ನೂರರಲ್ಲಿ ಹತ್ತು ಜನರೂ ಮರಳದೇ ಕಾಣೆಯಾಗುತ್ತಾರೆ’.

ಅಷ್ಟು ಕಟುವಾದ ಯಾತ್ರೆಯಾದರೂ ಭಾರತಕ್ಕೆ ಬರಬೇಕೆನ್ನುವ ಉತ್ಸುಕತೆ ಕಡಿಮೆ ಇರಲಿಲ್ಲ!

ಮೊದಲು ಮಂಗೋಲಿಯಾ ಚೀನಾದಿಂದ ಪ್ರತ್ಯೇಕವಾಗಿತ್ತು. ಯುದ್ಧೋನ್ಮಾದದ ಜನಾಂಗದಿಂದ ಕೂಡಿದ್ದ ಪ್ರದೇಶ ಅದು. ಚಂಗೇಸ್ ಖಾನ್ರಂತಹ ಸಮ್ರಾಟರಿಂದ ಆಳಲ್ಪಟ್ಟ ಮಂಗೋಲಿಯಾ ಜಗತ್ತಿಗೇ ಕಂಟಕವಾಗಿತ್ತು. ಅವನ ನಂತರ ಬಂದ ಕುಬ್ಲಾಯ್ ಖಾನನೂ ಕಡಿಮೆಯವನಲ್ಲ. ಅಕ್ಕಪಕ್ಕದ ರಾಷ್ಟ್ರಗಳನ್ನು ಧೂಳಿಪಟಗೈದು ಪಶ್ಚಿಮ ಯುರೋಪಿನ ದಡದವರೆಗೂ ಸಾಮ್ರಾಜ್ಯ ವಿಸ್ತರಿಸಿದ್ದ. ಇಂತಹವನನ್ನೂ ಶಾಕ್ಯ ಪಂಡಿತನೊಬ್ಬ ಒಲಿಸಿ ಬುದ್ಧಾನುಯಾಯಿಯಾಗಿಸಿದ್ದು ರೋಚಕ ಗಾಥಯೇ ಸರಿ. ಆ ಕಾಲದಲ್ಲಿ ವಿಹಾರಗಳು, ಸ್ತೂಪಗಳಲ್ಲದೇ ಸರಸ್ವತಿ, ಗಣೇಶ, ಬ್ರಹ್ಮರಾದಿಯಾಗಿ ದೇವತೆಗಳ ಮಂದಿರಗಳಿದ್ದುದೂ ಅವಶೇಷಗಳಲ್ಲಿ ಕಂಡು ಬರುತ್ತವೆ. ಮಹಾ ಭಾರತದ ಕಥೆಗಳನ್ನೂ ಆಧರಿಸಿದ ನಾಟ್ಯ, ಗೀತೆಗಳು ಪ್ರಚಲಿತದಲ್ಲಿದ್ದುದೂ ಅನುಭವಕ್ಕೆ ದಕ್ಕುತ್ತದೆ.

ಚೀನೀ ಭಾಷೆಯಲ್ಲಿ ಅನೇಕ ಸಂಸ್ಕೃತ ಅಪಭ್ರಂಶಗಳಿವೆ. ಅತ್ಯಂತ ಪ್ರಸಿದ್ಧವಾದ ‘ಜೆನ್’ ಧ್ಯಾನ ಪದದ ಅಪಭ್ರಂಶವೇ. ಮಲ್ಲಿಕಾ ಕನ್ನಡದಲ್ಲಿ ಮಲ್ಲಿಗೆಯಾದಂತೆ ಚೀನಿ ಭಾಷೆಯಲ್ಲಿ ಮೋಲಿ ಆಗಿದೆ! ಬರವಣಿಗೆಯ ವಿಚಾರಕ್ಕೆ ಬಂದರೆ ವಿಶೇಷ ಆಕಾರಗಳನ್ನು ಹೊಂದಿರುವ ಲಿಪಿ ಎನಿಸಿದರೂ ಈ ಕುರಿತಂತೆ ಭಾರತಕ್ಕೆ ನತಮಸ್ತಕರು ಅವರು. ತಾವೋಶಿ ಬರೆದಿರುವ ‘ಫಾ ಯುವಾಂಚುಲಿನ್’ ಕೃತಿಯಲ್ಲಿ, ‘ಭಾಷೆಯ ಬರವಣಿಗೆಯ ದೃಷ್ಟಿಯಿಂದ ಮೂವರು ಸಂಶೋಧಕರು ಆಗಿ ಹೋಗಿದ್ದಾರೆ. ಎಡದಿಂದ ಬಲಕ್ಕೆ ಬರೆಯುವುದನ್ನು ಕಲಿಸಿದ ಬ್ರಹ್ಮ; ಬಲದಿಂದ ಎಡಕ್ಕೆ ಬರೆಯುವುದನ್ನು ಸಂಶೋಧಿಸಿದ ಖಾರು ಮತ್ತು ಮೇಲಿನಿಂದ ಕೆಳಕ್ಕೆ ಬರೆಯುವುದನ್ನು ಹೇಳಿಕೊಟ್ಟ ತ್ಸಾಂಗ್ ಶಿಯಾ’ ಎನ್ನಲಾಗಿದೆ. ಈ ಸಾಲುಗಳ ಅರ್ಥ ಬಲು ಸ್ಪಷ್ಟ. ಮೊದಲ ಬರವಣಿಗೆಯ ಅಕ್ಷರಗಳು ಹುಟ್ಟಿದ್ದು ಭಾರತದಲ್ಲಿ ಎಂಬುದನ್ನು ಚೀನಿಯರೂ ಅಲ್ಲಗಳೆಯುವುದಿಲ್ಲ.

ಸಂಸ್ಕೃತಿ, ಧರ್ಮ, ತತ್ತ್ವಜ್ಞಾನದ ಮೇಲಿನ ಭಾರತದ ಪ್ರಭಾವವನ್ನೂ ಅವರು ನಿರಾಕರಿಸಲಾರರು. ಕನ್ಫ್ಯೂಶಿಯಸ್ ಅಥವಾ ತಾವೋ ಯಾರಿದ್ದರೂ ಸರಿಯೇ ಹಿಂದೂ-ಬೌದ್ಧರ ಚಿಂತನೆಗಳನ್ನು ಸ್ವೀಕರಿಸಿ ಬೆಳೆದವರೇ. ಸ್ತೂಪಗಳ ನಿಮರ್ಾಣವನ್ನೂ ಚೀನಾ ಭಾರತದಿಂದಲೇ ಕಲಿಯಿತು. ಖಗೋಳ, ಗಣಿತ, ದಿನ ಗಣನೆಯಲ್ಲೂ ಭಾರತದ ಪ್ರಭಾವವಿದೆ. ಚಾಂದ್ರಮಾನ, ಸೌರಮಾನ ಗಣನೆಯನ್ನೇ ಅನುಸರಿಸುತ್ತಾರೆ. ಪಂಚಭೂತಗಳ ಆರಾಧನೆ ಇದೆ. ಆಹಾರದಲ್ಲಿ ಹಾವು-ಹಲ್ಲಿ-ಚೇಳುಗಳ ಬಳಕೆ ಇದೆ ಎನ್ನಿಸಿದರೂ ಅವರ ಅಡುಗೆ ಮನೆ ಹೊಕ್ಕರೆ ಸೊಪ್ಪು-ಸದೆ ಥೇಟು ಭಾರತದಂತೆ!

ಇಡಿಯ ಜಗತ್ತನ್ನು ಸಮ್ಮೋಹಿಸಿರುವ ಚೀನಿ ಹೋರಾಟ ಕಲೆ ಕುಂಗ್ಫೂ ಕೂಡ ಭಾರತದಿಂದಲೇ ಪ್ರಭಾವಿತವಾದದ್ದು.  ಅದೊಂದು ದೊಡ್ಡ ಕಥೆ.

ತಮಿಳುನಾಡಿನ ಕಾಂಚೀಪುರಂ ರಾಜಮನೆತನದ ಬಾಲಕ ಬೋಧಿತಾರ ತನ್ನ ಗುರು ಪ್ರಜ್ಞಾತಾರರಿಂದ ಬೌದ್ಧ ಮತ ದೀಕ್ಷಿತನಾದ. ಅವನಲ್ಲಿದ್ದ ಅಪಾರವಾದ ಜ್ಞಾನ, ವಿವೇಕಗಳಿಂದಾಗಿ ಗುರುಗಳು ಅವನಿಗೆ ಬೋಧಿಧರ್ಮನೆಂದು ನಾಮಕರಣ ಮಾಡಿದರು. ರಾಜ್ಯದ ಆಕಾಂಕ್ಷೆಯನ್ನು ಕಿಂಚಿತ್ತೂ ಹೊಂದಿರದ ಬೋಧಿಧರ್ಮ ಗುರುಗಳೊಂದಿಗೆ ಕೂಡಿ ಧರ್ಮ ಪ್ರಚಾರ ನಿರತನಾದ. ಅವರ ಆಕಾಂಕ್ಷೆಯಂತೆ ಅವರ ದೇಹತ್ಯಾಗದ ನಂತರ ಚೀನಾದೆಡೆಗೆ ಧರ್ಮಪ್ರಚಾರಕ್ಕೆಂದು ಪಯಣ ಬೆಳೆಸಿದ. ತೇಜಸ್ವಿಯಾಗಿದ್ದ ಬೋಧಿಧರ್ಮನಿಗೆ ಚೀನಾದಲ್ಲಿ ಅಪಾರವಾದ ಗೌರವ ದಕ್ಕಿತು. ಆದರೆ ಹೊರಗಿನ ಯಾವ ಆಕರ್ಷಣೆಗೂ ಮರುಳಾಗದ ಬೋಧಿಧರ್ಮ ಶಾಓಲೀನ್ನ ಮಂದಿರದಲ್ಲಿ ಸಾಧನೆಗೆ ಕುಳಿತ. ಒಂದು ಐತಿಹ್ಯದ ಪ್ರಕಾರ ಸುಮಾರು ಒಂಭತ್ತು ವರ್ಷಗಳ ಕಾಲ ಇಲ್ಲಿನ ಗುಹೆಯೊಂದರ ಗೋಡೆಗೆದುರಾಗಿ ಕುಳಿತು ಧ್ಯಾನಸ್ಥನಾದ. ಅವನೆಡೆಗೆ ಅನೇಕರು ಶಿಷ್ಯತ್ವ ಪಡೆಯಲೆಂದು ಬಂದರು. ಬೋಧಿಧರ್ಮ ಯಾರನ್ನೂ ಸ್ವೀಕರಿಸಲಿಲ್ಲ. ಆಗ ಬಂದವನು ಹುಯ್ಕೆ. ಆತ ತನ್ನ ತೋಳನ್ನೇ ಕಡಿದು ಗುರುವಿಗೆ ಅಪರ್ಿಸಿದ. ಬೋಧಿಧರ್ಮ ಅವನನ್ನು ತಬ್ಬಿಕೊಂಡು ಮೊದಲ ಚೀನಿ ಶಿಷ್ಯನಾಗಿ ಸ್ವೀಕರಿಸಿದ. ಅಲ್ಲಿಂದಾಚೆಗೆ ಶಾಓಲಿನ್ನ ಸನ್ಯಾಸಿಗಳು ಬುದ್ಧನಿಗೆ ಒಂದೇ ಕೈಯ್ಯಲ್ಲಿ ಪ್ರಣಾಮ ಮಾಡುವುದನ್ನು ರೂಢಿಸಿಕೊಂಡರಂತೆ!

indo china5

ಇದೇ ಬೋಧಿಧರ್ಮ ಮುಂದೆ ಜೆನ್ ಪ್ರಚಾರ ಶುರು ಮಾಡಿದ್ದು. ಸದಾ ಏಕಾಗ್ರ ಚಿತ್ತನಾಗಿ ಧ್ಯಾನಸ್ಥನಾಗುವ ಪರಂಪರೆಗೆ ನಾಂದಿಹಾಡಿದ್ದು. ಈ ಧ್ಯಾನಕ್ಕೆ ಮೊದಲು ದೇಹ ಅಣಿಯಾಗಬೇಕೆಂದು ಗಮನಿಸಿದ ಗುರು, ಶಿಷ್ಯರಿಗೆ ಮೊದಲು ದೇಹ ಗಟ್ಟಿಮಾಡಿಕೊಳ್ಳುವ ತರಬೇತಿ ಶುರುಮಾಡಿದ. ಏಕಾಗ್ರತೆಗೆ ಅನುಕೂಲವಾಗುವ ಉಸಿರಾಟದ ಕಲೆಯನ್ನು, ಭಾರತೀಯ ಯುದ್ಧ ವಿದ್ಯೆಗಳನ್ನು ಕಲಿಸಲಾರಂಭಿಸಿದ. ಮುಂದೆ ಶಾಓಲೀನ್ನ ಮಾಶರ್ಿಯಲ್ ಆಟ್ಸರ್್ ಎಂದೇ ಖ್ಯಾತವಾದ ಈ ಯುದ್ಧವಿದ್ಯೆಯ ಮೇಲೆ ಕೇರಳದ ಕಳರಿಪಯಟ್ಟಿನ ಪ್ರಭಾವ ಬಲು ಜೋರಾಗಿಯೇ ಇದೆ!

ಅನೇಕರು ಈ ಕಥನಗಳನ್ನು ಅಲ್ಲಗಳೆಯುತ್ತಾರೆ. ಬೋಧಿಧರ್ಮನೆಂಬೊಬ್ಬ ವ್ಯಕ್ತಿಯಿದ್ದ ಎಂಬುದನ್ನೂ ನಿರಾಕರಿಸುತ್ತಾರೆ. ಆದರೆ ಆತನ ಪ್ರಭಾವ ಚೀನಾ ಮತ್ತು ಜಪಾನ್ಗಳಲ್ಲಿ ಹಾಸುಹೊಕ್ಕಾಗಿರುವುದನ್ನು ಧಿಕ್ಕರಿಸಲಾಗದೇ ಸೋಲುತ್ತಾರೆ. ರಾಮನ ಹುಟ್ಟನ್ನು ಆಧಾರವಿಲ್ಲವೆಂಬ ಕಾರಣ ಕೊಟ್ಟು ನಿರಾಕರಿಸಬಹುದು. ಆದರೆ ರಾಮನ ಪ್ರಭಾವ ದೇಶದ ಜನಮಾನಸದಲ್ಲಿ ಹುದುಗಿ ಹೋಗಿರುವುದನ್ನು ಧಿಕ್ಕರಿಸುವುದು ಹೇಗೆ!

ಒಟ್ಟಾರೆ ಇಷ್ಟೇ. ಚೀನಾದ ಸಾಂಸ್ಕೃತಿಕ ಭೂಮಿಕೆಯ ನಿಮರ್ಾಣಕ್ಕೆ ಭಾರತದ ಕೊಡುಗೆ ಅಪಾರವಾದುದು. ಚೀನಿ ಜನರ ಆಚಾರ, ವಿಚಾರಗಳಿಂದ ಹಿಡಿದು ಮನೆ ನಿಮರ್ಾಣದವರೆಗೆ ಭಾರತೀಯರು ಸಾಕಷ್ಟು ಕೈಯ್ಯಾಡಿಸಿದ್ದಾರೆ. ಈ ದೃಷ್ಟಿಯಿಂದ ನೋಡಿದರೆ ಭಾರತೀಯರ ಮೇಲೆ ಚೀನಿಯರ ಪ್ರಭಾವ ಕಡಿಮೆ ಎಂದೇ ಹೇಳಬೇಕು. ಆದರೆ ಚೀನಾ ನಮಗೆ ಮಾಡಿರುವ ಶ್ರೇಷ್ಠ ಉಪಕಾರ ಒಂದೇ. ಅದು ಚೀನಿ ಯಾತ್ರಿಕರ ದಾಖಲೆಗಳು. ಫಾಹಿಯಾನ್ ಮತ್ತು ಹ್ಯುಯೆನ ತ್ಸಾಂಗರು ಭಾರತದ ಕುರಿತಂತೆ ಬರೆದಿರುವ ಕೃತಿಗಳು ಇತಿಹಾಸದ ದಾಖಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿನ ರಾಜ್ಯಾಡಳಿತ, ಶಿಕ್ಷಣ, ನ್ಯಾಯ ವ್ಯವಸ್ಥೆ ಇವೆಲ್ಲವುಗಳ ಕುರಿತಂತೆ ಅಧಿಕೃತ ವಾಣಿಯಾಗಿ ನಿಂತವರು ಅವರು. ಅನೇಕೆಡೆಗಳಲ್ಲಿ ನಾವೇ ಅತಿಶಯೋಕ್ತಿ ಎಂದುಬಿಡುವ ಅನೇಕ ಸಂಗತಿಗಳನ್ನು ಸಂಗ್ರಹಿಸಿಟ್ಟು ಉಪಕಾರ ಮಾಡಿದ್ದಾರೆ. ಭಾರತೀಯ ಕಮ್ಯುನಿಸ್ಟರು ವಾಲ್ಮೀಕಿಯನ್ನು, ವ್ಯಾಸರನ್ನು ಧಿಕ್ಕರಿಸಿಯಾರು; ಫಾಹಿಯಾನ್ ಮತ್ತು ಹ್ಯುಯೆನ್ ತ್ಸಾಂಗ್ರನ್ನು ಧಿಕ್ಕರಿಸಲಾರರು. ಎಷ್ಟಾದರೂ ತವರು ಮನೆಯವರಲ್ವೇ?

ಭಾರತದೊಂದಿಗೆ ಘನಿಷ್ಠ ಸಂಬಂಧ ಹೊಂದಿದ್ದ ಚೀನಾ ಕಮ್ಯುನಿಸ್ಟರ ತೆಕ್ಕೆಗೆ ಸಿಲುಕಿದ ಮೇಲೆ ನಿಧಾನಕ್ಕೆ ಬದಲಾಯಿತು. ಕಳೆದ ನೂರು ವರ್ಷಗಳಲ್ಲಿ ಜಾಗತಿಕವಾಗಿ ಕಂಡು ಬಂದ ಉತ್ಕ್ರಾಂತಿಗೆ ಚೀನಾ ಬಲಿಯಾಯ್ತು. ರಷ್ಯಾದಲ್ಲಿ ಕಂಡು ಬಂದ ಕಮ್ಯುನಿಸ್ಟ್ ಬಿರುಗಾಳಿ ಮೊದಲು ಮಂಗೋಲಿಯಾವನ್ನು ಆವರಿಸಿಕೊಂಡಿತು, ಆಮೇಲೆ ಇಡಿಯ ಚೀನಾಕ್ಕೆ ಹಬ್ಬಿತು. ಅಲ್ಲಿನ ಧಾಮರ್ಿಕ ಪರಂಪರೆ ಉಧ್ವಸ್ತಗೊಂಡಿತು. ಭಾರತಕ್ಕೆ ಸಂವಾದಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಈಗ ಅವಸಾನದ ಅಂಚಿಗೆ ಬಂದು ನಿಂತಿತು. ಮಾವೊತ್ಸೆತುಂಗನಂತೂ ತನ್ನ ವಿಸ್ತರಣಾ ವಾದದ ನೀತಿಯಿಂದ ಚೀನಾವನ್ನು ಮೆಟ್ಟಿನಿಂತ. ಸವರ್ಾಧಿಕಾರ ಮೆರೆದು ಸ್ವಾತಂತ್ರ್ಯವನ್ನೂ ಕಸಿದ. ಧರ್ಮವನ್ನು ಅಫೀಮು ಎಂದವರ ಚಿಂತನೆಗಳು ಅವನ ಹೃದಯವನ್ನೂ ಆವರಿಸಿತ್ತು. ಈಗ ಆತ ಧರ್ಮವನ್ನು ಒಪ್ಪದ ರಾಷ್ಟ್ರ ಕಟ್ಟಲು ಹೊರಟ.

ಈಗಿನ ಚೀನಾ ನೀರ ಮೇಲಿನ ಗುಳ್ಳೆಯಂತೆ. ಜನರ ಜೀವನ ಮಟ್ಟ ಪಾತಾಳ ತಲುಪಿದೆ. ಕಾಮರ್ಿಕರು ಜೀತದಾಳಿಗಿಂತ ಕಡೆಯಾಗಿಬಿಟ್ಟಿದ್ದಾರೆ. ಆಥರ್ಿಕವಾಗಿ ಮುನ್ನುಗ್ಗುವ ನೆಪದಲ್ಲಿ ಪರಿಸರವನ್ನು ಸಂಪೂರ್ಣ ಶೋಷಿಸಿ ನಿನರ್ಾಮ ಮಾಡಿಬಿಟ್ಟಿದ್ದಾರೆ. ಧ್ಯಾನದ ಬೀಡಾಗಿದ್ದ ಚೀನಾ ಇಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ಜಗತ್ತನ್ನು ಬೆದರಿಸುತ್ತಿದೆ.

ಛೇ! ಕೆಲವೇ ದಶಕಗಳ ಅಂತರದಲ್ಲಿ ಏನೆಲ್ಲಾ ಆಗಿಹೋಯ್ತು!

ಈ ಕಮ್ಯುನಿಸ್ಟ್ ಗಾಳಿ ಭಾರತದತ್ತಲೂ ಬೀಸಿತ್ತು. ಅನೇಕರಿಗೆ ಥಂಡಿಯಿಂದ ತಲೆಭಾರವೂ ಆಗಿತು. ಆದರೆ ಇಲ್ಲಿ ಸನಾತನ ಧರ್ಮವೆಂಬ ಕಷಾಯ ಇದೆಯಲ್ಲ ಅದು ಎಂಥ ತಲೆಭಾರವನ್ನೂ ಇಳಿಸಿ ಬಿಡುತ್ತದೆ. ಅದಕ್ಕೆಂದೇ ಹಿಂದೂ ಸಂಸ್ಕೃತಿ ಇನ್ನೂ ಜೀವಂತವಾಗಿದೆ!

Comments are closed.