ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ ವಿನಾಶದ ಸಹಿ ಸೋನಿಯಾರದ್ದೇ!

ಈ ಪರಿವಾರಕ್ಕೆ ಕಸಿದುಕೊಳ್ಳುವ ತಾಕತ್ತಿದೆ. ಎದುರು ಬಿದ್ದವರನ್ನು ಮಂಡಿಯೂರಿ ಕುಳಿತು ಗೋಗರೆಯುವಂತೆ ಮಾಡಿಬಿಡುವ ಸಾಮಥ್ರ್ಯವಿದೆ. ಕೊನೆಗೆ ದ್ವೇಷವಿಟ್ಟುಕೊಂಡರೆ ಸತ್ತಮೇಲೂ ಅದನ್ನು ಸಾಧಿಸುವ ಹಠವಿದೆ!

ನರಸಿಂಹರಾಯರು ಘಾಟಿ ಆಸಾಮಿ. ಕಾಂಗ್ರೆಸ್ ಪಕ್ಷವನ್ನು ಪರಿವಾರದ ಮುಷ್ಟಿಯಿಂದ ಹೊರತರಬೇಕೆಂದು ಅವರು ಯಾವಾಗಲೋ ಆಲೋಚಿಸಿಬಿಟ್ಟಿದ್ದರು. ಅಜರ್ುನ್ಸಿಂಗ್ ತಮ್ಮ ಜೀವನಚರಿತ್ರೆಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ, ‘ತಕ್ಷಣ ಕುಪಿತರಾದ ರಾವ್ ಮನಸ್ಸೊಳಗಿದ್ದುದನ್ನೆಲ್ಲಾ ಹೊರಹಾಕಿಬಿಟ್ಟರು. ಕಾಂಗ್ರೆಸ್ ಪಕ್ಷವೆಂಬುದು ನೆಹರೂ-ಗಾಂಧಿ ಪರಿವಾರವೆಂಬ ಇಂಜಿನ್ನಿಗೆ ತೂಗುಹಾಕಿಕೊಂಡು ಓಡುವ ರೈಲಲ್ಲ’ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ರಾಜೀವ್ ಸಾವಿನ ನಂತರ ಸೋನಿಯಾರನ್ನು ರಾಜಕಾರಣಕ್ಕೆ ಬರುವಂತೆ ಸಾಕಷ್ಟು ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಆಕೆ ಸುತರಾಂ ಒಪ್ಪಿರಲಿಲ್ಲ. ಮನಮೋಹನ್ಸಿಂಗರ ಅವಧಿಯಲ್ಲಿ ವಿದೇಶಾಂಗ ಮಂತ್ರಿಯಾಗಿದ್ದು ಅನಿವಾರ್ಯವಾಗಿ ರಾಜಿನಾಮೆ ಕೊಡಬೇಕಾದ ಪ್ರಸಂಗಕ್ಕೆ ಸಿಲುಕಿದ ನಟವರ್ಸಿಂಗ್ ತಮ್ಮ ಕೃತಿಯಲ್ಲಿ ಈ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಸೋನಿಯಾರ ಬದುಕಿನಲ್ಲಿ ಮೂರು ವಿಷಮ ಘಟ್ಟಗಳಂತೆ. ಮೊದಲನೆಯದು ಮದುವೆಯಾಗಿ ಬಂದು ದೇಶದ ಅತ್ಯಂತ ಹೆಸರುವಾಸಿ ಪರಿವಾರದ ಸೊಸೆಯಾಗಿ ಸಂಭಾಳಿಸಿಕೊಂಡು ಹೋಗಿದ್ದು. ಎರಡನೆಯದು ಅತ್ತೆಯ ಸಾವಿನ ನಂತರ ಗಂಡನನ್ನು ರಾಜಕೀಯಕ್ಕೆ ಪದಾರ್ಪಣೆ ಮಾಡದಂತೆ ತಡೆಯಲು ಪ್ರಯತ್ನಿಸಿ ಸೋತು ಅನಿವಾರ್ಯಕ್ಕೆ ಪ್ರಧಾನಿಯ ಹೆಂಡತಿ ಎನಿಸಿಕೊಂಡಿದ್ದು. ಮತ್ತು ಮೂರನೆಯದು ಮುಂದಿನ ಏಳು ವರ್ಷಗಳ ನಂತರ ಗಂಡನ ಸಾವಿಗೂ ಸಾಕ್ಷಿಯಾಗಿ ರಾಜಕಾರಣದಿಂದ ದೂರವಿರುವ ಹಠವನ್ನು ಸಾಕಾರಗೊಳಿಸಿಕೊಂಡು ಕೊನೆಗೆ 98ರಲ್ಲಿ ಅನಿವಾರ್ಯವಾಗಿ ತಾನೇ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದಿದ್ದು! ಹಾಗೆಂದು ನಟವರ್ಸಿಂಗರೇ ಆಕೆಯ ಬದುಕನ್ನು ವಿಂಗಡಿಸುತ್ತಾರೆ.

2

ಸೋನಿಯಾರಿಗೆ ನರಸಿಂಹರಾಯರನ್ನು ಕಂಡರೆ ಅಷ್ಟಕ್ಕಷ್ಟೇ. ಆಕೆಯ ಶಾಂತ ವಿರೋಧದ ನಡುವೆಯೂ ಅವರು ಕಾಂಗ್ರೆಸ್ಸಿನ ಗದ್ದುಗೆ ಏರಿದ್ದಲ್ಲದೇ ಪ್ರಧಾನಿಯೂ ಆಗಿದ್ದರು. ತಮ್ಮ ಅವಧಿಯಲ್ಲಿ ಸಮರ್ಥವಾದ ಆಳ್ವಿಕೆಯನ್ನು ಕೊಟ್ಟು ಪರಿವಾರ ಭಜಕರು ಬೆಕ್ಕಸ ಬೆರಗಾಗುವಂತೆ ಆಡಳಿತ ನಡೆಸಿದರು. ಮುಂದೆ ಮರು ಅವಧಿಗೆ ಅವರು ಪ್ರಧಾನಿಯಾಗುವ ಕಸರತ್ತು ಆರಂಭಿಸುವ ಮುನ್ನವೇ ಪರಿವಾರ ನಿಷ್ಠರು ಸಕರ್ಾರದಿಂದ ದೂರ ಉಳಿಯುವ ಇರಾದೆಯನ್ನು ವ್ಯಕ್ತಪಡಿಸಿ ನರಸಿಂಹರಾಯರ ಕಥೆಯನ್ನು ಮುಗಿಸಿದರು, ಕಾಂಗ್ರೆಸ್ಸಿನದ್ದೂ ಕೂಡ! ನರಸಿಂಹರಾಯರು ಮತ್ತೊಮ್ಮೆ ಅಧಿಕಾರ ನಡೆಸಿ ಕಾಂಗ್ರೆಸ್ಸಿಗೊಂದು ಸಂವಿಧಾನಾತ್ಮಕವಾದ, ಪ್ರಜಾಪ್ರಭುತ್ವ ಮಾದರಿಯ ತಳಹದಿ ಹಾಕಿಕೊಟ್ಟಿದ್ದರೆ ಇಂದು ರಾಹುಲನ ಪಾದಗಳಲ್ಲಿ ಕಾಂಗ್ರೆಸ್ಸನ್ನಿಡಬೇಕಾದ ಅನಿವಾರ್ಯತೆ ಬರುತ್ತಿರಲಿಲ್ಲ. ಆದರೆ ವಿಧಿನಿಯಮ ಬೇರೆಯೇ ಇದ್ದುದರಿಂದ ಕಾಂಗ್ರೆಸ್ಸು ನರಸಿಂಹರಾಯರ ತೆಕ್ಕೆಯಿಂದ ಕಳಚಿ ಸೀತಾರಾಮ್ ಕೇಸರಿಯವರ ಮಡಿಲಿಗೆ ಬಿತ್ತು. ಕೇಸರಿಯವರು ಕಾಂಗ್ರೆಸ್ಸಿಗರ ಪಾಲಿಗೆ ಚಾಚಾ ಆಗಿದ್ದರು. ನೆಹರೂ ಪಾರಿವಾರದ, ಗಾಂಧಿ ವಿಚಾರಧಾರೆಯ ಪರಮಭಕ್ತರಾಗಿದ್ದ ಅವರು ಸಹಜವಾಗಿಯೇ ಎಲ್ಲರ ಆಯ್ಕೆಯಾಗಿ ಹೊಮ್ಮಿದುದರಲ್ಲಿ ಅಚ್ಚರಿಯಿಲ್ಲ. ನರಸಿಂಹರಾಯರು ಕಾಂಗ್ರೆಸ್ಸಿನ ಮೂಲ ಚಿಂತನೆಗಳಿಗೆ ಕುಠಾರಾಘಾತ ಮಾಡಿದ ನಂತರ ಈ ಒಂದು ಬದಲಾವಣೆ ಅನಿವಾರ್ಯವಾಗಿತ್ತು. ಹಾಗೆ ನೋಡಿದರೆ, ಮೇಲ್ನೋಟಕ್ಕೆ ನೆಹರೂ ಭಕ್ತರೆನಿಸಿಕೊಂಡಿದ್ದ ಕೇಸರಿಯವರು ಆಂತರ್ಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ರ ಪರಮ ಆರಾಧಕರಾಗಿದ್ದರು. ನರಸಿಂಹರಾಯರನ್ನು ಅಮಾನುಶವಾಗಿ ಹೊರದಬ್ಬಿದ ಮೇಲೆ ಸೀತಾರಾಮ್ ಕೇಸರಿ ಎಲ್ಲರ ಕಣ್ಣೊರೆಸಿ ಅಧಿಕಾರ ಹಿಡಿಯಬಲ್ಲ ಸಮರ್ಥರಾಗಿ ಕಂಡುಬಂದಿದ್ದರು.

3

ಆದರೆ ನರಸಿಂಹರಾಯರು ಕಾಂಗ್ರೆಸ್ಸಿಗೆ ತಂದುಕೊಟ್ಟಂತಹ ಸ್ವಾಭಿಮಾನದ ಹೂಂಕಾರದ ಪರಿಣಾಮವಾಗಿ ಸೀತಾರಾಮ್ ಕೇಸರಿಯವರಿಗೆ 81ನೇ ವಯಸ್ಸಿನಲ್ಲೂ ಹೊಸ ಶಕ್ತಿ ಆವಾಹನೆಯಾಗಿತ್ತು. ಚುನಾವಣೆಗಳಲ್ಲಿ ಸೋನಿಯಾಗಿಂತ ತಾನೇ ಪ್ರಭಾವಿ ಎಂಬುದನ್ನು ಅವರು ಆಪ್ತ ಮಾತುಕತೆಗಳಲ್ಲಿ ಮುಲಾಜಿಲ್ಲದೇ ಹೇಳುತ್ತಿದ್ದರು. ಕಾಂಗ್ರೆಸ್ಸಿನ ಭವಿಷ್ಯ ದುಗರ್ಾರೂಪಿಣಿಯಾದ ಮಮತಾ ಬ್ಯಾನಜರ್ಿಯವರ ಕೈಲಿದೆ ಎಂಬುದನ್ನು ಹೇಳುತ್ತಾ ಸೋನಿಯಾರನ್ನು ಅವಗಣನೆ ಮಾಡುವ ಪ್ರಯತ್ನ ಚಾಚಾ ಮುಲಾಜಿಲ್ಲದೇ ಮಾಡುತ್ತಿದ್ದರು. ಅಷ್ಟೇ ಅಲ್ಲ, ಶರತ್ ಪವಾರ್, ಜಿತೇಂದ್ರಪ್ರಸಾದ್, ನರಸಿಂಹರಾಯರಂಥವರಿಗೂ ಕರೆ ಮಾಡಿ ಸೋನಿಯಾ ವಿರುದ್ಧ ತೊಡೆತಟ್ಟುವಂತೆ ಆಹ್ವಾನ ಕೊಡುತ್ತಲೇ ಇರುತ್ತಿದ್ದರು. ಇದು ಸೋನಿಯಾ ಆಪ್ತವಲಯಕ್ಕೆ ಕಿರಿಕಿರಿ ಉಂಟುಮಾಡುತ್ತಿದ್ದುದು ನಿಜ. ಅಷ್ಟೇ ಅಲ್ಲದೇ, ಅಧಿಕಾರದಲ್ಲಿದ್ದ ದೇವೇಗೌಡರಿಗೆ ಕೊಟ್ಟ ಬೆಂಬಲವನ್ನು ಹಿಂತೆಗೆದುಕೊಂಡ ಕೇಸರಿ ಪ್ರಧಾನಮಂತ್ರಿ ಅಭ್ಯಥರ್ಿಯಾಗಿ ತನ್ನನ್ನು ಎಲ್ಲರೂ ಒಪ್ಪುತ್ತಾರೆಂದು ಭಾವಿಸಿಬಿಟ್ಟಿದ್ದರು. ಆದರೆ ಒಟ್ಟಾರೆ ಸಮ್ಮಿಶ್ರ ಸಕರ್ಾರದ ಪ್ರಮುಖರೆಲ್ಲಾ ಐ.ಕೆ ಗುಜರಾಲ್ರಿಗೆ ಪಟ್ಟಕಟ್ಟಿ ಸೀತಾರಾಮ್ ಕೇಸರಿ ಸಹಕಾರ ಕೊಡುವಂತೆ ಮಾಡಿಬಿಟ್ಟರು. ಇದು ಬಹಳ ದಿನಗಳ ಕಾಲ ಉಳಿಯಲಿಲ್ಲ. ಕಾಂಗ್ರೆಸ್ಸು ಗುಜರಾಲ್ರಿಗೆ ಕೊಟ್ಟ ಬೆಂಬಲವನ್ನು ಬಲುಬೇಗ ಹಿಂಪಡೆದುಕೊಂಡುಬಿಟ್ಟಿತು. ಇದು ಕಾಂಗ್ರೆಸ್ಸಿನ ಪಾಲಿಗೆ ದೊಡ್ಡ ಹೊಡೆತ ಕೊಡುವ ಲಕ್ಷಣ ಕಂಡುಬಂದಿತು. ಇದ್ದಕ್ಕಿದ್ದ ಹಾಗೆ ಜನರ ಕಂಗಳಲ್ಲಿ ಕೇಸರಿ ಖಳನಾಯಕರಾದರು. ಇನ್ನು ಪರಿವಾರದ ಅವಶ್ಯಕತೆಯನ್ನು ಜನ ಮರೆತೇಬಿಡುತ್ತಾರೆ. ಕಾಂಗ್ರೆಸ್ಸು ಇತರೆಲ್ಲಾ ಪಕ್ಷಗಳಂತೆ ಸಹಜವಾಗಿಯೇ ಕೆಲಸ ನಿರ್ವಹಿಸಲಾರಂಭಿಸುತ್ತದೆ ಎಂಬ ಧಾವಂತ ಕಾಡುತ್ತಿದ್ದಂತೆ ಸೋನಿಯಾರನ್ನು ಒಲಿಸುವ ಪ್ರಯತ್ನ ಮತ್ತೆ ಶುರುವಾಯ್ತು. ಬಲುವಾಗಿ ತಿರಸ್ಕರಿಸುತ್ತಿದ್ದ ಆಕೆ ಕೊನೆಗೂ ಪೂರ್ಣಪ್ರಮಾಣದಲ್ಲಿ ಅಧ್ಯಕ್ಷಗಾದಿಯನ್ನು ಅಲಂಕರಿಸಲು ಒಪ್ಪಿಕೊಂಡರು. ಆದರೆ ಪಕ್ಷದ ವಲಯದಲ್ಲಿ ಎಲ್ಲರಿಗೂ ಬೇಕಾಗಿದ್ದ ಕೇಸರಿಯವರನ್ನು ಕೆಡವುವುದು ಅಷ್ಟು ಸುಲಭವಿರಲಿಲ್ಲ. ಅಧಿವೇಶನಕ್ಕೆ ಹೋದ ಸೋನಿಯಾರನ್ನು ಆಯ್ಕೆ ಮಾಡಲೆಂದು ಆಕೆಯ ಆಪ್ತವಲಯ ಎಲ್ಲ ಕಸರತ್ತುಗಳನ್ನು ಮಾಡಿ ವಿರೋಧಿಸಬಹುದಾಗಿದ್ದ ಕೇಸರಿಯವರನ್ನು ಶೌಚಾಲಯದೊಳಕ್ಕೆ ಕೂಡಿಹಾಕಿ ಸೋನಿಯಾ ಅಧ್ಯಕ್ಷರೆಂದು ಘೋಷಿಸಿಬಿಟ್ಟರು. ಇದನ್ನು ಸಹಿಸಲಾಗದೇ ಹಿರಿಯ ನಾಯಕರಾದ ಪವಾರ್, ಸಂಗ್ಮಾ ಪಕ್ಷವನ್ನೇ ತ್ಯಜಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಕಟ್ಟಿಕೊಂಡರು. ಪಕ್ಷಕ್ಕಾಗಿ ದಶಕಗಳನ್ನೇ ಸವೆಸಿದ ವಯೋವೃದ್ಧ ಸೀತಾರಾಮ್ ಕೇಸರಿ ಅಂದು ಶೌಚಾಲಯದ ಕೋಣೆಗಳಲ್ಲಿ ಎಷ್ಟು ಹೊತ್ತು ಕಣ್ಣೀರಿಡುತ್ತಾ ಕುಳಿತಿದ್ದರೋ ದೇವರೇ ಬಲ್ಲ. ಈ ಪರಿವಾರಕ್ಕೆ ಕಸಿದುಕೊಳ್ಳುವ ತಾಕತ್ತಿದೆ. ಎದುರು ಬಿದ್ದವರನ್ನು ಮಂಡಿಯೂರಿ ಕುಳಿತು ಗೋಗರೆಯುವಂತೆ ಮಾಡಿಬಿಡುವ ಸಾಮಥ್ರ್ಯವಿದೆ. ಕೊನೆಗೆ ದ್ವೇಷವಿಟ್ಟುಕೊಂಡರೆ ಸತ್ತಮೇಲೂ ಅದನ್ನು ಸಾಧಿಸುವ ಹಠವಿದೆ! ಪಿ.ವಿ ನರಸಿಂಹರಾಯರು ಮಾಡಿದ ಸಾಧನೆಗಳನ್ನು ತನ್ನ ಭಾಷಣಗಳಲ್ಲಿ ಸೋನಿಯಾ ಉಲ್ಲೇಖಿಸದೇ ಕೈಬಿಟ್ಟಿದ್ದು ವ್ಯಾಪಕವಾದ ಚಚರ್ೆಗೆ ಒದಗಿತ್ತು. ಅವರ ಶವವೂ ಕಾಂಗ್ರೆಸ್ಸಿನ ಕೇಂದ್ರಕಛೇರಿಯ ಒಳಗೆ ಬರದಂತೆ ಪರಿವಾರ ಭಜಕರು ನೋಡಿಕೊಂಡಿದ್ದರು. ಸೋನಿಯಾ ಆಪ್ತವಲಯದಲ್ಲಿದ್ದ ಮಾರ್ಗರೇಟ್ ಆಳ್ವಾ ತಮ್ಮ ಕೃತಿಯಲ್ಲಿ, ‘ಎಷ್ಟಾದರೂ ಅವರೊಬ್ಬ ಮಾಜಿ ಪ್ರಧಾನಿಯಾಗಿದ್ದರು ಮತ್ತು ಈ ಹಿಂದಿನ ಎಲ್ಲ ನಿಯಮಗಳಂತೆ ಅವರ ಶವವನ್ನು ಕಾಂಗ್ರೆಸ್ಸಿನ ಕೇಂದ ಕಛೇರಿಯೊಳಗೆ ಜನರ ದರ್ಶನಕ್ಕಾಗಿ ಇರಿಸಲೇಬೇಕಿತ್ತು’ ಎಂದು ಬರೆದಿದ್ದಾರೆ. ಸೀತಾರಾಮ್ ಕೇಸರಿಯವರದ್ದೂ ಅದೇ ಕಥೆ. ಕಾಂಗ್ರೆಸ್ಸಿನ ಅಧ್ಯಕ್ಷರ ಕುರಿತಂತೆ ವೆಬ್ಸೈಟ್ಗಳಲ್ಲಿ ವಿವರ ಪ್ರಕಟವಾದಾಗ ಅದರಲ್ಲಿ ಕೇಸರಿಯವರ ಹೆಸರನ್ನೇ ತೆಗೆದು ಬಿಸಾಡಲಾಗಿತ್ತು. ಇತಿಹಾಸವನ್ನೇ ತಿರುಚಿ ಅಭ್ಯಾಸವಿರುವ ಕಾಂಗ್ರೆಸ್ಸಿಗರಿಗೆ ಕೇಸರಿಯವರ ಹೆಸರನ್ನು ಕಾಂಗ್ರೆಸ್ಸಿನ ಇತಿಹಾಸದಿಂದ ಮಾಯ ಮಾಡುವುದು ಅದೆಂಥ ದೊಡ್ಡ ಕೆಲಸ ಹೇಳಿ?!

4

ಸೋನಿಯಾರ ಮೊದಲ ಭಾಷಣವನ್ನು ನಟವರ್ಸಿಂಗ್ ಸ್ವಾರಸ್ಯಕರವಾಗಿ ನೆನಪಿಸಿಕೊಳ್ಳುತ್ತಾರೆ. ಸ್ವತಃ ಆತ ಮತ್ತು ಮಾಜಿಮಂತ್ರಿ ಜಯರಾಮ್ ರಮೇಶ್ ಸೋನಿಯಾರಿಗೆ ಭಾಷಣ ತರಬೇತಿ ಮಾಡಲೆಂದು ಕುಳಿತುಕೊಳ್ಳುತ್ತಿದ್ದರಂತೆ. ಇಂಗ್ಲೀಷಿನಲ್ಲಿ ಬರೆದ ಭಾಷಣವನ್ನು ಹಿಂದಿಗೆ ತಜರ್ುಮೆ ಮಾಡಿ ಅದನ್ನು ದಪ್ಪ ಅಕ್ಷರಗಳಲ್ಲಿ ಬರೆದು ಸೋನಿಯಾ ಕೈಗಿಡಲಾಗುತ್ತಿತ್ತಂತೆ. ಆಕೆ ಅದನ್ನು ಓದುತ್ತಾ ಇವರೆದುರು ಒಪ್ಪಿಸಬೇಕಿತ್ತಂತೆ. ಅನೇಕ ಬಾರಿ ತನ್ನಿಂದ ಸಾಧ್ಯವಿಲ್ಲವೆಂದು ಕೈಚೆಲ್ಲಿಯೂ ಆಗಿತ್ತಂತೆ! ಆದರೆ ಕಾಲಕ್ರಮೇಣ ಹಿಡಿತ ಪಡೆದುಕೊಂಡ ಆಕೆ ಸುದೀರ್ಘ ಭಾಷಣವನ್ನು ಮಾಡಲು ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಇದೇ ಭಾಷಣದ ಶೈಲಿಯನ್ನು ಬಳಸಿ ಅಮೇಥಿಯಿಂದ ಸಂಸದೆಯಾಗಿಯೂ ಆಯ್ಕೆಯಾಗಿಬಿಟ್ಟರು. ನಿಧಾನವಾಗಿ ಸಕರ್ಾರದಿಂದ ವಿದೇಶಪ್ರವಾಸಕ್ಕೆ ಹೋಗಬೇಕಾದವರ ಪಟ್ಟಿಯಲ್ಲಿ ಆಕೆಯ ಹೆಸರೂ ಸೇರ್ಪಡೆಗೊಂಡು ವ್ಯಾಪಕ ಗೌರವಕ್ಕೆ ಪಾತ್ರರಾಗಲಾರಂಭಿಸಿದರು. ಇತ್ತ ಪತ್ರಕರ್ತರಿಗೆ ಆಕೆ ಸಿಗುತ್ತಿದ್ದುದು ಬಲು ಕಡಿಮೆ. ಅನೇಕ ಬಾರಿ ಆಕೆಯ ಮನಸ್ಸಿನೊಳಗೇನು ನಡೆಯುತ್ತಿದೆ ಎಂಬುದನ್ನು ಜೊತೆಗಿದ್ದವರೂ ಅಥರ್ೈಸಿಕೊಳ್ಳಲು ಸೋಲುತ್ತಿದ್ದರು. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ವಾಸ್ತವವಾಗಿ ಆಕೆ ಮುಗುಮ್ಮಾಗಿರುತ್ತಿದ್ದರು. ಒಳಗೆ ಸಿಕ್ಕಾಪಟ್ಟೆ ಲೆಕ್ಕಾಚಾರ ನಡೆಯುತ್ತಲೇ ಇರುತ್ತಿತ್ತು. 1997ರ ಆಗಸ್ಟ್ನಲ್ಲಿ ಇಂದಿರಾಗಾಂಧಿ ಮೆಮೊರಿಯಲ್ ಟ್ರಸ್ಟ್ನ ಮೂಲಕ ಆಕೆ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಜಾಂಬಿಯಾದ ಅಧ್ಯಕ್ಷ ಕೆನೆತ್ ಕಾಂಡಾ ಅವರನ್ನು ಆಹ್ವಾನಿಸಿದ್ದರು. ಹಿಂದಿನ ವರ್ಷ ಕಾರ್ಯಕ್ರಮ ನಡೆಸಿದಾಗ ಸೂರಿಯ ಲಲಿತ್ ಹೋಟೆಲ್ನಲ್ಲಿ ಅತಿಥಿಗಳನ್ನು ಉಳಿಸಿದ್ದರು. ಏನನ್ನಿಸಿತೋ ಏನೋ ಈ ಬಾರಿ ಅದನ್ನು ಬದಲಾಯಿಸಿ ಎಲ್ಲಾ ಅತಿಥಿಗಳನ್ನು ಒಬೆರಾಯ್ ಹೊಟೆಲ್ನಲ್ಲಿ ಉಳಿದುಕೊಳ್ಳುವಂತೆ ಆಕೆ ವ್ಯವಸ್ಥೆ ಮಾಡಿದ್ದರು. ಜಾಂಬಿಯಾದ ಅಧ್ಯಕ್ಷರು ತಡರಾತ್ರಿ ಬಂದು ಹಿಂದಿನ ವರ್ಷದಂತೆ ಲಲಿತ್ ಹೊಟೆಲ್ನಲ್ಲೇ ಹೋಗಿ ಉಳಿದುಕೊಂಡುಬಿಟ್ಟರು. ಈ ವಿಚಾರ ತಿಳಿದೊಡನೆ ಆ ಅವೇಳೆಯಲ್ಲಿಯೂ ನಟವರ್ಸಿಂಗರನ್ನು ಹೊಟೆಲಿಗೆ ಕಳಿಸಿಕೊಟ್ಟು ಜಾಂಬಿಯಾದ ಅಧ್ಯಕ್ಷರು ಒಬೆರಾಯ್ಗೇ ಹೋಗುವಂತೆ ಒಲಿಸುವ ಪ್ರಯತ್ನ ಶುರುಮಾಡಿದರು. ನಟವರ್ಸಿಂಗ್ಗೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುವುದೇ ಕೆಲಸ. ಕೊನೆಗೂ ಬಿಡದೇ ಕಾಂಡಾರನ್ನು ಲಲಿತ್ನಿಂದೆಬ್ಬಿಸಿ ಒಬೆರಾಯ್ಗೆ ಕಳಿಸಿದ ನಂತರವೇ ಆಕೆಗೆ ನೆಮ್ಮದಿಯ ನಿದ್ದೆ ಬಂದಿದ್ದು. 98ರಲ್ಲಿ ಲೋಕಸಭಾ ಚುನಾವಣೆಯ ನಂತರ ಅಮೇಥಿಯಲ್ಲಿ ಜಯಭೇರಿ ಬಾರಿಸಿದ ಸೋನಿಯಾ ತಾವು ಸಕರ್ಾರ ರಚಿಸುವುದಾಗಿ ರಾಷ್ಟ್ರಪತಿಗಳೆದುರಿಗೆ ನಿಂತರು. ಗಡುವು ಪಡೆದುಕೊಂಡು ಮರಳುವ ವೇಳೆಗೆ ಸಹಕಾರ ಕೊಡುವ ಮಾತುಗಳನ್ನಾಡಿದ ಮುಲಾಯಂಸಿಂಗ್ ಕೈಕೊಟ್ಟಾಗಿತ್ತು. ಕಾಂಗ್ರೆಸ್ಸಿಗೆ ಇದು ತೀವ್ರಥರದ ಮುಖಭಂಗ. ಸೋನಿಯಾ ಜಾಗದಲ್ಲಿ ಮತ್ಯಾರೇ ಅಧ್ಯಕ್ಷರಾಗಿದ್ದರೂ ಕಾಂಗ್ರೆಸ್ಸು ಅವರನ್ನು ಓಡಿಸಿ ಮತ್ತೊಬ್ಬರನ್ನು ಆಯ್ಕೆ ಮಾಡಿರುತ್ತಿತ್ತು. ಇಲ್ಲಿ ಹಾಗಾಗಲಿಲ್ಲ. ಸೋನಿಯಾ ಎಂದಿಗೂ ತಪ್ಪು ಮಾಡಲಾರರು ಎಂಬ ಭಾವನೆಯನ್ನು ಆಪ್ತವಲಯದವರು ಅದಾಗಲೇ ಚೆನ್ನಾಗಿ ಬಿತ್ತಿದ್ದರು!

5

ಸೋನಿಯಾ ಸಾಮಾನ್ಯರಂತೂ ಅಲ್ಲವೇ ಅಲ್ಲ. ಆಕೆಯನ್ನು ಮುಂದಿಟ್ಟುಕೊಂಡು ತಮ್ಮಿಚ್ಛೆಯ ರಾಜಕಾರಣ ನಡೆಸಬಹುದು ಎಂದು ಭಾವಿಸಿದವರಿಗೆ ಮುಂದಿನ 15 ವರ್ಷ ಆಕೆ ಕೊಟ್ಟ ಕೆಲಸ ಸಾಮಾನ್ಯವಾದುದಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನೆಹರೂ ಕಾಲದ ಕಾಂಗ್ರೆಸ್ಸಿಗಿಂತಲೂ ಬಲವಾದ ಹಿಡಿತವುಳ್ಳ ಕಾಂಗ್ರೆಸ್ಸು ಈ ಅವಧಿಯಲ್ಲಿ ಇದ್ದದ್ದು. ಆಕೆಯ ತಾಳಕ್ಕೆ ಕೇಂದ್ರಸಕರ್ಾರ ಮತ್ತು ಕಾಂಗ್ರೆಸ್ಸು ಪಕ್ಷ ಕುಣಿಯುತ್ತಿತ್ತು. ಸಂಸತ್ತಿನ ಪಡಸಾಲೆಗಳಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗರೊಂದಿಗೆ ಈಕೆ ಹೆಜ್ಜೆ ಹಾಕಿದರೆ ನಮಸ್ಕಾರ ಮನಮೋಹನ್ ಸಿಂಗರಿಗೆ ಬೀಳುತ್ತಿರಲಿಲ್ಲವಂತೆ. ಎಲ್ಲರೂ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದದು ಸೋನಿಯಾಗೇ! ಆಕೆ ಈ ಗುಲಾಮಿ ಪರಂಪರೆಯನ್ನು ಎಂದಿಗೂ ತಡೆಯಲಿಲ್ಲ. ಗುಲಾಮರು ಹೆಚ್ಚು-ಹೆಚ್ಚು ಇದ್ದಷ್ಟು ಪರಿವಾರದ ಅಧಿಕಾರ ಅಬಾಧಿತ ಎಂಬದು ಆಕೆಗೆ ಸ್ಪಷ್ಟವಾಗಿ ಗೊತ್ತಿತ್ತು. ಹಿರಿ-ಕಿರಿಯ ಕಾಂಗ್ರೆಸ್ಸಿಗರನ್ನು ಬಳಸಿಕೊಂಡು ಆಕೆ ಆಸಕ್ತಿಯಿಲ್ಲದಿದ್ದ ರಾಜಕೀಯ ಕ್ಷೇತ್ರದಲ್ಲೂ ಪ್ರಭಾವಿಯಾಗುವ ಲಕ್ಷಣ ತೋರಿಬಿಟ್ಟರು. ಇತರೆಲ್ಲರನ್ನೂ ಜೋರು-ಜೋರಾದ ಪ್ರಶ್ನೆಗಳಿಂದ ಗಾಬರಿಗೊಳಿಸುತ್ತಿದ್ದ ಪತ್ರಕರ್ತರು ಸೋನಿಯಾ ಎದುರಿಗೆ ಬಂದರೆ ಪಿಜ್ಜಾ ಇಷ್ಟವೋ ಪರಾಠ ಇಷ್ಟವೋ ಎಂದು ಕೇಳಿ ಸುಮ್ಮನಾಗಿಬಿಡುತ್ತಿದ್ದರು. ದೆಹಲಿಯ ಪ್ರಭಾವಿವಲಯವನ್ನು ಆಕೆ ಹಿಡಿದಿಟ್ಟುಕೊಂಡಿದ್ದ ರೀತಿ ಅದು. ಆಕೆಯ ಕುರಿತಂತೆ, ಆಕೆಯ ಪರಿವಾರದ ಕುರಿತಂತೆ ಯಾರೊಬ್ಬರೂ ಉಸಿರೂ ಎತ್ತುತ್ತಿರಲಿಲ್ಲ. ಮೇಲ್ನೋಟಕ್ಕೆ ಇದು ಬಲವಾದ ಹಿಡಿತ ಎನ್ನಿಸಬಹುದೇನೋ. ಆದರೆ ಸ್ವಾಭಿಮಾನಿಗಳೆನಿಸಿಕೊಂಡವರು ಒಂದೋ ಕಾಂಗ್ರೆಸ್ಸಿನಿಂದ ದೂರವಾದರು ಅಥವಾ ಒಳಗೆ ಬರುವುದಕ್ಕೇ ಹಿಂದೇಟು ಹಾಕಿದರು. ಅವನತಿ ನಿಶ್ಚಿತಗೊಂಡಿದ್ದು ಹೀಗೆ!

Comments are closed.