ವಿಭಾಗಗಳು

ಸುದ್ದಿಪತ್ರ


 

ಕಾರ್ಬನ್ ಮಾರಾಟದ ವಹಿವಾಟು ಕೇಳಿದ್ದೀರಾ?

ಭಾರತದ ಪರಿಸ್ಥಿತಿ ನಿಜಕ್ಕೂ ಗಂಭೀರ. ನಮಗೆ ಏಳುವರೆ ಸಾವಿರ ಕಿ.ಮೀ ನಷ್ಟು ಉದ್ದದ ಕರಾವಳಿ ಇದೆ. ಸುಮಾರು 1300 ದ್ವೀಪಗಳಿವೆ. ಮುಗಿಲೆತ್ತರಕ್ಕೆ ನಿಂತ ಹಿಮಾಲಯ ಇದೆ. ಹಿಮಾಲಯ ಕರಗಿ ನೀರಾದರೆ ಒಳನಾಡಿನ ನದಿಗಳು ತುಂಬಿ ಹರಿದಾವು. ಈ ನದಿಗಳು ಸೇರಿ ಸಮುದ್ರ ಉಕ್ಕೇರಿದರೆ ಕರಾವಳಿಯುದ್ದಕ್ಕೂ ಹಳ್ಳಿ-ಹಳ್ಳಿಗಳು ಮುಳುಗಿ ಹೋದಾವು. ದ್ವೀಪಗಳು ಅತಂತ್ರಗೊಂಡಾವು. ಭಾರತದ ಈಗಿನ ಸ್ವರೂಪ ಹಾಳಾಗುವುದರಲ್ಲಿ ಬಹಳ ಹೊತ್ತಿಲ್ಲ. ಇವೆಲ್ಲಕ್ಕೂ ಕಾರಣವಾದ ಬೆಳವಣಿಗೆಯ ಓಟದಲ್ಲಿ ಮುಂದೆ ನಿಂತು ಸಿರಿವಂತರೆನಿಸಿಕೊಂಡ ರಾಷ್ಟ್ರಗಳೇನೂ ನೆಮ್ಮದಿಯಿಂದಿಲ್ಲ. 2015 ರಲ್ಲಿ ಕ್ಯಾಲಿಫೋರ್ನಿಯಾ ಎದುರಿಸಿದ ನೀರಿನ ಕೊರತೆ ಸಾವಿರ ವರ್ಷಗಳಲ್ಲಿ ಮೊದಲ ಬಾರಿಗೆ ಕಂಡಂಥದ್ದು.

ಜಾಗತಿಕ ವಾತಾವರಣದ ಕುರಿತಂತೆ ಪ್ಯಾರಿಸ್ಸಿನ ಶೃಂಗ ಸಭೆ ನೆನಪಿದೆಯಾ? ಜಗತ್ತಿನ ಅನೇಕ ರಾಷ್ಟ್ರಗಳ ಪ್ರಮುಖರು ಭಾಗವಹಿಸಿದ್ದ ಸಭೆ ಅದು. ಕಳೆದ ಅನೇಕ ದಶಕಗಳಿಂದ ಭೂಮಂಡಲದ ತಾಪಮಾನ ಏರಿಕೆಯಾಗುತ್ತಿರುವುದರ ಕುರಿತಂತೆ ಆತಂಕ ವ್ಯಕ್ತವಾಗುತ್ತಿತ್ತು. 2005 ರ ಕ್ಯೋಟೋ ಪ್ರೋಟೋಕಾಲ್ನಿಂದ ಶುರುವಾಗಿ 2015 ರ ಪ್ಯಾರಿಸ್ಸಿನ ಶೃಂಗ ಸಭೆಯವರೆಗೂ ನಿರ್ಣಯಗಳು ಆದದ್ದಷ್ಟೇ, ಬದಲಾವಣೆ ಶೂನ್ಯವೇ. ಇದರ ಆಧಾರದ ಮೇಲೆಯೇ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರಮೋದಿ ‘ಹವಾಮಾನ ಬದಲಾವಣೆಗೆ ನಾವು ಕಾರಣರಲ್ಲವೇ ಅಲ್ಲ. ಆದರೆ ಅದರ ಪರಿಣಾಮಗಳನ್ನು ಮಾತ್ರ ಅನುಭವಿಸುತ್ತಿದ್ದೇವೆ’ ಎಂದರು. ಅವರ ಪ್ರತಿಪಾದನೆಯ ತೀವ್ರತೆ ಅದೆಷ್ಟಿತ್ತೆಂದರೆ ಇಡಿಯ ಜಗತ್ತು ಭಾರತವನ್ನೇ ಪರಿಸರ ಬದಲಾವಣೆಯ ಮುಖ್ಯಸ್ಥವಾಗುವಂತೆ ಕೇಳಿಕೊಂಡಿತು. ಜಗತ್ತು ಏಕಿಷ್ಟು ಆತಂಕದಲ್ಲಿದೆ? ಅದಕ್ಕೆ ಬಲವಾದ ಕಾರಣವಿದೆ.

paris

ಕಳೆದ 50 ವರ್ಷಗಳಲ್ಲಿ ಭೂಮಿಯ ತಾಪಮಾನ ತೀವ್ರಗತಿಯಲ್ಲಿ ಏರುತ್ತಲೇ ನಡೆದಿದೆ. ನಾಸಾದ ದಾಖಲೆಯ ಪ್ರಕಾರ 134 ವರ್ಷಗಳಲ್ಲಿಯೇ 2000ದಿಂದೀಚೆಗೆ 16 ಅತಿ ಹೆಚ್ಚಿನ ತಾಪಮಾನದ ವರ್ಷಗಳು ದಾಖಲೆಯಾಗಿವೆ. 2015 ರಲ್ಲಿ ಪ್ರಕಟಗೊಂಡ ವರದಿಯ ಆಧಾರದ ಮೇಲೆ ಅಮೇರಿಕಾದ ತಾಪಮಾನ ಮುಂದಿನ ಶತಮಾನದ ವೇಳೆಗೆ 10 ಫ್ಯಾರನ್ಹೀಟ್ನಷ್ಟು ಹೆಚ್ಚಲಿದೆ. ವಾತಾವರಣದ ಈ ಬದಲಾವಣೆಗೆ ಯಾವ ರಾಷ್ಟ್ರ ಕಾರಣವಾದರೂ ಪರಿಣಾಮ ಮಾತ್ರ ಇಡಿಯ ಭೂಮಂಡಲದ ಜನರೇ ಅನುಭವಿಸಬೇಕು. ಕಳೆದ ಅನೇಕ ವರ್ಷಗಳಿಂದ ಬೇಸಗೆ ಸಹಿಸಲಸಾಧ್ಯವೆನಿಸುತ್ತಿರೋದು, ಛಳಿಯೂ ತೀವ್ರಗೊಳ್ಳುತ್ತಿರುವುದು ಇದರದ್ದೇ ಪ್ರಭಾವದಿಂದ. ಹಿಮಾಲಯ ತೀವ್ರಗತಿಯಲ್ಲಿ ಕರಗುತ್ತಿರುವುದಕ್ಕೂ ಇದೇ ಕಾರಣ. ಹಿಂದೆಂದಿಗಿಂತಲೂ ಹೆಚ್ಚು ಹಿಮಪಾತ ದಾಖಲಾಗುತ್ತಿದೆಯಲ್ಲ ಅದಕ್ಕೂ ತೀವ್ರಗತಿಯಲ್ಲಿ ಏರುತ್ತಿರುವ ತಾಪಮಾನವೇ ಕಾರಣ.

ತಾಪಮಾನದಲ್ಲಿ ಬದಲಾವಣೆಯಾಗಲು ಬಹುಮುಖ್ಯ ಕಾರಣ, ಅಮೇರಿಕಾ ಒಂದರಲ್ಲಿಯೇ ಪ್ರತಿವರ್ಷ ಉತ್ಪಾದನೆಯಾಗುತ್ತಿರುವ ಎರಡು ಬಿಲಿಯನ್ ಟನ್ಗಳಷ್ಟು ಇಂಗಾಲದ ಡೈ ಆಕ್ಸೈಡ್! ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯ ಕೇಂದ್ರಗಳು, ವಾಹನಗಳು ಹೊರಹಾಕುವ ಹೊಗೆ, ಫಾಸಿಲ್ ಇಂಧನಗಳನ್ನು ಸುಡುವ ಕಾರ್ಖಾನೆಗಳು ಇವೆಲ್ಲವೂ ಸೇರಿ ವಾತಾವರಣದಲ್ಲಿ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುತ್ತಿವೆ. ಕಾರ್ಬನ್ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೋಫ್ಲೋರೋ ಕಾರ್ಬನ್ನುಗಳು, ಪರ್ಫ್ಲುರೋ ಕಾರ್ಬನ್ನುಗಳು, ಸಲ್ಫರ್ ಹೆಕ್ಸಾಫ್ಲೋರೈಡ್ ಇವೆಲ್ಲವೂ ನಮ್ಮ ವಾತಾವರಣದಲ್ಲಿ ಕೆಲವು ದಶಕಗಳಿಂದ ಹಿಡಿದು ಶತಮಾನಗಳವರೆಗೆ ಮೋಡಗಳಾಗಿ ನಿಂತು ಬಿಡುತ್ತವೆ. ಭೂಮಿಯಿಂದ ಕೆಲವು ಅಡಿಗಳಷ್ಟು ಮೇಲೆ ನೆಲೆ ನಿಂತ ಈ ಅನಿಲಗುಚ್ಛ ಸೂರ್ಯನ ಶಾಖವನ್ನು ಹಿಡಿದುಕೊಂಡು ಭೂಮಿಯ ತಾಪಮಾನ ಏರುವಂತೆ ಮಾಡುತ್ತದೆ. ಈ ತಾಪಮಾನ ಏರಿಕೆ ಅಸಹಜವಾದ್ದರಿಂದ ಅದರ ಪರಿಣಾಮವೂ ಅಸಹಜವೇ. ಕೆಲವೊಮ್ಮೆ ತೀವ್ರವಾದ ಬಿಸಿ, ಕೆಲವೊಮ್ಮೆ ತೀವ್ರ ಚಳಿ. ಪ್ರವಾಹದ ಹಿಂದು ಹಿಂದೆಯೇ ಕ್ಷಾಮ. ಒಟ್ಟಾರೆ ಪ್ರಕೃತಿಯನ್ನೇ ಅರ್ಥಮಾಡಿಕೊಳ್ಳಲಾಗದ ವಿಕಟ ಪರಿಸ್ಥಿತಿಯಲ್ಲಿ ನಾವು. ಅಷ್ಟೇ ಅಲ್ಲ. ಈ ಅನಿಲಗುಚ್ಛ ಮೋಡಗಳೊಂದಿಗೆ ಸೇರಿ ಮಳೆಯಾಗಿ ಸುರಿದಾಗ ಅದು ಆಮ್ಲ ಮಳೆಯಾಗಿ ಭೂಮಿಯ ಮೇಲಿನ ಬದುಕನ್ನೇ ದುಸ್ತರಗೊಳಿಸುತ್ತದೆ.

 

ಭಾರತದ ಪರಿಸ್ಥಿತಿ ನಿಜಕ್ಕೂ ಗಂಭೀರ. ನಮಗೆ ಏಳುವರೆ ಸಾವಿರ ಕಿ.ಮೀ ನಷ್ಟು ಉದ್ದದ ಕರಾವಳಿ ಇದೆ. ಸುಮಾರು 1300 ದ್ವೀಪಗಳಿವೆ. ಮುಗಿಲೆತ್ತರಕ್ಕೆ ನಿಂತ ಹಿಮಾಲಯ ಇದೆ. ಹಿಮಾಲಯ ಕರಗಿ ನೀರಾದರೆ ಒಳನಾಡಿನ ನದಿಗಳು ತುಂಬಿ ಹರಿದಾವು. ಈ ನದಿಗಳು ಸೇರಿ ಸಮುದ್ರ ಉಕ್ಕೇರಿದರೆ ಕರಾವಳಿಯುದ್ದಕ್ಕೂ ಹಳ್ಳಿ-ಹಳ್ಳಿಗಳು ಮುಳುಗಿ ಹೋದಾವು. ದ್ವೀಪಗಳು ಅತಂತ್ರಗೊಂಡಾವು. ಭಾರತದ ಈಗಿನ ಸ್ವರೂಪ ಹಾಳಾಗುವುದರಲ್ಲಿ ಬಹಳ ಹೊತ್ತಿಲ್ಲ. ಇವೆಲ್ಲಕ್ಕೂ ಕಾರಣವಾದ ಬೆಳವಣಿಗೆಯ ಓಟದಲ್ಲಿ ಮುಂದೆ ನಿಂತು ಸಿರಿವಂತರೆನಿಸಿಕೊಂಡ ರಾಷ್ಟ್ರಗಳೇನೂ ನೆಮ್ಮದಿಯಿಂದಿಲ್ಲ. 2015 ರಲ್ಲಿ ಕ್ಯಾಲಿಫೋರ್ನಿಯಾ ಎದುರಿಸಿದ ನೀರಿನ ಕೊರತೆ ಸಾವಿರ ವರ್ಷಗಳಲ್ಲಿ ಮೊದಲ ಬಾರಿಗೆ ಕಂಡಂಥದ್ದು. ಭೂಮಿಯ ವಾತಾವರಣದ ಮೇಲ್ಪದರ ಬಿಸಿಯಾಗಿರುವುದರಿಂದ ಬಿರುಗಾಳಿಗೆ ಹೆಚ್ಚಿನ ಶಕ್ತಿ ದಕ್ಕುತ್ತದೆ. ಪಶ್ಚಿಮದಲ್ಲಿ ಹರಿಕೇನ್ಗಳು ಹೆಚ್ಚುತ್ತಿರುವುದರ ಹಿಂದೆಯೂ ವಾತಾವರಣದ ಬದಲಾವಣೆಯೇ ಕಾರಣ. 2005 ರಲ್ಲಿ ಅಮೇರಿಕಾ ಎದುರಿಸಿದ ಕತ್ರೀನಾ, 2012 ರ ಸ್ಯಾಂಡಿ ಇವೆರಡೂ ಅಮೇರಿಕಾ ಕಂಡ ದುಬಾರಿ ಹರಿಕೇನ್ಗಳು. ಎಲ್ಲದಕ್ಕೂ ಮೂಲ ಕಾರಣ ಇದೇ.

hurricane_wilma_ap_2

ಅಮೇರಿಕಾ ಅನುಭವಿಸಬೇಕಾದ್ದು ಸಹಜವೇ. ಜಗತ್ತಿನ ಒಟ್ಟೂ ಜನಸಂಖ್ಯೆಯಲ್ಲಿ ಶೇಕಡಾ 4 ರಷ್ಟು ಹೊಂದಿರುವ ಅಮೇರಿಕಾ ಜಗತ್ತಿನ ಒಟ್ಟಾರೆ ಶೇಕಡಾ 16 ರಷ್ಟು ಇಂಗಾಲವನ್ನು ವಾತಾವರಣಕ್ಕೆ ಸೇರಿಸುತ್ತದೆ. ಅದರರ್ಥ, ಇರುವ ಕೈ ಬೆರಳೆಣಿಕೆಯಷ್ಟು ಜನರು ಪ್ರಕೃತಿಯನ್ನು ಭೋಗಿಸುವಲ್ಲಿ, ನಾಶಗೈಯ್ಯುವಲ್ಲಿ ಜಗತ್ತನ್ನೇ ಮೀರಿಸಿದ್ದಾರೆ ಅಂತ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಮೊದಲ ಹೆಜ್ಜೆ ಇಡಬೇಕಿದ್ದು ಅವರೇ. ಅಮೇರಿಕಾದ ಪರಿಸರ ಸಂರಕ್ಷಣಾ ಏಜೆನ್ಸಿ ಆಮ್ಲ ಮಳೆಯನ್ನು ತಡೆಯುವ ಹಿನ್ನೆಲೆಯಲ್ಲಿ ವಾತಾವರಣದಲ್ಲಿರುವ ಸಲ್ಫರ್ ಡೈ ಆಕ್ಸೈಡ್ ಪ್ರಮಾಣವನ್ನೇ ಕಡಿಮೆ ಮಾಡುವತ್ತ ಗಮನ ಹರಿಸಿತು. 1990 ರಲ್ಲಿ ಅಮೇರಿಕಾದಲ್ಲಿ ಶುದ್ಧ ಗಾಳಿಯ ಕುರಿತಂತೆ ಕಾನೂನನ್ನು ಅಂಗೀಕರಿಸಿ 1980 ರಲ್ಲಿ ಇದ್ದುದಕ್ಕಿಂತಲೂ ಅರ್ಧದಷ್ಟು ಪ್ರಮಾಣಕ್ಕೆ ಸಲ್ಫರ್ನ್ನು ಕಡಿಮೆ ಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ಅಮೇರಿಕಾ ನಿರ್ಣಯ ಮಾಡಿ ನಾಟಕ ಮಾಡಿದ್ದಷ್ಟೇ. ಸಲ್ಫರ್ನ ಪ್ರಮಾಣದಲ್ಲಿ ತೀವ್ರವಾದ ಕಡಿತವೇನೂ ಕಂಡು ಬರಲಿಲ್ಲ. ಆದರೆ ಜರ್ಮನಿಯಂತಹ ರಾಷ್ಟ್ರಗಳು ಅತ್ಯಂತ ಕಠಿಣ ನಿಯಮಗಳನ್ನು ಆಚರಣೆಗೆ ತಂದು ಸಲ್ಫರ್ನ ಪ್ರಮಾಣ ಕಡಿಮೆ ಮಾಡಿಕೊಂಡವು.

ವರ್ಷದಿಂದ ವರ್ಷಕ್ಕೆ ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲದ ಪ್ರಮಾಣ ಹೆಚ್ಚುತ್ತಲೇ ಹೋಯಿತು. ಜಗತ್ತಿನ ತಾಪಮಾನ ನಿಯಂತ್ರಣಕ್ಕೆ ಬರಲಿಲ್ಲವೆಂದರೆ ಬದುಕು ದುಸ್ತರವೆಂದು ವಿಜ್ಞಾನಿಗಳು ಎಚ್ಚರಿಕೆ ಕೊಡುತ್ತಲೇ ಇದ್ದರು. ಅನಿವಾರ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಪಮಾನ ಕಡಿಮೆ ಮಾಡುವ ಕುರಿತ ಶೃಂಗ ಸಭೆಗಳು ಆರಂಭವಾದವು. ಆಗಲೇ ಇಂಗಾಲದ ಪ್ರಮಾಣವನ್ನು ಕಡಿಮೆಗೊಳಿಸುವ ಪ್ರಸ್ತಾವನೆಯ ಮೇಲಿನ ಚಚರ್ೆ ತೀವ್ರಗೊಂಡು ಕ್ಯೋಟೋ ಪ್ರೋಟೋಕಾಲ್ಗೆ ಎಲ್ಲರೂ ಸಹಿ ಹಾಕಿದ್ದು.

ಒಂದಂತೂ ಸತ್ಯ. ಚಿಕಾಗೋ ವಿಶ್ವವಿದ್ಯಾಲಯದ ರೋನಾಲ್ಡ್ ರೋಸ್ ಹೇಳಿದಂತೆ ‘ವಾತಾವರಣವನ್ನು ಕಲುಷಿತಗೊಳಿಸುವುದು ಯಾರಿಗೂ ಖುಷಿಯ ಸಂಗತಿಯಲ್ಲ; ವಸ್ತುವೊಂದರ ಉತ್ಪಾದನೆಗೆ ಅದು ಅತ್ಯಂತ ಕಡಿಮೆ ವೆಚ್ಚದಾಯಕ ಅಷ್ಟೇ’ ಅಂತ. ಹೌದಲ್ಲವೇ? ಬೆಳವಣಿಗೆ ಯಾರಿಗೆ ಬೇಡ. ಬೆಂಗಳೂರಿನ ಎಲ್ಲ ರಸ್ತೆಗಳು ಈಗಿರುವ ಎರಡರಷ್ಟು ದೊಡ್ಡದಾದರೆ ಖುಷಿಯೇ. ಮಡಿಕೇರಿಗೆ ರೈಲು ಬಂದರೆ ಅಲ್ಲಿನವರಿಗೆ ಆನಂದವೇ. ಇಪ್ಪತ್ನಾಲ್ಕು ತಾಸೂ ಕರೆಂಟು ಕೊಡಲು ಪವರ್ ಗ್ರಿಡ್ ವಿಸ್ತಾರವಾಗಲೇಬೇಕು. ಆದರೆ ಇದಕ್ಕೆ ಅದೆಷ್ಟು ಪರಿಸರದ ಶೋಷಣೆಯಾಗಬೇಕು ಆಲೋಚನೆ ಇದೆಯೇನು? ಪ್ರತಿ ಬಾರಿ ನಾವು ಸುಡುವ ಒಂದು ಲೀಟರ್ ಪೆಟ್ರೋಲು ವಾತಾವರಣಕ್ಕೆ ಸೇರಿಸುವ ಇಂಗಾಲದ ಪ್ರಮಾಣ ಎಷ್ಟೆಂದು ಅಂದಾಜಿದೆಯೇನು? ಹಾಗಂತ ಇದ್ಯಾವುದೂ ಆಗಲೇ ಬಾರದಾ? ಖಂಡಿತ ಆಗಬೇಕು. ಅದಕ್ಕೆ ಪೂರಕವಾದ ಪರ್ಯಾಯವಾದ ವ್ಯವಸ್ಥೆ ಮಾಡಬೇಕು. ಅದೇ ನಿಜವಾದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿಯೇ ಹುಟ್ಟಿಕೊಂಡಿದ್ದು ಕಾರ್ಬನ್ ಟ್ರೇಡಿಂಗ್. ಇಂಗಾಲ ಮಾರಾಟ ಅಂತ ನೇರವಾಗಿ ಅನುವಾದ ಮಾಡಬಹುದು.

carbon trading

ಇದೊಂದು ವಿಚಿತ್ರವಾದ ಪದ್ಧತಿ. ‘ಮಿತಿ ಹಾಕಿ, ಮಾರಾಟ ಮಾಡಿ’ ಅಂತ ಶುರುವಾದ ಈ ಯೋಜನೆ ಇಂಗಾಲವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವವಾದ ಹೆಜ್ಜೆ ಇಟ್ಟಿತು. ಜಗತ್ತಿನ ಪ್ರತಿಯೊಂದು ರಾಷ್ಟ್ರಕ್ಕೂ ಇಂತಿಷ್ಟು ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡಬಹುದೆಂಬ ಮಿತಿ ವಿಧಿಸಿ ಪರ್ಮಿಟ್ಟು ಕೊಡೋದು, ಅದಕ್ಕಿಂತಲೂ ಹೆಚ್ಚು ಬಿಡುಗಡೆಯಾದರೆ ಯಾರು ಮಿತಿಗಿಂತ ಕಡಿಮೆ ಬಿಡುಗಡೆ ಮಾಡಿದ್ದಾರೋ ಅವರ ಬಳಿ ಇಂಗಾಲದ ಬಿಡುಗಡೆಯ ಪರ್ಮಿಟ್ಟು ಖರೀದಿಸೋದು. ಅರ್ಥ ಆಗಲಿಲ್ಲವೇ? ಅಮೇರಿಕಾದ ಕಂಪನಿಯೊಂದು ನಾಲ್ಕು ಯುನಿಟ್ಟಿನಷ್ಟು, ಭಾರತದ ಕಂಪನಿ ಎರಡು ಯುನಿಟ್ಟಿನಷ್ಟು ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುವುದೆಂದು ಊಹಿಸಿಕೊಳ್ಳಿ. ಈಗ ಅಂತರರಾಷ್ಟ್ರೀಯ ಮಿತಿ ಕಂಪನಿಯೊಂದಕ್ಕೆ 3 ಯೂನಿಟ್ಟು ಇಂಗಾಲವೆಂದು ನಿಗದಿಯಾದರೆ ಅಮೇರಿಕಾದ ಕಂಪೆನಿ ಭಾರತೀಯ ಕಂಪನಿಯ ಒಂದು ಯುನಿಟ್ಟು ಕೊರತೆಯನ್ನು ತಲಾ ಒಂದು ಯುನಿಟ್ಟು ಹೆಚ್ಚುವರಿಯಿಂದ ಸರಿದೂಗಿಸಲು ಭಾರತೀಯ ಕಂಪನಿಗೆ ಹಣ ಕೊಟ್ಟು ಇಂಗಾಲದ ಪರ್ಮಿಟ್ಟು ಖರೀದಿ ಮಾಡುತ್ತದೆ. ಮೇಲ್ನೋಟಕ್ಕೆ ಈ ಯೋಜನೆ ಚಂದವೆನಿಸಿದರೂ ಇದು ಮತ್ತೆ ಪರ್ಮಿಟ್ಟುಗಳನ್ನು ಮಾರಾಟ ಮಾಡಿಕೊಳ್ಳುವ ಧಂಧೆಯಾಯಿತೇ ಹೊರತು ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸೋತು ಹೋಯಿತು. ಅಷ್ಟೇ ಅಲ್ಲ. ಯಾರಿಗೆ ಎಷ್ಟು ಇಂಗಾಲವನ್ನು ವಾತಾವರಣಕ್ಕೆ ತಳ್ಳುವ ಯೋಗ್ಯತೆಯಿದೆಯೆಂಬುದನ್ನು ನಿರ್ಧರಿಸುವುದು ಹೇಗೆ ಮತ್ತು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ. ಮತ್ತೆ ಸಿರಿವಂತ ರಾಷ್ಟ್ರಗಳು ಹೇಳಿದ್ದೇ ಅಂತಿಮವಾಯ್ತು. ಚೀನಾ ಈ ತಾರತಮ್ಯದ ವಿರುದ್ಧ ದನಿಯೆತ್ತಿ ಹೆಚ್ಚು ಇಂಧನ ಭೂಮಿಯಿಂದ ಬಸಿದದ್ದು ಎಷ್ಟು ತಪ್ಪೋ, ಆ ಇಂಧನವನ್ನು ಬಳಸುವುದೂ ಅಷ್ಟೇ ತಪ್ಪು ಎನ್ನುತ್ತಾ ಅಮೇರಿಕಾದತ್ತ ಬೆಟ್ಟು ಮಾಡು ತೋರಿಸಿತು. ಸಭೆಗಳೆಲ್ಲ ಪರಿಹಾರ ಕಾಣದೇ ಮುರಿದು ಬೀಳುತ್ತಿದ್ದವು. ಅಮೇರಿಕಾ, ರಷ್ಯಾಗಳಿಗೆ ಇತರರಿಗೆ ಬುದ್ಧಿ ಹೇಳುವ ಯಾವ ನೈತಿಕತೆಯೂ ಇರಲಿಲ್ಲ. ಅತ್ತ ಚೀನಾ ಕೂಡ ಬೆಳವಣಿಗೆಯ ಏಣಿ ಏರುತ್ತ ಹೋದಂತೆ ಕಾರ್ಬನ್ ವಿಸರ್ಜನೆಯ ಪ್ರಮಾಣ ಏರುತ್ತಲೇ ಹೋಯಿತು. ಈಗ ಬೆಳವಣಿಗೆಯ ಓಟದಲ್ಲಿದ್ದೂ ಪ್ರಕೃತಿಗೆ ಪೂರಕವಾಗಿ ಬದುಕುವುದನ್ನು ಹೇಳಿಕೊಟ್ಟ ಭಾರತವೇ ನಾಯಕತ್ವಕ್ಕೆ ಸಮರ್ಥ ಆಯ್ಕೆಯಾಗಿತ್ತು. ಅದಕ್ಕೆ ಪ್ಯಾರಿಸ್ಸಿನಲ್ಲಿ ಸಮ್ಮೇಳನವಾದಾಗ ಮೋದಿಯವರ ಮಾತಿಗೆ ಆ ಪರಿಯ ಬೆಂಬಲ ಸಿಕ್ಕಿದ್ದು.
ಕಾರ್ಬನ್ ಮಾರಾಟ ಕಳೆದೊಂದು ದಶಕದಿಂದ ಭಿನ್ನ ಸ್ವರೂಪ ಪಡಕೊಂಡಿದೆ. ತಾವು ವಿಸರ್ಜಿಸುವ ಕಾರ್ಬನ್ನನ್ನು ಸ್ಥಿರೀಕರಿಸಲು ಯಾವುದಾದರೂ ರಾಷ್ಟ್ರದಲ್ಲಿ ಕಾಡನ್ನು ರಕ್ಷಿಸುವ, ವೃದ್ಧಿಸುವ ಸಲುವಾಗಿ ಹಣ ಹೂಡಿಕೆ ಮಾಡುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಗಾಳಿಯಂತ್ರವನ್ನು ಬಳಸುವ ಸೌರಶಕ್ತಿ ಬಳಸುವ ಯೋಜನೆಗಳಿಗೆ ಹಣ ಹೂಡುವಂತೆ ಪ್ರೇರೇಪಿಸಲಾಗಿದೆ. ಸಿರಿವಂತ ರಾಷ್ಟ್ರಗಳು ಬಿಲಿಯನ್ ಗಟ್ಟಲೆ ಹಣವನ್ನು ಈ ಕಾರಣಕ್ಕಾಗಿ ಸುರಿಯುತ್ತಿವೆ. ಚೀನಾದ ನಂತರ ಈ ಯೋಜನೆಯ ಬಲುದೊಡ್ಡ ಲಾಭ ಪಡೆದಿರುವುದು ಭಾರತವೇ.

2005 ರಲ್ಲಿ ಭಾರತ ಜಗತ್ತಿನ ಶೇಕಡಾ 30ರಷ್ಟು ಯೋಜನೆಗಳನ್ನು ಹೊತ್ತುಕೊಂಡು ಬಂತು. 2013ರಲ್ಲಿ 2800 ರಷ್ಟು ಯೋಜನೆಗಳು ಭಾರತಕ್ಕೆ ಬಂತು. ಕರ್ನಾಟಕ 250 ಯೋಜನೆಗಳನ್ನು ಪಡೆಯಿತು. ಇಂಧನವನ್ನು ಸುಡದ ವಿದ್ಯುತ್ ಉತ್ಪಾದನೆಯ ಮಾದರಿಗೆ ಹಣವನ್ನು ಬಳಸಲಾಯಿತು. ಕಳೆದೊಂದು ದಶಕದಲ್ಲಿ ಕರ್ನಾಟಕದ ಅನೇಕ ಗುಡ್ಡಗಳಲ್ಲಿ ಗಾಳಿಯಂತ್ರಗಳು ಸ್ಥಾಪನೆಯಾದುದರ ಹಿಂದೆ ಜಾಗತಿಕ ತಾಪಮಾನ ಕಡಿಮೆ ಮಾಡುವ ಚಿಂತನೆಯಿದೆ.

western ghat

ಇವಿಷ್ಟನ್ನೂ ಈಗ ಹಂಚಿಕೊಳ್ಳಲು ಕಾರಣವಿದೆ. ಭಾರತ ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ದೊಡ್ಡ ಹೊಣೆ ಹೊರಲು ಸಿದ್ಧವಾಗಿದೆ. ಯಾವ ರಾಜ್ಯಗಳ ಪ್ರಮುಖರೂ ಇದರ ಕುರಿತಂತೆ ತೀವ್ರವಾಗಿ ಯೋಚಿಸುತ್ತಿಲ್ಲ. ನಮ್ಮ ಬಳಿ ಅಪಾರವಾದ ಅರಣ್ಯ ಸಂಪತ್ತಿದೆ. ಪಶ್ಚಿಮ ಘಟ್ಟಗಳಂತೂ ಜಗತ್ತಿನ ಶ್ವಾಸಕೋಶಗಳೆಂದೇ ಹೇಳಲ್ಪಟ್ಟಿವೆ. ಹೀಗಿರುವಾಗ ಈಗಲೇ ಒಂದು ಹೆಜ್ಜೆ ಮುಂದಿಟ್ಟು ಈ ಘನವಾದ ಕಾಡುಗಳನ್ನು ರಕ್ಷಿಸಿ ಇನ್ನೊಂದಷ್ಟು ಅರಣ್ಯ ಸೃಷ್ಟಿಗೆ ಸೂಕ್ತ ಪ್ರಯತ್ನ ಹಾಕಿದರೆ ಜಗತ್ತು ನಮ್ಮತ್ತ ತಿರುಗಿ ನೋಡುತ್ತದೆ. ಕರ್ನಾಟಕ ಮುಂದಿನ ಐದು ವರ್ಷಗಳಿಗೆ ಒಂದು ನೀಲಿನಕ್ಷೆಯನ್ನು ರೂಪಿಸಿಕೊಂಡು ಇಂಧನಗಳನ್ನು ಸುಟ್ಟು ವಿದ್ಯುತ್ ಉತ್ಪಾದಿಸುವ, ಪೆಟ್ರೋಲು-ಡೀಸೆಲ್ಲು ಬಳಸಿ ವಾಹನ ಚಲಾಯಿಸುವ ಸ್ಥಾಪಿತ ವ್ಯವಸ್ಥೆಯನ್ನು ಅಲುಗಾಡಿಸಿಬಿಡಬೇಕು. ಮರ ಕಡಿದರೆ ಹಣ ಎನ್ನುವ ಕಾಲ ಕಳೆದು ಹೋಗಿದೆ. ಈಗ ಮರ ಉಳಿಸಿಕೊಳ್ಳುವುದೇ ನಿಜವಾದ ಜಾಗತಿಕ ಸಂಪತ್ತು. ಉತ್ತರ ಕನ್ನಡ ಜಿಲ್ಲೆಯ ಶಾಸಕರೆಲ್ಲ ಯಾವಾಗಲೂ ಅರಣ್ಯ ಪ್ರದೇಶವಿರುವುದರಿಂದಲೇ ಜಿಲ್ಲೆಯ ಅಭಿವೃದ್ಧಿ ಕಷ್ಟವೆಂದು ಕಣ್ಣೀರ್ಗರೆಯುತ್ತಿರುತ್ತಾರೆ, ಅರಣ್ಯವೇ ಸಂಪತ್ತು ಎಂಬುದನ್ನು ಮರೆತು! ಜಗತ್ತಿನ ಆಲೋಚನೆಯ ದೃಷ್ಟಿಕೋನ ಬದಲಾಗಿದೆ. ನಾವು ಪೂರಕವಾಗಿ ಪ್ರತಿಸ್ಪಂದಿಸಿದರೂ ಸಾಕು.

ನಮ್ಮ ಅರಣ್ಯ ಪ್ರದೇಶವೇ ನಮಗೆ ಶಕ್ತಿಯಾಗುವ ಕಾಲ ಬಂದಿದೆ. ಇದನ್ನು ಬಲುಬೇಗ ಗ್ರಹಿಸಿ ಹೆಜ್ಜೆ ಇಡುವ ಅಗತ್ಯ ಈಗ ಇದೆ. ಅಭಿವೃದ್ಧಿಯೆಂದರೆ ಹಳೆಯದನ್ನು ನಾಶ ಮಾಡಿ ಹೊಸ ಸೌಧ ಕಟ್ಟುವುದಲ್ಲ, ಹಳೆಯದನ್ನು ನಾಶವಾಗದಂತೆ ಕಾಪಿಡುವುದೂ ವಿಕಾಸದ ಮಂತ್ರವೇ. ಜಗತ್ತಿನ ಒಳಿತಿಗಾಗಿ ನಾವೀಗ ಈ ದಿಸೆಯಲ್ಲಿ ಸಾಗಲೇಬೇಕಿದೆ.

Comments are closed.