ವಿಭಾಗಗಳು

ಸುದ್ದಿಪತ್ರ


 

ಕ್ಯಾಶ್ಲೆಸ್ನತ್ತ ಭಾರತದ ‘ಭೀಮ’ ನಡಿಗೆ!

128 ಕೋಟಿ ಜನರಿರುವ, ವಿಭಿನ್ನ ಸಂಸ್ಕೃತಿಗಳ, ಭಾಷೆಗಳ, ಆಚಾರ-ವಿಚಾರಗಳ ನೆಲೆವೀಡಾಗಿರುವ ಭಾರತದಂತಹ ನಾಡಿನಲ್ಲಿ ಇದು ಕಷ್ಟ, ಆದರೆ ಅಸಾಧ್ಯವಲ್ಲ. ಹಿಮಾಲಯದ ತಪ್ಪಲು, ಮರುಭೂಮಿಗೆ ಹೊಂದಿಕೊಂಡ ಹಳ್ಳಿಗಳು, ಮುಟ್ಟಲೂ ಕಷ್ಟವೆನಿಸುವ ಈಶಾನ್ಯದ ಗ್ರಾಮಗಳು, ದಕ್ಷಿಣದ ಸಮುದ್ರಕ್ಕೆ ಹೊಂದಿಕೊಂಡ ಊರುಗಳು. ಓಹ್ ಇವೆಲ್ಲವನ್ನೂ ಕ್ಯಾಶ್ಲೆಸ್ ಮಾಡಿಸುವುದು ಸಾಹಸವೇ ಸರಿ. ಒಂದೆಡೆ ಹೈನುಗಾರಿಕೆ ಮತ್ತೊಂದೆಡೆ ಮೀನುಗಾರರು, ಅತ್ತ ರೈತರು ಇತ್ತ ಸಣ್ಣ ವ್ಯಾಪಾರಿಗಳು ಇವರೆಲ್ಲರನ್ನೂ ಒಪ್ಪಿಸುವುದೂ ಸುಲಭವಲ್ಲ. ಹುಟ್ಟಿದಾಗಿನಿಂದಲೂ ದುಡ್ಡು ನೋಡಿಯೇ ಬೆಳೆದ ಇವರೆಲ್ಲರಿಗೂ ಪ್ಲಾಸ್ಟಿಕ್ ಕಾರ್ಡ್ಡ ಬಳಸಿ ವ್ಯವಹಾರ ಮಾಡಿರೆಂದು ಹೇಳುವುದಾದರೂ ಹೇಗೆ? ಇದೊಂದೇ ಪ್ರಶ್ನೆ ದೇಶದಲ್ಲಿ ಮೋದಿಯ ವಿರೋಧಿಗಳು ಕೇಳುತ್ತಿರೋದು.

5

‘ಶೇಖರಣೆಯೆಂಬ ಪಿಶಾಚಿಯು ಅತ್ಯಂತ ಹಳೆಯದ್ದು’ ಹಾಗೆಂದವರು ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್. ಭಾರತದಲ್ಲಿ ಚಿನ್ನದ ಕರೆನ್ಸಿಯ ಚಲಾವಣೆಗೆ ವಿರುದ್ಧವಾಗಿ ಚೇಂಬರ್ಲಿನ್ ಸಮಿತಿ ಮಂಡಿಸಿದ ಮೊದಲ ವಾದವೇ ಭಾರತದ ಜನ ಚಿನ್ನವನ್ನು ಸಂಗ್ರಹಿಸುತ್ತಾರೆ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಅದನ್ನು ಚಲಾವಣೆಗೆ ತರಲಾರರು ಅನ್ನೋದು. ಇದನ್ನು ಕಟುವಾಗಿ ಟೀಕಿಸಿದ ಬಾಬಾ ಸಾಹೇಬರು ಶೇಖರಣೆಯ ವಿರುದ್ಧ ಕಾನೂನು ಇಲ್ಲದಿರುವುದರಿಂದ ಹಾಗಾಗುತ್ತದೆ ಎನ್ನುತ್ತಾರೆ. ಜೊತೆಗೆ ಹಣದ ಮೌಲ್ಯವು ಅಲ್ಪಾವಧಿಯಲ್ಲಿ ಇಳಿಮುಖವಾಗುವ ಸಂಭವ ಕಡಿಮೆ ಇರುವಾಗ ಅದನ್ನು ಎಲ್ಲರೂ ಶೇಖರಿಸಿಡುತ್ತಾರೆಂಬ ಚರ್ಚೆ ಮುಂದಿಡುತ್ತಾರೆ. ಸರಳವಾಗಿ ಹೇಳಬೇಕೆಂದರೆ ಹಣದ ಉಪಯೋಗ ಭವಿಷ್ಯಕ್ಕಿಂತ ಸದ್ಯವೇ ಹೆಚ್ಚಿದ್ದರೆ ಆತ ಅದನ್ನು ಕೂಡಿಡಲಾರ.
ಅಂಬೇಡ್ಕರರ ಮಾತನ್ನು ಅನುಸರಿಸಿ ಹರಡಿದ ಚುಕ್ಕಿ ಜೋಡಿಸಿ ನೋಡಿ, ಹಣದ ಶೇಖರಣೆಯನ್ನು ತಡೆಯುವ ಕಾನೂನು ಕಠಿಣವಾಗಿ ಜಾರಿಗೆ ತನ್ನಿ. ಅದನ್ನು ಹೂಡಿಕೆ ಮಾಡಲು ಪ್ರೇರಣೆ ಕೊಟ್ಟು ರಾಷ್ಟ್ರದ ಉತ್ಪನ್ನ ಹೆಚ್ಚಿಸುವಲ್ಲಿ ಬಳಸಲು ಸಾಲದ ರೂಪದಲ್ಲಿ ಸಮರ್ಥರಿಗೆ ಹಂಚಿ. ಆಗ ವರ್ತಮಾನದಲ್ಲಿಯೇ ಬಳಕೆಯಾಗುವ ಹಣ ಲಾಭವನ್ನೂ ತಂದುಕೊಡುವುದರಿಂದ ಆತ ಅದನ್ನು ಮತ್ತೆ ಕೂಡಿಡಲಾರ! ಹೌದು. ನರೇಂದ್ರ ಮೋದಿ ನೋಟು ಅಮಾನ್ಯೀಕರಣದ ಮೂಲಕ ಅದನ್ನೇ ಮಾಡಿದ್ದು. ಬಚ್ಚಿಟ್ಟ ಗಂಟನ್ನು ಹೊರ ತರಿಸಿದರು, ಅದನ್ನೂ ಸಾಲವಾಗಿ ಉತ್ಸಾಹಿಗಳಿಗೆ ನೀಡಿ ಉತ್ಪಾದನೆಯ ದೃಷ್ಟಿಯಿಂದ ಭಾರತ ಹೊಸ ಸಾಹಸಕ್ಕೆ ಕೈ ಹಾಕುವಂತೆ ಮಾಡಿಸಿದರು.
ಅಂಬೇಡ್ಕರರು ತಜ್ಞ ಅರ್ಥಶಾಸ್ತ್ರಜ್ಞರಾಗಿದ್ದರೆಂಬ ಸಂಗತಿ ಅನೇಕರಿಗೆ ಗೊತ್ತೇ ಇಲ್ಲ. ರೂಪಾಯಿಯ ಕುರಿತಂತೆ ಅವರ ಲೇಖನಗಳು ಸರಳವಾಗಿ ಆರ್ಥಿಕ ತತ್ತ್ವಗಳನ್ನು ವಿವರಿಸಬಲ್ಲಂಥವು. ಇಂದಿನ ಸಮಸ್ಯೆಗಳನ್ನು ಅಂಬೇಡ್ಕರ್ ಅಂದೇ ತಮ್ಮ ಲೇಖನಗಳಲ್ಲಿ ಚರ್ಚಿಸಿಬಿಟ್ಟಿದ್ದರು. ‘ರಫ್ತು ತೀವ್ರವಾಗುವ ಕಾಲಕ್ಕೆ ಸರಕುಗಳನ್ನು ಕೊಳ್ಳಲೆಂದು ಹಣ ಒಳನಾಡಿನ ಪ್ರದೇಶಗಳಿಗೂ ಹೋಗಬೇಕಾಗುತ್ತದೆ. ಸರ್ಕಾರ ಆಗ ಹಣ ಮುದ್ರಿಸಿ ಬ್ಯಾಂಕುಗಳ ಮೂಲಕ ಜನರ ಕೈಗೆ ದೊರೆಯುವಂತೆ ಮಾಡುತ್ತದೆ. ಕೆಲವು ಸಮಯದ ನಂತರ ರಫ್ತು ಕಡಿಮೆಯಾದಾಗ ಈ ಹಣ ಮರಳಿ ಬ್ಯಾಂಕುಗಳಿಗೆ ಬರಬೇಕು. ಕರೆನ್ಸಿ ಚಿನ್ನವೋ ಬೆಳ್ಳಿಯೋ ಆದರೆ ಬ್ಯಾಂಕಿಗೆ ಬರದೇ ವಿದೇಶಗಳಿಗೆ ರಫ್ತಾಗಬಹುದು; ಕರಗಿಸಿಕೊಂಡು ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲೂಬಹುದು. ಆದರೆ ಕರೆನ್ಸಿ ನೋಟುಗಳಾಗಿಬಿಟ್ಟರೆ ಅವನ್ನು ರಫ್ತು ಮಾಡಲಾಗದು, ಕರಗಿಸಲೂ ಸಾಧ್ಯವಿಲ್ಲ. ಇರುವುದೊಂದೇ ಮಾರ್ಗ. ಬ್ಯಾಂಕುಗಳಲ್ಲಿಡಬೇಕು ಅಥವಾ ತಾವೇ ಶೇಖರಿಸಿಡಬೇಕು. ಹೀಗೆ ಒಂದೆಡೆ ಕೂಡಿಟ್ಟ ಹಣ ಜಮೀನಿನಲ್ಲಿ ನಿಂತ ನೀರಿನಂತೆ. ಈ ನೀರನ್ನು ಸುಲಭವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಕ್ರಮೇಣ ನೀರು ನಿಂತ ಈ ನೆಲ ಜೌಗು ಜಮೀನಾಗಿ ಮುಂದಿನ ದಿನಗಳಲ್ಲಿ ಒಳ ಪ್ರದೇಶಗಳಿಗೆ ಹರಿಸಿದ ಹೆಚ್ಚು ಹಣವೂ ಎಲ್ಲಿಗೂ ಹೋಗದಂತೆ ತಡೆದು ಬಿಡುತ್ತದೆ. ಇದರಿಂದಾಗಿ ಬೆಲೆಗಳು ಏರುತ್ತವೆ, ಹಣದುಬ್ಬರ ಹೆಚ್ಚಾಗಿ ಕರೆನ್ಸಿಯ ಮೌಲ್ಯ ಕುಸಿಯುತ್ತಲೇ ನಡೆಯುತ್ತದೆ’ ಎಂದು ಗೋಪಾಲಕೃಷ್ಣ ಗೋಖಲೆಯವರ ಭಾಷಣವನ್ನು ಉಲ್ಲೇಖಿಸಿ ಅಂಬೇಡ್ಕರರು ಅಕ್ಷರಶಃ ಬ್ಯಾಂಕುಗಳಿಗೆ ರೂಪಾಯಿಯನ್ನು ಎಳೆದು ತರುವ ಕುರಿತಂತೆ ವಿಚಾರ ಮಂಡಿಸುತ್ತಾರೆ. ಹೀಗೆ ಕರೆನ್ಸಿಯ ಮೌಲ್ಯ ಕುಸಿದಂತೆ ಹೆಚ್ಚು ಮೌಲ್ಯದ ನೋಟುಗಳು ಮುದ್ರಣಗೊಳ್ಳುತ್ತವೆ. ಅವುಗಳು ಮತ್ತೆ ಅದೇ ಜೌಗು ನೆಲದಲ್ಲಿ ಶೇಖರಣೆ ಮಾಡಲ್ಪಡುತ್ತವೆ. ಎಷ್ಟಾದರೂ ‘ಶೇಖರಣೆಯೆಂಬ ಪಿಶಾಚಿ ಹಳೆಯದಲ್ಲವೇ’.

2
ಮೆಟ್ಟಿಕೊಂಡ ಈ ದೆವ್ವವನ್ನು ಬಿಡಿಸುವುದಕ್ಕೆ ನೋಟು ಅಮಾನ್ಯೀಕರಣದ ದಂಡವೇ ಬೇಕಿತ್ತು. ಪ್ರತೀ ವರ್ಷ ಮುದ್ರಣಗೊಂಡ ದೊಡ್ಡ ಮೌಲ್ಯದ ನೋಟುಗಳಲ್ಲಿ 86 ಪ್ರತಿಶತ ಬ್ಯಾಂಕಿಗೆ ಬರದೇ ಹೀಗೆ ಜೌಗು ನೆಲದಲ್ಲಿ ನಿಂತುಬಿಟ್ಟರೆ ರಫ್ತು ವೃದ್ಧಿಸಲು ಹಠ ತೊಟ್ಟು ನಿಂತು ಮೇಕ್ ಇನ್ ಇಂಡಿಯಾದ ಘೋಷಣೆ ಮಾಡಿರುವ ರಾಷ್ಟ್ರ ದುಡ್ಡನ್ನು ಎಲ್ಲಿಂದ ತರಬೇಕು ಹೇಳಿ? ಕಳೆದ ಐವತ್ತು ದಿನಗಳಲ್ಲಿ ದೇಶದ ಬ್ಯಾಂಕುಗಳಿಗೆ ಹರಿದು ಬಂದಿರುವ ಹಣ ಸುಮಾರು ಹದಿನಾಲ್ಕು ಲಕ್ಷ ಕೋಟಿಯಷ್ಟು. ಅನೇಕರು ಬಳಸು ಮಾರ್ಗಗಳನ್ನು ಹುಡುಕಿಕೊಂಡು ದುಡ್ಡನ್ನು ಬ್ಯಾಂಕಿಗೆ ತಂದು ಸುರುವಿದ್ದಾರೆ, ಅಷ್ಟೇ ಪ್ರಮಾಣದಲ್ಲಿ ಹೊಸ ಎರಡು ಸಾವಿರ ನೋಟುಗಳನ್ನು ಒಯ್ದು ಶೇಖರಿಸಿಟ್ಟು ಮತ್ತದೇ ಜೌಗು ನೆಲದ ನಿರ್ಮಾಣ ಮಾಡಿದ್ದಾರೆ. ಶೇಖರಿಸಿಟ್ಟ ಹಣಕ್ಕೆ ಬೆಲೆಯಿಲ್ಲ ಎಂಬುದನ್ನು ಅವರಿಗೆ ತಿಳಿಸಿಕೊಡಲಿಲ್ಲವಾದರೆ ಪರಿಸ್ಥಿತಿ ಹಳೆಯದಕ್ಕೆ ಮರಳುತ್ತದೆ. ಹೀಗಾಗಿಯೇ ತೀವ್ರ ಪ್ರಮಾಣದ ಜನಜಾಗೃತಿ ಅವಶ್ಯಕ ಅಥವಾ ತಪ್ಪು ಮಾಡಿದರೆ ಸಿಕ್ಕಿ ಬೀಳುವ ಮತ್ತು ಅಪಾರ ನಷ್ಟವನ್ನನುಭವಿಸುವ ಹೆದರಿಕೆಯಾದರೂ ಹುಟ್ಟಬೇಕು. ಸದ್ಯದ ಮಟ್ಟಿಗೆ ಇವೆರಡೂ ನಡೆಯುತ್ತಿದೆ. ಜನಜಾಗೃತಿ ಬಲು ಜೋರಾಗಿ ನಡೆದಿದ್ದರಿಂದಲೇ ನೋಟು ಅಮಾನ್ಯೀಕರಣದ ವಿರುದ್ಧ ಕೂಗು ಅರಣ್ಯ ರೋದನವಾಯ್ತು. ಅದೇ ವೇಳೆ ಕೂಡಿಟ್ಟವರ ಮನೆಯ ಮೇಲೆ ನಿರಂತರವಾಗಿ ನಡೆದ ದಾಳಿಗಳು ತಪ್ಪು ಮಾಡಿದವರ ಅಲುಗಾಡಿಸಿಬಿಟ್ಟಿತ್ತು.
ಹಾಗಂತ ಇಷ್ಟೇ ಸಾಲದು. ಅಪಾರ ಶ್ರಮವಹಿಸಿ ಬ್ಯಾಂಕಿನತ್ತ ಎಳೆದು ತಂದ ಹಣ ಮತ್ತೆ ಶೇಖರಣೆಯ ವಸ್ತುವಾಗಿ ಜೌಗು ನೆಲದ ನಿರ್ಮಾಣಕ್ಕೆ ಕಾರಣವಾಗಬಾರದೆಂದರೆ ಭಾರತ ಕಡಿಮೆ ನಗದಿನತ್ತ ವಹಿವಾಟನ್ನು ಒಯ್ಯಲೇಬೇಕು. ಬ್ಯಾಂಕಿನ ಮೂಲಕ ವಹಿವಾಟುಗಳು ನಡೆಯುವಂತಾದರೆ ದೇಶದ ಸಂಪತ್ತು ವೃದ್ಧಿಯಾಗುವುದು ಅಷ್ಟೇ ಅಲ್ಲ ಪದೇ ಪದೇ ದೊಡ್ಡ ಪ್ರಮಾಣದ ನೋಟು ಮುದ್ರಣದ ಹೊರೆಯೂ ತಪ್ಪುವುದು.
ಆರ್ಥಿಕ ತಜ್ಞರು ಅನೇಕ ಬಾರಿ ದೇಶದ ಒಟ್ಟೂ ಉತ್ಪನ್ನ ಮತ್ತು ಅದರಲ್ಲಿ ನಗದಿನ ಅನುಪಾತವನ್ನು (Cash to GDP ratio) ಲೆಕ್ಕ ಹಾಕುವುದನ್ನು ನೀವು ಕೇಳಿರಬೇಕು. ದೇಶದ ಒಟ್ಟಾರೆ ಉತ್ಪನ್ನದ ಅಭಿವೃದ್ಧಿಗೆ ಬಳಕೆಯಾಗುವುದು ಬ್ಯಾಂಕಿನಲ್ಲಿಟ್ಟ ಹಣವೋ, ನಗದೋ? ಎಂಬ ವಿಷಯಕ್ಕೆ ಸಂಬಂಧಿಸಿದ ಚರ್ಚೆ ಇದು. ಜಗತ್ತಿನ ಸದ್ಯದ ಸರಾಸರಿ ನಾಲ್ಕರಿಂದ ಐದು ಪ್ರತಿಶತದಷ್ಟಿದೆ. ಅಂದರೆ ಜಾಗತಿಕ ದೇಶೀಯ ಉತ್ಪನ್ನದಲ್ಲಿ ನಗದು ವ್ಯವಹಾರದ ಪಾತ್ರ ಹೆಚ್ಚೆಂದರೆ ಶೇಕಡಾ ಐದರಷ್ಟು ಮಾತ್ರ. ಭಾರತದಲ್ಲಿ ಈ ಪ್ರಮಾಣ 12.42 ಪ್ರತಿಶತದಷ್ಟು! ಇಲ್ಲಿ ಶೇಕಡಾ ಐದಕ್ಕಿಂತಲೂ ಕಡಿಮೆ ವ್ಯವಹಾರ ಬ್ಯಾಂಕಿನ ಮೂಲಕ ನಡೆಯುತ್ತದೆ. ಹೀಗಾಗಿಯೇ ಮುಂದುವರಿದ ಎಲ್ಲಾ ರಾಷ್ಟ್ರಗಳಿಗಿಂತಲೂ ಹೆಚ್ಚಿನ ನೋಟುಗಳು ಇಲ್ಲಿ ಬಳಕೆಯಲ್ಲಿವೆ. 2012-13 ರ ಲೆಕ್ಕಾಚಾರದಂತೆ ಸುಮಾರು 76 ಶತಕೋಟಿ ನೋಟುಗಳು ಮುದ್ರಣಗೊಂಡಿದ್ದರೆ ಅಮೇರಿಕಾದಲ್ಲಿ ಆಗ 35 ಶತಕೋಟಿಯಷ್ಟು ನೋಟುಗಳು ಚಲಾವಣೆಯಲ್ಲಿದ್ದವು. ನೆನಪಿಡಿ. ಅಮೇರಿಕಾ ಡಾಲರುಗಳು ಜಾಗತಿಕ ಕರೆನ್ಸಿಯಾಗಿದ್ದಾಗಲೂ ಅವುಗಳ ಪ್ರಮಾಣ ಅಷ್ಟು ಮಾತ್ರ! 2015ರಲ್ಲಿ ನೋಟುಗಳ ಮುದ್ರಣ, ಹಂಚಿಕೆ ಇತ್ಯಾದಿ ಚಟುವಟಿಕೆಗಳಿಗೆಂದೇ ರಿಸರ್ವ್ ಬ್ಯಾಂಕು 27 ಶತಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇನ್ನು ದೀರ್ಘಕಾಲ ಬಳಕೆಯಾದ ಹಣ ಮಣ್ಣಿನಲ್ಲಿ ರಾಡಿಯಾಗಿ, ತಂಬಾಕಿನ ಘಾಟು ಸಹಿಸಿ, ಹರಿದು ಚಿಂದಿಯಾಗುವ ಹಂತದಲ್ಲಿ ವಿಷಕ್ರಿಮಿಗಳ ಆಗರವಾಗಿಬಿಟ್ಟಿರುತ್ತದೆ. ಅನೇಕ ಬಾರಿ ಮುಟ್ಟಲೂ ಹೇಸಿಗೆಯಾಗುವಂತದ್ದು. ಈ ನೋಟುಗಳನ್ನು ಮರಳಿ ಪಡೆದು ಹೊಸತನ್ನು ಕೊಡುವುದೂ ರಿಸವರ್್ ಬ್ಯಾಂಕಿಗೆ ತಲೆ ನೋವಿನ ಕೆಲಸವೇ. ಇವೆಲ್ಲಕ್ಕೂ ಒಂದೇ ರಾಮ ಬಾಣ ಎಲೆಕ್ಟ್ರಾನಿಕ್ ವಹಿವಾಟು ಮಾತ್ರ.
ಮುಂದುವರಿದ ದೇಶವಾಗಬೇಕೆಂಬ ಕನಸು ಕಟ್ಟುವ ಭಾರತ ಟೋಲ್ ಬೂತ್ಗಳಲ್ಲಿ ನಗದು ಕಟ್ಟಿ ಚೀಟಿ ಪಡೆಯುವಲ್ಲಿ ವ್ಯಯಿಸುವ ಸಮಯವನ್ನು ಎಲೆಕ್ಟ್ರಾನಿಕ್ ವಹಿವಾಟು ಮಾಡಿ ಉಳಿಸಿಬಿಟ್ಟಿದ್ದರೆ ರಾಷ್ಟ್ರದ ವಾರ್ಷಿಕ ಉತ್ಪನ್ನ ಸ್ವಲ್ಪವಾದರೂ ವೃದ್ಧಿಯಾಗುತ್ತಿತ್ತು. ದುಬೈ, ಸಿಂಗಾಪೂರಗಳಲ್ಲಿ ಟೋಲ್ ಬೂತ್ಗಳಲ್ಲಿನ ಆರ್ಎಫ್ಐಡಿ ಟ್ಯಾಗಿನ ವ್ಯವಸ್ಥೆ ಕಂಡು ರೋಮಾಂಚಿತರಾಗುವ ನಾವು ‘ಭಾರತ ಹೀಗಾಗಲು ಸಾಧ್ಯವೇ ಇಲ್ಲ’ ಎಂದು ಹಲುಬುತ್ತಿರುತ್ತೇವಲ್ಲ, ಒಂದು ಕಠಿಣ ಹೆಜ್ಜೆ ಇಡಲೇಕೆ ಸಾಧ್ಯವಿಲ್ಲ? ನನಗೆ ಗೊತ್ತು. 128 ಕೋಟಿ ಜನರಿರುವ, ವಿಭಿನ್ನ ಸಂಸ್ಕೃತಿಗಳ, ಭಾಷೆಗಳ, ಆಚಾರ-ವಿಚಾರಗಳ ನೆಲೆವೀಡಾಗಿರುವ ಭಾರತದಂತಹ ನಾಡಿನಲ್ಲಿ ಇದು ಕಷ್ಟ, ಆದರೆ ಅಸಾಧ್ಯವಲ್ಲ. ಹಿಮಾಲಯದ ತಪ್ಪಲು, ಮರುಭೂಮಿಗೆ ಹೊಂದಿಕೊಂಡ ಹಳ್ಳಿಗಳು, ಮುಟ್ಟಲೂ ಕಷ್ಟವೆನಿಸುವ ಈಶಾನ್ಯದ ಗ್ರಾಮಗಳು, ದಕ್ಷಿಣದ ಸಮುದ್ರಕ್ಕೆ ಹೊಂದಿಕೊಂಡ ಊರುಗಳು. ಓಹ್ ಇವೆಲ್ಲವನ್ನೂ ಕ್ಯಾಶ್ಲೆಸ್ ಮಾಡಿಸುವುದು ಸಾಹಸವೇ ಸರಿ. ಒಂದೆಡೆ ಹೈನುಗಾರಿಕೆ ಮತ್ತೊಂದೆಡೆ ಮೀನುಗಾರರು, ಅತ್ತ ರೈತರು ಇತ್ತ ಸಣ್ಣ ವ್ಯಾಪಾರಿಗಳು ಇವರೆಲ್ಲರನ್ನೂ ಒಪ್ಪಿಸುವುದೂ ಸುಲಭವಲ್ಲ. ಹುಟ್ಟಿದಾಗಿನಿಂದಲೂ ದುಡ್ಡು ನೋಡಿಯೇ ಬೆಳೆದ ಇವರೆಲ್ಲರಿಗೂ ಪ್ಲಾಸ್ಟಿಕ್ ಕಾರ್ಡ್ಡ ಬಳಸಿ ವ್ಯವಹಾರ ಮಾಡಿರೆಂದು ಹೇಳುವುದಾದರೂ ಹೇಗೆ? ಇದೊಂದೇ ಪ್ರಶ್ನೆ ದೇಶದಲ್ಲಿ ಮೋದಿಯ ವಿರೋಧಿಗಳು ಕೇಳುತ್ತಿರೋದು. ರಫ್ತಿನ ಮೂಲಕ ದೇಶಕ್ಕೆ 30 ಸಾವಿರ ಕೋಟಿ ವಿದೇಶೀ ವಿನಿಮಯ ಉಳಿಸುವ ಭಾರತದ ಬೆಸ್ತರು ದಡ್ಡರೇನು? ಕ್ಷೀರಕ್ರಾಂತಿಗೆ ಸರ್ಕಾರ ಆಲೋಚನೆ ಮಾಡಿದಾಗ ಅದಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿ ಭಾರತದ ಸಾಮರ್ಥ್ಯವನ್ನು ಸಾಬೀತು ಪಡಿಸಿದ ಹೈನುಗಾರರನ್ನು ಅಜ್ಞಾನಿಗಳೆನ್ನುವಿರೇನು? ಪ್ರಗತಿಪರ ರೈತರು ಸರ್ಕಾರದ ಹಂಗಿಲ್ಲದೇ ಸಮರ್ಥ, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರಲ್ಲ ಅವರು ಹೊಸ ಚಿಂತನೆಗಳಿಗೆ ಒಗ್ಗಲಾರರೆನ್ನುವಿರಾ? ಮನಸು ಬೇಕಷ್ಟೇ. ಇವರುಗಳನ್ನು ತೋರಿಸಿಯೇ ಅನೇಕರು ಇಷ್ಟು ದಿನಗಳ ಕಾಲ ತಮ್ಮ ಬೇಳೆ ಬೇಯಿಸಿಕೊಂಡರು. ಅವರನ್ನು ದಡ್ಡರೆನ್ನುತ್ತಾ ಆರ್ಥಿಕ ಅಪ್ಪುಗೆಯಿಂದ ಹೊರಗಿಟ್ಟರು. ಆರ್ಥಿಕ ನೀತಿಗಳ ಎಲ್ಲಾ ಲಾಭವನ್ನು ತಾವುಂಡು ಈ ಜನರಿಗೆ ಸಾಲ ಮನ್ನಾದಂತಹ ಮೂಗಿಗೆ ತುಪ್ಪ ಸವರುವ ಜನಪ್ರಿಯ ಘೋಷಣೆಗಳನ್ನಷ್ಟೇ ಮಾಡಿದರು.
ನರೇಂದ್ರಮೋದಿ ಇವೆಲ್ಲಕ್ಕಿಂತಲೂ ಭಿನ್ನ. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಭಾರತವನ್ನು ತಾಂತ್ರಿಕವಾಗಿ ಸಬಲಗೊಳಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಹೈವೇಗಳಷ್ಟೇ ಇಂಟರ್ನೆಟ್ ವೇಗಳೂ ಮುಖ್ಯವೆಂಬುದು ಅವರದ್ದೇ ಘೋಷಣೆ. ಈ ಮಾತುಗಳನ್ನಾಡುವಾಗ ಅವರಿಗೆ ಬಲು ಸ್ಪಷ್ಟವಾಗಿ ಗೊತ್ತಿತ್ತು ಭಾರತದ 27 ಪ್ರತಿಶತ ಜನರಷ್ಟೇ ಇಂಟರ್ನೆಟ್ ಬಳಕೆದಾರರು ಅದರಲ್ಲೂ ಹಳ್ಳಿಯವರು ಶೇಕಡಾ 13 ರಷ್ಟು ಜನ ಮಾತ್ರ. ನೂರು ಕೋಟಿ ಮೊಬೈಲುಗಳಿವೆ. ಆದರೆ ಬ್ರಾಡ್ ಬ್ಯಾಂಡ್ ಸಂಪರ್ಕ ಹದಿನೈದು ಪ್ರತಿಶತದಷ್ಟು ಜನರಿಗೆ ಮಾತ್ರ. ಇಸ್ರೇಲಿನಲ್ಲಿ ಮೊಬೈಲಿನಲ್ಲಿ ಒಂದು ಪೇಜ್ ಲೋಡ್ ಆಗಲು ಸರಾಸರಿ 1.3 ಸೆಕೆಂಡ್ ತೊಗೊಂಡರೆ ಭಾರತದಲ್ಲಿ ಸುಮಾರು 5.5 ಸೆಕೆಂಡ್ ಬೇಕು. ಮಾರಾಟದ ದೃಷ್ಟಿಯಿಂದ ನೋಡುವುದಾದರೆ 15 ಲಕ್ಷ ಸ್ವೈಪಿಂಗ್ ಮೆಶಿನುಗಳು ಭಾರತದಲ್ಲಿದ್ದವು. ಭಾರತದಲ್ಲಿ ಒಟ್ಟು 71 ಕೋಟಿ ಡೆಬಿಟ್ ಕಾಡರ್ುಗಳಿದ್ದು ಇದನ್ನು ಬಹುಪಾಲು ಎಟಿಎಂಗಳಿಂದ ಹಣ ತೆಗೆಯಲೆಂದೇ ಬಳಸಲಾಗಿದೆ. 2016ರ ಆಗಸ್ಟ್ನಲ್ಲಿ ಎರಡು ಲಕ್ಷ ಕೋಟಿ ರೂಪಾಯಿ ನಗದು ತೆಗೆದಿದ್ದರೆ, 18ಸಾವಿರ ಕೋಟಿ ಮಾತ್ರ ಕಾರ್ಡ್ ನ ಮೂಲಕ ಹಣ ಪಾವತಿಗೆಂದು ಬಳಸಲಾಗಿತ್ತು.

3
ಇವೆಲ್ಲದರ ಅರಿವಿದ್ದುದರಿಂದಲೇ ಮೋದಿ ಗ್ರಾಮ ಗ್ರಾಮಗಳಿಗೆ ಅಂತರ್ಜಾಲ ಸಂಪರ್ಕ ಕೊಡಿಸುವ ಪ್ರಯತ್ನದಲ್ಲಿ ಹಗಲು ರಾತ್ರಿ ಶ್ರಮಿಸಿದ್ದು. 2015 ರ ಜುಲೈ ತಿಂಗಳಲ್ಲಿ ಒಂದು ಲಕ್ಷಕೋಟಿಗಿಂತಲೂ ಅಧಿಕ ಹಣ ಮೀಸಲಿಟ್ಟು 2019 ರ ವೇಳೆಗೆ ದೇಶದ ಎರಡೂವರೆ ಲಕ್ಷ ಹಳ್ಳಿಗಳನ್ನು ಅಂತರ್ಜಾಲ ವ್ಯವಸ್ಥೆಗೆ ಜೋಡಿಸುವ ಸಂಕಲ್ಪ ಮಾಡಿದ್ದು ನೆನಪಿದೆಯಲ್ಲವೇ? ಡಿಜಿಟಲ್ ಸಪ್ತಾಹ ಆಚರಿಸಲು ಕರೆಕೊಟ್ಟ ಸರ್ಕಾರ 2020 ರ ವೇಳೆಗೆ ಎಲೆಕ್ಟ್ರಾನಿಕ್ ವಸ್ತುಗಳ ಆಮದನ್ನು ಸಂಪೂರ್ಣ ನಿಲ್ಲಿಸುವ, ಅದಕ್ಕೆ ಪೂರಕವಾದ ಪರಿಸರ ನಿರ್ಮಿಸುವ ಮಾತಾಡಿದ್ದು ಮರೆತಿಲ್ಲ ತಾನೇ? ಸರಿಸುಮಾರು ಅದೇ ವೇಳೆಗೆ ಭಾರತ ಸ್ಮಾರ್ಟ್ ಫೋನುಗಳ ಬಳಕೆಯಲ್ಲಿ ಅಮೇರಿಕಾವನ್ನು ಹಿಂದಿಕ್ಕಿ ಮುಂದಡಿ ಇಟ್ಟಿತ್ತು. ಆದರೆ ಮೊಬೈಲು ಫೋನುಗಳ ತಯಾರಿ ಮಾತ್ರ ನಮ್ಮಿಂದ ಸಾಧ್ಯವಾಗಿರಲಿಲ್ಲ. ಹಾಗೆಂದೇ ಆಪಲ್ ಕಂಪೆನಿಯ ಟಿಮ್ ಕುಕ್ ರನ್ನು ಭೇಟಿ ಮಾಡಿ ಭಾರತದಲ್ಲಿ ಅತ್ಯಾಧುನಿಕ ಆಪಲ್ ಫೋನುಗಳನ್ನು ತಯಾರಿಸುವ ಘಟಕ ಶುರುಮಾಡುವ ಒಪ್ಪಂದ ಮಾಡಿಕೊಂಡರು. ಮುಂದಿನ ವರ್ಷದ ಏಪ್ರಿಲ್ಗೂ ಮುನ್ನ ಈ ಘಟಕ ಕೆಲಸ ಶುರುಮಾಡಿ ಬಿಡುತ್ತದೆ. ಅಲ್ಲಿಂದಾಚೆಗೆ ನಮ್ಮ ನೆಲದಿಂದ ಆಪಲ್ ಫೋನುಗಳು ರಫ್ತಾಗಲಾರಂಭಿಸುತ್ತವೆ. ಒಮ್ಮೆ ತಂತ್ರಜ್ಞಾನ ನುಗ್ಗಿ ಬಂದರೆ ಭಾರತೀಯರು ಅದೇ ಮಟ್ಟದ ಆಲೋಚನೆ ಶುರುಮಾಡುತ್ತಾರೆ. ಉದ್ಯೋಗ ಅಭಿವೃದ್ಧಿಯಾಗುತ್ತದೆ. ಆಗ ಕನಸು ಕಟ್ಟಿದ ತರುಣನಿಗೆ ಸಾಲ ಕೊಡಲು ಬ್ಯಾಂಕುಗಳ ಬಳಿ ಹಣ ಬೇಕಲ್ಲ; ಅದಕ್ಕೇ ತಯಾರಿ ಈಗ ಶುರುವಾಗಿದ್ದು. ಮೋದಿ ಇಷ್ಟಕ್ಕೇ ನಿಲ್ಲಲಿಲ್ಲ. ಫೇಸ್ಬುಕ್ನ ಮಾರ್ಕ್  ಜುಕರ್ಬರ್ಗ್ ರನ್ನು ಭೇಟಿ ಮಾಡಿ ಭಾರತದಲ್ಲಿ ಅಂತರ್ಜಾಲದ ವೇಗ ಹೆಚ್ಚಿಸುವ ಕುರಿತಂತೆ ಮಾತುಕತೆ ನಡೆಸಿದರು. ಅದೇ ವೇಳೆಗೆ ಬಿಎಸ್ಎನ್ಎಲ್ನ್ನು ಪರಿಣಾಮಕಾರಿಯಾಗುವಂತೆ ಜೀವ ತುಂಬಿದರು. ಖಾಸಗಿಯವರಿಗೆ ಇಂಟರ್ನೆಟ್ಟಿನ ವೇಗ ಹೆಚ್ಚಿಸುವುದಕ್ಕೆ ಪ್ರೇರಣೆ ನೀಡಿ ಕಡಿಮೆ ಬೆಲೆಗೆ ಹೆಚ್ಚಿನ ವೇಗದ ಸರ್ಫಿಂಗ್ ಗೆ ಅವಕಾಶ ಮಾಡಿಕೊಟ್ಟರು.

4
ಇವೆಲ್ಲದರ ನಂತರವೇ ಅವರು ಕ್ಯಾಶ್ಲೆಸ್ ಆಗಿರೆಂದು ಕೇಳುತ್ತಿರೋದು. ಹಳ್ಳಿಗರಿಗೆ ಸಾಧ್ಯವಿಲ್ಲವೆಂದರೆ ಬಿಡಿ, ಪಟ್ಟಣಿಗರಾಗಬಹುದಲ್ಲ; ಅನಕ್ಷರಸ್ಥರಿಗೆ ಆಗದೆಂದರೆ ಬಿಡಿ, ತಿಳಿದುಕೊಂಡವರು ಹೆಜ್ಜೆ ಇಡಬಹುದಲ್ಲ! ವಾಸ್ತವವಾಗಿ ಹಳ್ಳಿಗರಿಗೆ ಹಣದ ಪ್ರವಾಹ ಹರಿಯದಂತೇ ಜೌಗು ನೆಲಗಳನ್ನು ನಿಮರ್ಿಸಿರೋದು ಇದೇ ಪಟ್ಟಣದಲ್ಲಿರುವ ಬುದ್ಧಿಜೀವಿ ವರ್ಗ. ಅಂಬೇಡ್ಕರ್ ಅಂದೇ ಇಂತಹವರನ್ನು ಗುರುತಿಸಿ ಎಚ್ಚರಿಕೆ ಕೊಟ್ಟಿದ್ದರು. ಅವರ ಹೃದಯ ಮಿಡಿತ ಅರ್ಥೈಸಿಕೊಂಡಿದ್ದು ಮೋದಿ ಮಾತ್ರ. ಹಾಗೆಂದೇ ಎಲೆಕ್ಟ್ರಾನಿಕ್ ವಹಿವಾಟಿಗೆ ದೇಶ ನಿರ್ಮಿಸಿದ ನೂತನ ಅಪ್ಲಿಕೇಶನ್ ಗೆ ‘ಭೀಮ್’ ಅಂತ ಹೆಸರಿಟ್ಟದ್ದು. ಸಾರ್ಥಕವಾಯ್ತು ಬಿಡಿ.

Comments are closed.