ವಿಭಾಗಗಳು

ಸುದ್ದಿಪತ್ರ


 

ಕಪ್ಪುಹಣದ ಶ್ವೇತಪತ್ರಕ್ಕೆ, ಇಷ್ಟೊಂದು ಅರ್ಜೆಂಟು ಯಾಕೆ?

ಕುತಂತ್ರದಿಂದ ಸಾವರ್ಕರ್‌ರನ್ನು ಕೋರ್ಟಿಗೆಳೆದ ನೆಹರೂರಿಂದ ಹಿಡಿದು ರಾಜಾನನ್ನು ತಳ್ಳಿ ಜೈಲಿನ ವಿಸ್ತಾರ ನೋಡಿದ ಸೋನಿಯಾವರೆಗೂ ಆ ಕುಟುಂಬದವರ್‍ಯಾರೂ ಸ್ವತಂತ್ರ ಭಾರತದಲ್ಲಿ ನ್ಯಾಯಾಲಯಕ್ಕೆ ಹೋಗಿಯೇ ಇರಲಿಲ್ಲ. ಈಗ ನೋಡಿ, ದೇಶಕ್ಕೆ ಶುಕ್ರದೆಸೆ!

ಇಲ್ಲಿಂದಾಚೆಗೆ ಇನ್ನು ಎರಡೇ ತಿಂಗಳು. ದೇಶದಲ್ಲಿ ನಾವು ಈ ಹಿಂದೆ ಕಂಡು ಕೇಳರಿಯದ ಬದಲಾವಣೆಯೊಂದು ಸಿಡಿಲಿನಂತೆ ಅಪ್ಪಳಿಸಲಿದೆ. ಈ ಬಾರಿ ಇದು ಅಣ್ಣಾ ಹಜಾರೆಯವರ ಅಂಗಳದಿಂದಲೋ ರಾಮದೇವ್ ಬಾಬಾರ ಆಶ್ರಮದಿಂದಲೋ ಹೊರಟಿದ್ದಲ್ಲ. ಇದು ಸುಬ್ರಮಣಿಯನ್ ಸ್ವಾಮಿಯವರ ಬತ್ತಳಿಕೆಯಿಂದ ಎಗರಿದ್ದು. ಕಳೆದ ಏಪ್ರಿಲ್ ೧೫ಕ್ಕೆ ಸ್ವಾಮಿ ಪ್ರಧಾನಂತ್ರಿ ಮನಮೋಹನ್ ಸಿಂಗರ ಟೇಬಲ್ಲಿಗೆ ೨೦೦ ಪುಟದ ದಸ್ತಾವೇಜನ್ನು ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿಯವರಬ ಭ್ರಷ್ಟಾಚಾರದ ಕುರಿತಂತೆ ವಿಚಾರಣೆಗೆ ಅನುಮತಿ ಕೇಳಿದ್ದಾರೆ. ಮೂರು ತಿಂಗಳೊಳಗೆ ಅನುಮತಿ ದೊರೆಯದಿದ್ದರೆ ಸುಪ್ರೀಮ್ ಕೋರ್ಟ್‌ನಲ್ಲಿ ಈ ಕುರಿತಂತೆ ದಾವೆ ಹೂಡಲಿದ್ದಾರೆ. ಕೋರ್ಟ್‌ನ ಕಟಕಟೆಯಲ್ಲಿ ನೆಹರೂ ಕುಟುಂಬದವರೊಬ್ಬರು ಮೊದಲ ಬಾರಿಗೆ ಬಂದು ನಿಲ್ಲಲಿದ್ದಾರೆ. ಕುತಂತ್ರದಿಂದ ಸಾವರ್ಕರ್‌ರನ್ನು ಕೋರ್ಟಿಗೆಳೆದ ನೆಹರೂರಿಂದ ಹಿಡಿದು ರಾಜಾನನ್ನು ತಳ್ಳಿ ಜೈಲಿನ ವಿಸ್ತಾರ ನೋಡಿದ ಸೋನಿಯಾವರೆಗೂ ಆ ಕುಟುಂಬದವರ್‍ಯಾರೂ ಸ್ವತಂತ್ರ ಭಾರತದಲ್ಲಿ ನ್ಯಾಯಾಲಯಕ್ಕೆ ಹೋಗಿಯೇ ಇರಲಿಲ್ಲ. ಈಗ ನೋಡಿ, ದೇಶಕ್ಕೆ ಶುಕ್ರದೆಸೆ!
ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದದ್ದೇ ನೆಹರೂ. ದೇಶದ ಕೆಲಸ ಮಾಡುವಾಗ ಒಂದಷ್ಟು ಹಣ ಹೊಡೆದರೆ ತಪ್ಪೇನೆಂದು ನೇರವಾಗಿ ಪ್ರಶ್ನಿಸಿದ್ದವರು ಅವರು. ಜಾತಿ ರಾಜಕಾರಣದ ಪರ್ವ ಶುರುವಾಗಿದ್ದೂ ಅವರ ಕಾಲಕ್ಕೇ. ಎಂ.ಸಿ.ಚಾಗ್ಲಾರನ್ನು ಮುಸಲ್ಮಾನರ ಕೇರಿಯಲ್ಲಿ ಚುನಾವಣೆಗೆ ನಿಂತುಕೊಳ್ಳಿರೆಂದು ಹೇಳಿ ನೆಹರೂ ಉಗಿಸಿಕೊಂಡಿದ್ದರು. ಮೆನನ್‌ರ ಹೆಗಲ ಮೇಲೆ ಕೈಯಿಟ್ಟು ರಕ್ಷಣಾ ಇಲಾಖೆಯ ಭ್ರಷ್ಟಾಚಾರಕ್ಕೆ ಮುದ್ರೆಯೊತ್ತಿದ್ದರು. ಇಂದಿರಾಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ. ಅವರ ಕಾಲದಲ್ಲಿ ಕಾಂಗ್ರೆಸ್ಸಿಗೆ ಹರಿದುಬಂದಷ್ಟು ಹಣ ಹಿಂದೆಂದೂ ಬಂದಿರಲಿಕ್ಕಿಲ್ಲ. ಸರ್ಕಾರ, ನ್ಯಾಯಾಲಯಗಳು, ಪೊಲೀಸ್ ಇಲಾಖೆ- ಎಲ್ಲವನ್ನೂ ಅಂಗೈಲಿಟ್ಟು ಆಡಿಸುತ್ತಿದ್ದ ಆಕೆ ಒಮ್ಮೆ ಸಿಕ್ಕಿಬಿದ್ದರು. ತನಗೆ ಬೇಕೆಂದಾಗ ಸ್ಟೇಟ್ ಬ್ಯಾಂಕ್ ಆಫ್‌ಇಂಡಿಯಾದ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ಇಂತಹವರಿಗೆ ಹಣ ತಲುಪಿಸುವಂತೆ ಆದೇಶಿಸುತ್ತಿದ್ದರು. ಇದನ್ನು ಗಮನಿಸದವರ್‍ಯಾರೋ ಆತನಿಗೊಂದು ಕಳ್ಳ ಕರೆ ಮಾಡಿ ೬೦ ಲಕ್ಷ ರೂಪಾಯಿ ಲಪಟಾಯಿಸಿಬಿಟ್ಟರು. ಆಗಲೇ ಇಂದಿರಮ್ಮನ ಭ್ರಷ್ಟತೆ ಹೊರಗೆ ಬಂದದ್ದು. ೧೯೯೧ರಲ್ಲಿ ಸ್ವಿಟ್ಜರ್‌ಲ್ಯಾಂಡಿನ ಪತ್ರಿಕೆಯೊಂದು ೧೬ ಜನರ ಕಪ್ಪುಹಣದ ವಿವರ ಪ್ರಕಟಿಸಿತು. ಅದರಲ್ಲಿ ಹದಿನೈದನೆಯ ವ್ಯಕ್ತಿ ಈ ದೇಶದ ಪ್ರಧಾನಿ ರಾಜೀವ್ ಗಾಂಧಿಯೇ ಆಗಿದ್ದುದು ಅಚ್ಚರಿ!
ಆ ಪತ್ರಿಕೆಯ ವರದಿಯಂತೆ ಆಗಲೇ ರಾಜೀವ್ ಗಾಂಧಿ ಸ್ವಿಸ್‌ಬ್ಯಾಂಕಿನಲ್ಲಿ ಇಟ್ಟಿದ್ದ ಹಣದ ಮೊತ್ತ ೨೦೦ ಕೋಟಿಯಷ್ಟಾಗಿತ್ತು. ದುರಂತವೇನು ಗೊತ್ತೆ? ಸ್ವತಃ ರಾಜೀವ್ ಆ ವರದಿಯನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಪ್ರಶ್ನಿಸಹೋದರೆ ಇನ್ನೊಂದಷ್ಟು ಸತ್ಯ ಹೊರಬಂದೀತೆಂಬ ಹೆದರಿಕೆಯಿತ್ತೇನೋ? ಕೆಲವೇ ತಿಂಗಳಲ್ಲಿ ಅವರ ಹತ್ಯೆಯಾಯ್ತು. ಆಗ ಆ ಎಲ್ಲ ಸಂಪತ್ತಿನ ವಾರಸುದಾರಿಕೆ ಬಂದದ್ದು ಸೋನಿಯಾ ಮಾಯ್ನೋರಿಗೆ!
ಆರಂಭದಲ್ಲಿ ಕಾಂಗ್ರೆಸ್ಸು ಬೇಡವೆಂದ ಸೋನಿಯಾ ನಿಧಾನವಾಗಿ ಅದರ ಜುಟ್ಟನ್ನೆ ತೆಕ್ಕೆಗೆ ತೆಗೆದುಕೊಂಡುಬಿಟ್ಟರು. ಪ್ರಧಾನಮಂತ್ರಿಯಿಂದ ಹಿಡಿದು ಕೊನೆಯ ಕಾರ್ಯಕರ್ತನವರೆಗೆ ಎಲ್ಲರೂ ತನ್ನ ಜಪ ಮಾಡುವಂತೆ ಮಾಡಿದರು. ಇತ್ತೀಚೆಗೆ ವಿವೇಕಾನಂದರಿಂದ ಪ್ರೇರಣೆ ಪಡೆದ ಒಬ್ಬ ಮಾಜಿ ಕಾಂಗ್ರೆಸ್ ಶಾಸಕರು ಸೋನಿಯಾ ಗಾಂಧಿ ಒಮ್ಮೆ ಪ್ರಧಾನಿಯಾಗುವುದನ್ನು ನೋಡಬೇಕೆಂಬುದೇ ತಮ್ಮ ಕೊನೆಯ ಆಸೆಯೆಂಬಂತೆ ಹೇಳಿಕೊಳ್ಳುತ್ತಿದ್ದರು. ತಾನೇ ಪ್ರಧಾನಿಯಾಗಬೇಕೆಂಬುದು ಅವರ ಆಸೆಯಲ್ಲ, ಈ ದೇಶದ ಪೌರತ್ವವನ್ನೂ ಸ್ವೀಕರಿಸದೆ ಓಡಲು ಸಿದ್ಧವಾಗಿದ್ದವರು ಈ ದೇಶವನ್ನು ಆಳಬೇಕಂತೆ! ಛೀ.. ಗುಲಾಮಿ ಮಾನಸಿಕತೆಯ ಪರಾಕಾಷ್ಠೆ ಇದು.
ಬಿಡಿ. ಸೋನಿಯಾ ಆನಂತರದ ದಿನಗಳಲ್ಲಿ ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್, ಮಾರ್ಗರೆಟ್ ಆಳ್ವಾ, ಸಿಬಲ್‌ರಂತಹ ಕೆಲವರನ್ನು ಮುಂದಿಟ್ಟುಕೊಂಡು ಅವರ ಬುದ್ಧಿವಂತಿಕೆಯ ಆಧಾರದ ಮೇಲೆ ಹೆಸರನ್ನೂ ಗಳಿಸಿದರು, ಹಣವನ್ನೂ ಮಾಡಿಕೊಂಡರು. ಮಗ ರಾಹುಲ್ ಸ್ವಲ್ಪ ಬುದ್ಧಿವಂತನಾಗಿದ್ದರೆ ಅಧಿಕಾರವನ್ನೂ ಕೊಡಿಸಿಬಿಡುತ್ತಿದ್ದರು. ಪಾಪ, ರಾಹುಲ್. ಅವ ಕಾಲಿಟ್ಟೆಡೆಯೆಲ್ಲ ಕಾಂಗ್ರೆಸ್ಸು ಮಣ್ಣು ಮುಕ್ಕುತ್ತಲೇ ಇದೆ. ಇತ್ತೀಚಿನ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಅನಂತ ಕುಮಾರ್ ವಿರುದ್ಧ ಕೃಷ್ಣ ಭೈರೇಗೌಡ ಗೆದ್ದೇಬಿಡುತ್ತಾರೆಂದು ಪುಕಾರು ಹಬ್ಬಿತ್ತು. ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ ಮೇಲೆ ಅನಂತ್ ಗೆಲ್ಲೋದು ಖಾತ್ರಿಯಾಯ್ತೆಂಬ ಜೋಕು ಹರಿದಾಡಿತು!
ಸೋನಿಯಾ ಕಾಲಕ್ಕೆ ಏನೆಲ್ಲ ನಡೆಯಿತು ನೋಡಿ. ೨ಜಿ ಸ್ಪೆಕ್ಟ್ರಮ್‌ನ ಒಂದೂ ಮುಕ್ಕಾಲು ಲಕ್ಷ ಕೋಟಿ ಹಗರಣ ಸ್ವಲ್ಪ ಗಲಾಟೆ ಎಬ್ಬಿಸಿತು. ಆದರೆ ಅದರ ಆರು ಪಟ್ಟು ದೊಡ್ಡದಾದ ಕಲ್ಲಿದ್ದಲು ಹಗರಣ ಮುಚ್ಚಿಯೇಹೋಯ್ತು. ಕಾಮನ್‌ವೆಲ್ತ್‌ಗೆ ನಮಗಿಂತ ಮುಂಚಿನ ದೇಶಗಳು ೫ ಸಾವಿರ ಕೋಟಿಗಿಂತ ಹೆಚ್ಚು ಖರ್ಚು ಮಾಡಿರಲಿಲ್ಲ. ನಮ್ಮ ನಂತರದ ಇಂಗ್ಲೆಂಡು ೨ ಸಾಔಇರ ಕೋಟಿ ಖರ್ಚಿನ ಅಂದಾಹು ವೆಚ್ಚ ಪ್ರಕಟಿಸಿದೆ. ಆದರೆ ಭಾರತ ಮಾಡಿದ ಖರ್ಚು ಬರೋಬ್ಬರಿ ೬೦ಸಾವಿರ ಕೋಟಿ. ಇದರಲ್ಲಿ ಯಾರ ಪಾಲು ಎಷ್ಟೆಷ್ಟು ಲೆಕ್ಕ ಇದೆಯೇನು? ಪುಣೆಯ ಒಬ್ಬ ಮಾಮೂಲಿ ವ್ಯಕ್ತಿ ಹಸನ್ ಖಾನ್ ೮೦೦ ಕೋಟಿ ಡಾಲರಿನಷ್ಟು ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿಟ್ಟಿದ್ದಾನೆ. ಆತನಿಗೆ ಸೋನಿಯಾರ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲನೊಂದಿಗೆ ಬಲವಾದ ಸಂಪರ್ಕವೂ ಇದೆ. ಇವೆಲ್ಲ ಎಲ್ಲರಿಗೂ ಗೊತ್ತು. ಆದರೂ ಮಾತಾಡುವಂತಿಲ್ಲ. ಆಂಧ್ರದ ರಾಜಶೇಖರ ರೆಡ್ಡಿ ಹತ್ತಿರಹತತಿರ ಒಂದು ಲಕ್ಷ ಕೋಟಿ ಅವ್ಯವಹಾರ ನಡೆಸಿದರೂ ಸಿಕ್ಕಿಬೀಳಲಿಲ್ಲ. ಏಕೆ? ಸೋನಿಯಾರ ಅಭಯ. ಅತ್ಯಂತ ಬಡ ಕುಟುಂಬದಿಂದ ಬಂದವರು ಸೋನಿಯಾ. ಈಗ ಅವರ ಕುಟುಂಬ, ಬಂಧು ಬಳಗ ಇಟಲಿಯಲ್ಲಿ ಪರಮ ಸಿರಿವಂತರಾಗಿದ್ದಾರಲ್ಲ, ಹೇಗಿದು?
ಈ ಎಲ್ಲ ಪ್ರಶ್ನೆಗಳನ್ನು ಸ್ವಾಮಿ ಪ್ರಧಾನಿಯವರಿಗೆ ಕೇಳಿದ್ದಾರೆ. ತನಿಖೆಗೆ ಆದೇಶ ಕೊಡಿ ಎಂದೂ ಆಗ್ರಹಿಸಿದ್ದಾರೆ. ಮನಮೋಹನರಿಗೆ ಈಗ ಪೀಕಲಾಟ. ಅದರಿಂದ ಪಾರಾಗಿ ಮುಖ ಉಳಿಸಿಕೊಳ್ಳಲು ಅವರಿಗಿದ್ದುದು ಒಂದೇ ಮಾರ್ಗ. ಶ್ವೇತ ಪತ್ರ ಹೊರಡಿಸುವುದು. ಶ್ವೇತ ಪತ್ರವೆಂದರೆ ಒಂದು ವಿಚಾರದ ಸಂಪೂರ್ಣ ಅಧ್ಯಯನ ಅಂತಲೇ ಅರ್ಥ. ಸಮಸ್ಯೆಯ ಆಳ  ವಿಸ್ತಾರಗಳನ್ನು ಅರಿತು, ಪರಿಹಾರದ ಕಡೆಗೆ ಸಾಗುವ ಪ್ರಯತ್ನ. ಆಪ್ತಮಿತ್ರ ಪ್ರಣಬ್ ಮುಖರ್ಜಿಯ ಕೈಲಿ ಈ ಕೆಲಸವನ್ನು ಮಾಡಿಸಿ ಮನಮೋಹನ ಸಿಂಗರು ನಿರಾಳರಾಗಿದ್ದಾರೆ. ಆದರೆ ಯಾವ ಶ್ವೇತ ಪತ್ರ ಅಂತರಂಗ ಬಹಿರಂಗಗಳನ್ನು ಜಾಲಾಡಿ ಕಪ್ಪು ಹಣದೊಡೆಯರ ಎದೆ ಕುಟ್ಟಬೇಕಿತ್ತೋ ಅದು ಸರ್ಕಾರದ ಮುಖ ಉಳಿಸಿಕೊಳ್ಳುವ ಕೆಲಸ ಮಾಡಿದೆ ಅಷ್ಟೆ. ಅದಕ್ಕೇ ಜಸ್ವಂತ ಸಿಂಗರು ಈ ಶ್ವೇತ ಪತ್ರ ಬಿಕಿನಿ ಇದ್ದಂತಿದೆ. ಪ್ರಮುಖವಾದ್ದನ್ನು ಬಚ್ಚಿಟ್ಟು, ಉಳಿದೆಲ್ಲವನ್ನೂ ಬಿಚ್ಚಿಟ್ಟಿದೆ ಎಂದಿರೋದು.
ಅಲ್ಲದೆ ಮತ್ತೇನು? ಇಡಿಯ ಶ್ವೇತಪತ್ರದಲ್ಲೆಲ್ಲೂ ಪಾರ್ಟಿಸಿಪೇಟರಿ ನೋಟ್‌ಗಳಿಂದಾದ ತೊಂದರೆಗಳನ್ನು ತೀವ್ರವಾಗಿ ಉಲ್ಲೇಖ ಮಾಡಿಯೇ ಇಲ್ಲ. ಶೆರು ಮಾರುಕಟ್ಟೆಗೆ ದಾಖಲೆಗಳೇ ಇಲ್ಲದೆ ಲಗ್ಗೆ ಇಡುವ ಹೊರದೇಶಗಳ ಬಂಡವಾಳಕೋರರು ಭಾರತದ ಅರ್ಥವ್ಯವಸ್ಥೆಯನ್ನು ಬುಡಸಹಿತ ಅಲುಗಾಡಿಸುವ ಬಗ್ಗೆ ಚಿಂತೆಯೇ ಇಲ್ಲ. ಹಸನ್ ಅಲಿಯಂತಹ ಕೆಲವರು ಭ್ರಷ್ಟ ರಾಜಕಾರಣಿಗಳ ಕಪ್ಪುಹಣವನ್ನು ಶೇರು ಮಾರುಕಟ್ಟೆಗೆ ತಂದು ಬಿಳಿ ಮಾಡಿಕೊಡುತ್ತಿದ್ದುದು ಇದರ ಮೂಲಕವೇ. ಹವಾಲಾದ ಮೂಲಕ ಇಲ್ಲಿಂದ ಕಪ್ಪುಹಣ ಹೊರಗೆ ಹೋದರೆ, ಅಲ್ಲಿಂದ ಅದು ಪಾರ್ಟಿಸಿಪೇಟರಿ ನೋಟ್‌ಗಳ ಮೂಲಕ ಭಾರತಕ್ಕೆ ಬಂದು ಬಿಳಿಯಾಗಿಬಿಡುತ್ತಿತ್ತು. ಚಿದಂಬರಂ ಕೈವಾಡ ಇದರಲ್ಲಿ ಅಪಾರ. ಇಂತಹ ಭ್ರಷ್ಟ ಹಣದ ಕುರಿತು ಪತ್ರ ಬೆಳಕುಚೆಲ್ಲಲೇ ಇಲ್ಲ.
ಈ ದೇಶದಲ್ಲಿ ತನ್ನ ಆಸ್ತಿಯನ್ನು ಮಾರಾಟ ಮಾಡಿಹೋಗಿರುವ ಹಚ್ ಕಂಪನಿಯ ಉಲ್ಲೇಖವಷ್ಟೆ ಇಡಿಯ ಶ್ವೇತ ಪತ್ರದಲ್ಲಿ ಪ್ರಾಮುಖ್ಯತೆ ಪಡೆದಿದ್ದು. ಹಚಿನ್‌ಸನ್ ಕಂಪನಿ ೧೯೯೨ರಲ್ಲಿ ಕೇಮೆನ್ ದ್ವೀಪದಲ್ಲಿ ನಾಮ್‌ಕಾವಾಸ್ತೆ ಕಂಪನಿಯೊಂದನ್ನು ತೆರೆದು ಅದರ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿತು. ಭಾರತ ಸರ್ಕಾರ ಇಷ್ಟು ವರ್ಷದ ಲಾಭ ನಷ್ಟಗಳ ಲೆಕ್ಕ ಕೊಡಿರೆಂದು ಕೇಳಿದಾಗ, ಕೇಮೆನ್ ದ್ವೀಪದ ಸರ್ಕಾರ ಲೆಕ್ಕ ಇಡೋದನ್ನು ಕಡ್ಡಾಯ ಮಾಡಿಲ್ಲವಾದ್ದರಿಂದ ನಾವು ಲೆಕ್ಕ ಕೊಡಲಾರೆವು ಎಂದುಬಿಟ್ಟಿತು. ನಮ್ಮ ತೆರಿಗೆ ಅಧಿಕಾರಿಗಳು ಬಾಯ್ಮುಚ್ಚಿಕೊಂಡು ಮರಳಿ ಬಂದರು. ಹಚಿನ್‌ಸನ್‌ನ ಮೂಲಕ ಭಾರತದಲ್ಲಿ ಕಪ್ಪು ಹಣ ಹೂಡಿ, ಕೆಲವು ವರ್ಷಗಳ ನಂತರ ಮತ್ತೊಂದು ಕಂಪನಿಗೆ ಅದನ್ನು ಮಾರಿ ಬಿಳಿಯ ಹಣ ಮಾಡಿಕೊಳ್ಳಲಾಯ್ತಲ್ಲ! ಹೇಗಿದೆ ವರಸೆ? ಇಷ್ಟನ್ನೂ ಹೇಳಿ ಪ್ರಣಬ್ ಹ್ಯಾಪುಮೋರೆ ಹಾಕಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಧಂಧೆಯ ಕುರಿತಂತೆಯೂ ಶ್ವೇತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ ದುಬೈನ ಮಾಫಿಯಾ ಡಾನ್‌ಗಳು ಬೆಂಗಳೂರು, ಮುಂಬೈ, ದಿಲ್ಲಿಯಲ್ಲಿ ಜಮೀನಿನ ಮೇಲೆ ಜಮೀನು ಖರೀದಿಸುತ್ತಿದ್ದು, ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿರುವುದರ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ.
ನಮ್ಮ ಹಣ ಈಗ ಸ್ವಿಸ್‌ನ ದಾರಿ ಬಿಟ್ಟಿದೆ. ಅದು ದುಬೈನತ್ತ ಹೊರಳುತ್ತಿದೆ. ಬಲಾಢ್ಯ ಚೀನಾ ನಮ್ಮ ಹಣ ತನ್ನ ಒಡಲಲ್ಲಿ ಬಚ್ಚಿಟ್ಟುಕೊಳ್ಳುವತ್ತ ಆಸಕ್ತಿ ತೋರುತ್ತಿದೆ. ಅಣ್ಣಾ ಹಜಾರೆ  ರಾಮದೇವ್ ಬಾಬಾರ ಹೋರಾಟದ ಕಾಲಕ್ಕೆ ದೇಶದಿಂದ ಹೊರಗಿದ್ದ ಸೋನಿಯಾ ತಮ್ಮ ದುಡ್ಡನ್ನು ಸರಿಯಾದ ಠಿಕಾಣಿಗೆ ತಲುಪಿಸಲು ಹೋಗಿದ್ದರಾ? ಪ್ರಶ್ನೆಗೆ ಉತ್ತರ ಪಡೆಯಲು ಬಹಳ ಕಾಯಬೇಕಿಲ್ಲ. ಇನ್ನು ಎರಡು ತಿಂಗಳಿಗೆ ವಿಚಾರಣೆ ಶುರುವಾಗುತ್ತೆ. ಅದಕ್ಕೆ ಮುನ್ನ ಅವರು ದೇಶ ತ್ಯಜಿಸಿದರೆ ಕಾಂಗ್ರೆಸ್ ದುರ್ದೆಸೆ ಹಿಡಿಯುವುದು ಖಾತ್ರಿ.

Comments are closed.