ವಿಭಾಗಗಳು

ಸುದ್ದಿಪತ್ರ


 

ಭಗತ್ ಸಿಂಗ್ ದೇವರನ್ನು ನಂಬುತ್ತಿರಲಿಲ್ಲವೇ?!

1930. ಗದರ್ ಪಾಟರ್ಿಯ ಬಾಬಾ ರಣಧೀರ್ ಸಿಂಗ್ ಲಾಹೋರ್ ಮೊಕದ್ದಮೆಯ ಬಂಧಿಯಾಗಿದ್ದರು. ಅವರ ಪಕ್ಕದಲ್ಲಿಯೇ ಮೊಕದ್ದಮೆಯನ್ನು ಎದುರಿಸುತ್ತಿರುವ ತರುಣ ಕ್ರಾಂತಿಕಾರಿ ಭಗತ್ಸಿಂಗ್. ಬಾಬಾ ಭಗತ್ನೊಂದಿಗೆ ಸದಾಕಾಲ ಚಚರ್ೆ ಮಾಡುತ್ತಿದ್ದರು. ಅದೊಂದು ದಿನ, ‘ಇನ್ನಾದರೂ ದೇವರನ್ನು ನಂಬು. ಆತನ ಪ್ರಾರ್ಥನೆ ಮಾಡಿಕೊ’ ಎಂದು ಬುದ್ಧಿವಾದ ಹೇಳಿದರು. ಭಗತ್ ನಕ್ಕುಬಿಟ್ಟ. ‘ಇಷ್ಟು ದಿನಗಳ ಕಾಲ ದೇವರನ್ನು ನಂಬದೇ ಧೀರನಾಗಿದ್ದ ನಾನು ಈಗ ಪ್ರಾರ್ಥನೆಗೆ ನಿಂತರೆ ಹೆದರಿಕೊಂಡೆನೆಂದು ದೇವರೂ ನಕ್ಕಾನು’ ಎಂದ. ಬಾಬಾ ಕುಪಿತಗೊಂಡರು. ‘ನಿನಗೆ ಸಿಕ್ಕಿರುವ ಖ್ಯಾತಿಯಿಂದಾಗಿ ನಿನ್ನ ತಲೆ ತಿರುಗಿದೆ. ಧಿಮಾಕು ಬಂದಿದೆ. ಅಹಂಕಾರ ಕಪ್ಪು ಪರದೆಯಾಗಿ ನಿನ್ನ ಮತ್ತು ಭಗವಂತನ ನಡುವೆ ನಿಂತುಬಿಟ್ಟಿದೆ’ ಎಂದು ಆಕ್ರೋಶದಿಂದಲೇ ಗದರಿದರು. ಭಗತ್ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಲಿಲ್ಲ. ಆದರೆ ತನ್ನ ನಾಸ್ತಿಕತೆಯ ಕುರಿತಂತೆ ಪ್ರಬಂಧವೊಂದನ್ನೇ ಬರೆದು ಸಮಾಜದ ಮುಂದಿಟ್ಟ. ನಾನೇಕೆ ನಾಸ್ತಿಕ ಎಂಬ ಭಗತ್ಸಿಂಗನ ಈ ಪ್ರಬಂಧ ಕಮ್ಯುನಿಸ್ಟರ ಪಾಲಿಗೆ ವಿಜಯೋತ್ಸವದ ಕರಪತ್ರ!

ಧ್ಯೇಯ ಸಾಧನೆಗೆ ತಮ್ಮನ್ನು ತಾವು ಅಪರ್ಿಸಿಕೊಂಡ ಜನರಲ್ಲಿ ಸಾಧಾರಣವಾಗಿ ಎರಡು ಬಗೆಯ ಜನರಿರುತ್ತಾರೆ. ಮೊದಲು ಈ ಮಾರ್ಗದಲ್ಲಿ ನಡೆಯುವವರನ್ನು ಸಿದ್ಧಗೊಳಿಸೋಣ, ಆನಂತರ ಬರಬೇಕಾದ್ದು ಅಧಿಕಾರಯುತವಾಗಿಯೇ ಬರುತ್ತದೆ ಎನ್ನುವವರು ಒಂದು ಬಗೆಯ ಜನರಾದರೆ, ಮೊದಲು ಅಧಿಕಾರವನ್ನೇ ಗಳಿಸಿಬಿಡೋಣ, ಆನಂತರ ಯಾರನ್ನು ಬೇಕಿದ್ದರೂ ತಯಾರು ಮಾಡುವ ಪ್ರಕ್ರಿಯೆ ಸುಲಭವಾಗುತ್ತದೆ ಎನ್ನುವವರು ಮತ್ತೊಂದು ಬಗೆಯ ಜನ. ಬಹುಶಃ ಈ ಎರಡೂ ಮಾರ್ಗಕ್ಕೆ ಸೂಕ್ತವಾಗಬಲ್ಲ ಚಿಂತನೆಗಳನ್ನು ಕೊಟ್ಟವರು ಸ್ವಾಮಿ ವಿವೇಕಾನಂದರೇ ಇರಬೇಕೇನೋ. ಸ್ವಾತಂತ್ರ್ಯ ಎನ್ನುವುದು ಜವಾಬ್ದಾರಿ. ಅದನ್ನು ಹೊರಬಲ್ಲ ಮಂದಿ ಸಿದ್ಧರಾದೊಡನೆ ಅದು ತಂತಾನೆ ಧಾವಿಸಿ ಬರುತ್ತದೆ ಎನ್ನುತ್ತಿದ್ದವರೇ, ರಷ್ಯಾದ ಕ್ರಾಂತಿಕಾರಿ ಕ್ರೊಪೊಟ್ಕಿನ್ ಅನ್ನು ಭೇಟಿ ಮಾಡಿದಾಗ ಅಗತ್ಯಬಿದ್ದರೆ ಭಾರತೀಯ ತರುಣರಿಗೂ ಬಾಂಬಿನ ತಯಾರಿಕೆ ಹೇಳಿಕೊಡುವಿರಾ ಎಂದೂ ಕೇಳಿಕೊಂಡಿದ್ದರು. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಗಾಂಧಿಯೇ ಮೊದಲಾದ ಅಹಿಂಸಾವಾದಿಗಳು ಭಾರತೀಯರನ್ನು ಸಜ್ಜುಗೊಳಿಸುವ ಸುದೀರ್ಘ ಪ್ರಯತ್ನ ನಡೆಸಿದ್ದರು. ಮುಂದಿನ ವರ್ಷವೇ ಸ್ವಾತಂತ್ರ್ಯ ಬಂದುಬಿಡುತ್ತದೆ ಎಂಬ ಹೇಳಿಕೆಯಿಂದ ಹಿಡಿದು 42ರ ಭಾರತ ಬಿಟ್ಟು ತೊಲಗಿ ಆಂದೋಲನದವರೆಗೂ ಅಹಿಂಸಾವಾದ ಹಲವು ಬಗೆಯ ಏಳು-ಬೀಳುಗಳನ್ನು ಕಂಡಿದೆ. ಈ ಮಾರ್ಗದ ವೈಶಿಷ್ಟ್ಯ ಮತ್ತು ಸಮಸ್ಯೆ ಎರಡೂ ನಿಧಾನಗತಿಯದ್ದೇ. ಆಧ್ಯಾತ್ಮದ ಚಿಂತನೆಗೆ ಬಲು ಹತ್ತಿರವೆನಿಸುವಂಥದ್ದು. ಹೀಗಾಗಿಯೇ ಈ ಮಾಗರ್ಿಗಳಲ್ಲಿ ಅನೇಕ ಬಾರಿ ಬೂಟಾಟಿಕೆ ಇಣುಕಿಬಿಡುತ್ತದೆ. ಮೇಲ್ನೋಟಕ್ಕೆ ಒಂದು, ಒಳಗೆ ಮತ್ತೊಂದು ಅವರಿಗೆ ಸಾಮಾನ್ಯ. ಯರವಾಡ ಜೈಲಿನಲ್ಲಿ ಸಾವರ್ಕರ್ರ ಜೊತೆಗಿದ್ದ ಕೆಲವು ಗಾಂಧಿವಾದಿಗಳು ಪೊಲೀಸರಿಗೆ ಅರಿವಾಗದೇ ಸಾವರ್ಕರ್ರು ಬಳಸುತ್ತಿದ್ದ ಪೆನ್ಸಿಲ್ಲು, ಪೇಪರುಗಳಿಗೆ ಆಕ್ಷೇಪವೆತ್ತಿದ್ದರಂತೆ. ಸತ್ಯವನ್ನು ಬಿಟ್ಟು ನಡೆಯುವಂತಿಲ್ಲವಲ್ಲ; ಆದರೆ ಅವರುಗಳೇ ಜೈಲರ್ಗೆ ಗೊತ್ತಾಗದಂತೆ ಒಂದೊಂದು ರೊಟ್ಟಿ ಹೆಚ್ಚು ತಿನ್ನುವುದನ್ನು ತಪ್ಪೆಂದು ಭಾವಿಸುತ್ತಿರಲಿಲ್ಲವಂತೆ. ಬೂಟಾಟಿಕೆ ಹೀಗೆಯೇ. ನಾಯಕ ಕಟ್ಟುನಿಟ್ಟಾಗಿರುತ್ತಾನೆ. ಆ ಬಂಧನಕ್ಕೆ ಒಳಗಾಗಲಾಗದೇ ಅನುಯಾಯಿಗಳು ಮಾರ್ಗಭ್ರಷ್ಟರಾಗಿಬಿಡುತ್ತಾರೆ!

ಅಧಿಕಾರವನ್ನು ಪಡೆಯಲು ಕ್ರಾಂತಿಯ ಮಾರ್ಗವನ್ನು ಅನುಸರಿಸುವವರು ವೇಗವಾಗಿ ಓಡುತ್ತಲಿರುತ್ತಾರೆ. ಕ್ರಾಂತಿಯ ಚಕ್ರ ಹಾಗೆಯೇ. ಪ್ರತಿಯೊಬ್ಬರಿಗೂ ಸದ್ಯದಲ್ಲಿಯೇ ಅನೂಹ್ಯವಾದ್ದೊಂದು ನಡೆಯಲಿದೆ ಎಂಬ ಭರವಸೆ ಗಟ್ಟಿಯಾಗಿಬಿಟ್ಟಿರುತ್ತದೆ. ಈ ಭಾವನೆಯಿಂದ ಓಡುತ್ತಿರುವವರಿಗೆ ವರುಷಗಳಿರಲಿ ದಿನ-ಕ್ಷಣಗಳನ್ನೂ ಕಳೆಯುವುದೂ ಬಲು ಕಷ್ಟವೇ. ಬಹಳ ಆಸ್ಥೆಯಿಂದ ರೂಪಿಸಿದ ಯೋಜನೆಯೊಂದು ನಿರೀಕ್ಷಿತ ಫಲ ಕೊಡದೇ ಹೋದಾಗ ಉಂಟಾಗುವ ಭ್ರಮನಿರಸನ ಎಲ್ಲದರ ಮೇಲೂ ಭರವಸೆ ಕಳೆದುಕೊಳ್ಳುವಂತೆ ಮಾಡುತ್ತದೆ. ಭಗತ್ಸಿಂಗನಿಗೆ ಹಾಗೆಯೇ ಆಗಿತ್ತು.

1927ರಲ್ಲಿ ಬಂಧನಕ್ಕೊಳಗಾದ ಭಗತ್ ಮೊದಲ ಬಾರಿಗೆ ಪೊಲೀಸರ ಚಟುವಟಿಕೆಯನ್ನು ಹತ್ತಿರದಿಂದ ಗಮನಿಸಿದ್ದ. ಸುಮಾರು ಒಂದು ತಿಂಗಳುಗಳ ಕಾಲ ಜೈಲಿನೊಳಗಿದ್ದ ಆತನ ಮನಸ್ಸಿನಲ್ಲಿ ಆಗಲೇ ನಾಸ್ತಿಕತೆಯ ಬೀಜಗಳು ಮೊಳಕೆಯೊಡೆದಿದ್ದವು. ಆದರೆ ಮೂಲತಃ ಆತನ ಮನೆ ಆಸ್ತಿಕರದ್ದೇ. ತಂದೆ ಕಡು ಆರ್ಯ ಸಮಾಜಿ. ತಾಯಿ ಧರ್ಮಭೀರು. ಸಹಜವಾಗಿಯೇ ಭಗತ್ ಆ ಭಾವನೆಯಿಂದಲೇ ಬೆಳೆದ. ಯೌವ್ವನಕ್ಕೆ ಬರುವ ವೇಳೆಗೆ ತಂದೆ ಅವನಿಗೆ ಸ್ವಾತಂತ್ರ್ಯವನ್ನು ಸಾಕಷ್ಟು ಕೊಟ್ಟಿದ್ದರು. ನಿರಾಕಾರ ಭಗವಂತನನ್ನು ತನಗೆ ಬೇಕಾದಂತೆ ಕಲ್ಪಿಸಿಕೊಳ್ಳುವ ಅವಕಾಶ ಅವನಿಗೆ ಇದ್ದೇ ಇತ್ತು. ಕ್ರಾಂತಿಕಾರ್ಯಕ್ಕೆಂದು ತನ್ನನ್ನು ಸಮಪರ್ಿಸಿಕೊಂಡಾಗಲೂ ಭಗತ್ ಭಕ್ತನೇ. ಸಚೀಂದ್ರನಾಥ್ ಸನ್ಯಾಲ್ ಸದಾ ಪ್ರಾರ್ಥನೆಯಲ್ಲಿ ನಿರತವಾಗಿರುತ್ತಿದ್ದುದನ್ನು ಆತ ತನ್ನ ಪ್ರಬಂಧದಲ್ಲಿ ಉಲ್ಲೇಖಿಸುತ್ತಾನೆ. ರಾಮ್ಪ್ರಸಾದ್ ಬಿಸ್ಮಿಲ್ರಂಥವರು ನೇಣಿಗೇರುವ ಮುನ್ನ ಸುದೀರ್ಘ ಪ್ರಾರ್ಥನೆಯಲ್ಲಿ ಕಾಲಕಳೆಯುತ್ತಿದ್ದುದನ್ನೂ ನೆನಪಿಸಿಕೊಳ್ಳುತ್ತಾನೆ. ಅದೇ ವೇಳೆ ಕ್ರಾಂತಿಕಾರ್ಯದ ಚುಕ್ಕಾಣಿ ತನ್ನ ಕೈಗೆ ಬಂದ ನಂತರ ನಾಸ್ತಿಕತೆಯ ಕಡೆಗೆ ಇಡಿಯ ಚಟುವಟಿಕೆಯನ್ನು ಕೊಂಡೊಯ್ದದ್ದರ ಕುರಿತಂತೆಯೂ ಆಲೋಚನೆ ನಡೆಸುತ್ತಾನೆ.

ಒಂದು ನಿಮಿಷ ಲೇಖನವನ್ನು ಇಲ್ಲಿಗೆ ನಿಲ್ಲಿಸಿ ಧಾಮರ್ಿಕ ವ್ಯಕ್ತಿಯಾದ ಭಗತ್ ನಾಸ್ತಿಕನಾಗಲು ಕಾರಣವೇನಿರಬಹುದೆಂಬುದನ್ನು ಅವಲೋಕಿಸಲು ಪ್ರಯತ್ನ ಮಾಡೋಣ. 1928ರಲ್ಲಿ ಕೀತರ್ಿ ಎಂಬ ಪತ್ರಿಕೆಗೆ ಭಗತ್ ಬರೆದ ‘ಧರ್ಮ ಮತ್ತು ರಾಷ್ಟ್ರ ರಾಜಕಾರಣ’ ಎಂಬ ಲೇಖನದಲ್ಲಿ ಆತ ಸೂಕ್ಷ್ಮವಾಗಿ ಇದರ ಉಲ್ಲೇಖ ಮಾಡುತ್ತಾನೆ. ಜಾತಿ-ಜಾತಿಗಳ ನಡುವಣ ಕದನ, ಭಿನ್ನ-ಭಿನ್ನ ಧರ್ಮಗಳಲ್ಲಿರುವಂತಹ ವೈರುಧ್ಯ ಅವನನ್ನು ಕಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಈ ಮತ-ಪಂಥಗಳ ಗುಣದಿಂದಾಗಿಯೇ ಸ್ವಾತಂತ್ರ್ಯ ಹೋರಾಟದಿಂದ ಜನ ದೂರ ಸರಿದಿದ್ದಾರೆ ಎಂಬುದನ್ನು ಲೇಖನದಲ್ಲಿ ಆತ ಗುರುತಿಸುತ್ತಾನೆ. ಇದಾದ ಸ್ವಲ್ಪ ದಿನಗಳಲ್ಲಿಯೇ ಅದೇ ಪತ್ರಿಕೆಗೆ ಬರೆದ ಮತ್ತೊಂದು ಲೇಖನ ಮತೀಯ ಸಮಸ್ಯೆಗಳು ಮತ್ತು ಪರಿಹಾರಗಳಲ್ಲಿ ಆತ ಇದನ್ನು ಇನ್ನಷ್ಟು ಸೂಕ್ಷ್ಮವಾಗಿ ವಿವರಿಸುತ್ತಾನೆ. ಆ ವೇಳೆಗಾಗಲೇ ಆರ್ಯ ಸಮಾಜದ ಪತ್ರಿಕೆಯೊಂದು ರಂಗೀಲಾ ರಸೂಲ್ ಎಂಬ ಲೇಖನವನ್ನು ಪ್ರಕಟಿಸಿ ಹಿಂದೂ-ಮುಸಲ್ಮಾನರ ನಡುವೆ ಬಲುದೊಡ್ಡ ಕಂದಕ ಉಂಟಾಗುವಂತೆ ಮಾಡಿಬಿಟ್ಟಿತ್ತು. ಪ್ರತಿಯೊಬ್ಬರಿಗೂ ತಮ್ಮ ಮತ-ಪಂಥವೇ ಶ್ರೇಷ್ಠ ಎಂದು ಹೇಳಿಕೊಳ್ಳುವ ಧಾವಂತ ಭಗತ್ಸಿಂಗನನ್ನು ಸಾಕಷ್ಟು ಕಾಡಿತ್ತು. ಎಲ್ಲರನ್ನೂ ಧರ್ಮದ ತಳಹದಿಯಿಂದ ದೂರ ತಂದುಬಿಟ್ಟರೆ, ದೇವರ ಕಲ್ಪನೆಯಿಂದ ಪ್ರತ್ಯೇಕ ಮಾಡಿಬಿಟ್ಟರೆ ಸ್ವಾತಂತ್ರ್ಯ ಹೋರಾಟಕ್ಕೊಂದು ಸಮಾನ ಭೂಮಿಕೆ ದಕ್ಕುತ್ತದೆ ಎಂಬುದು ಆತನ ಸ್ಪಷ್ಟ ಕಲ್ಪನೆಯಾಗಿತ್ತು. ಬಹುಶಃ ಈ ಸಮಕಾಲೀನ ಪರಿಸ್ಥಿತಿಗಳ ಪ್ರಭಾವ ಆತನ ಮೇಲೆ ಮಾಡಿರಲಿಕ್ಕೆ ಸಾಕು. ಇಲ್ಲದೇ ಹೋದರೆ ತನ್ನ ಬಳಿ ಬಂದ ಕ್ರಾಂತಿಕಾರಿಗಳಿಗೆ ಸಾವರ್ಕರ್ರ ಹಿಂದುತ್ವ ಮತ್ತು ಹಿಂದೂ ಪದ್ ಪಾದ್ಶಾಹಿ ಪುಸ್ತಕವನ್ನು ಓದಲು ಹೇಳುತ್ತಿರಲಿಲ್ಲ. ಭಗತ್ ಮತ್ತು ಸುಖದೇವ್ರನ್ನು ತನ್ನ ಯೌವ್ವನ ಕಾಲದಲ್ಲಿ ಭೇಟಿ ಮಾಡಿದ ದುಗರ್ಾದಾಸ್ ಎಂಬ ಸ್ವಾತಂತ್ರ್ಯ ಹೋರಾಟಗಾರ 1976ರಲ್ಲಿ ಕೊಟ್ಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಲ್ವಿಂದರ್ಜಿತ್ ಸಿಂಗ್ ಮತ್ತು ಹರೀಶ್ ಜೈನ್ ಎಂಬ ಇತಿಹಾಸಕಾರರು ಭಗತ್ ಕೊನೆಯ ದಿನಗಳಲ್ಲಿ ಹಿಂದೂಪದ್ ಪಾದ್ಶಾಹಿಯನ್ನು ಓದುತ್ತಿದ್ದನೆಂದು ದಾಖಲಿಸಿದ್ದಾರಲ್ಲದೇ ಸುಖದೇವನ ಮನೆಯ ಝಡತಿಯಾದಾಗ ಅಲ್ಲಿ ಈ ಪುಸ್ತಕ ಸಿಕ್ಕಿತ್ತೆಂದು ಹೇಳಿದ್ದಾರೆ. ಹೀಗಾಗಿ ನೇಣಿಗೇರುವ ಮುನ್ನ ಎರಡನೇ ಬಾರಿ ಆ ಪುಸ್ತಕವನ್ನು ಆತ ಓದುತ್ತಿರಬೇಕೆಂದು ಊಹಿಸುತ್ತಾರೆ. ಭಾರತದ ಎಲ್ಲ ಎಡಪಂಥೀಯ ಇತಿಹಾಸಕಾರರೂ ಇವಿಷ್ಟನ್ನೂ ಪಕ್ಕಕ್ಕಿಟ್ಟು ಭಗತ್ ಮಾಕ್ಸರ್್ ಮತ್ತು ಲೆನಿನ್ರ ಅನುಯಾಯಿಯಾಗಿದ್ದ ಎಂದುಬಿಡುತ್ತಾರೆ! ಇವರಿಬ್ಬರನ್ನೂ ಭಗತ್ ಧ್ಯಾನಿಸುತ್ತಿದ್ದುದು ನಿಜವೇ ಆದರೆ ಅವನೆಂದಿಗೂ ಕಮ್ಯುನಿಸ್ಟ್ ಸಿದ್ಧಾಂತವನ್ನು ಪ್ರಚುರಪಡಿಸಲಿಲ್ಲವೇಕೆ? ಎಂದು ಕೇಳಿ, ಉತ್ತರಿಸದೇ ನುಣುಚಿಕೊಂಡುಬಿಡುತ್ತಾರೆ.

ಭಗತ್ನ ಮೇಲೆ ರಷ್ಯಾದ ನಿರೀಶ್ವರವಾದಿ ಕ್ರಾಂತಿಕಾರಿ ಮಿಖಾಯಿಲ್ ಬಕುನಿನ್ ಪ್ರಭಾವವಾಗಿದ್ದು ನಿಜವೇ. ಭಾರತೀಯ ಪರಿಸ್ಥಿತಿಗಳ ಪರಿಪ್ರೇಕ್ಷ್ಯದಲ್ಲಿ ಈ ಪ್ರಭಾವದಿಂದಾಗಿ ಆತ ವಾಸ್ತವವಾದಿಯೋ ನಾಸ್ತಿಕನೋ ಆಗಿರಲು ಸಾಕು. ಹಾಗಿದ್ದರೂ ತನ್ನ ಪ್ರಬಂಧದಲ್ಲಿ ತಾನು ಧಿಮಾಕಿನಿಂದ ನಾಸ್ತಿಕನಲ್ಲವೆಂದೂ ವೈಚಾರಿಕವಾಗಿ ದೇವರನ್ನು ಧಿಕ್ಕರಿಸುತ್ತಿದ್ದೇನೆಂದೂ ಬರೆದುಕೊಳ್ಳುತ್ತಾನೆ. ಕೊನೆಗೆ ತನಗೆ ದರ್ಶನಗಳ ಕುರಿತಂತ ಅಧ್ಯಯನ ಸಾಕಷ್ಟಿಲ್ಲ, ಹೀಗಾಗಿ ಇವುಗಳ ಬಗ್ಗೆ ಪರಿಪೂರ್ಣನಾಗಿ ಮಾತನಾಡಲು ತಾನು ಯೋಗ್ಯನಲ್ಲ ಎಂದೂ ಕೇಳಿಕೊಂಡುಬಿಡುತ್ತಾನೆ. ಪದೇ ಪದೇ ಮತ-ಪಂಥಗಳ ನಡುವಿನ ವೈರುಧ್ಯಕ್ಕೆ ಕಾರಣವೇನೆಂದು ಹುಡುಕಾಡುವ ಪ್ರಯತ್ನ ಪ್ರಬಂಧದಲ್ಲಿ ಕಂಡುಬರುತ್ತದೆ. ಆದರೆ ಆತ ಅಲ್ಲಿಗೇ ನಿಲ್ಲುವುದಿಲ್ಲ. ತಮ್ಮನ್ನು ತಾವು ಆಸ್ತಿಕರೆಂದುಕೊಂಡವರಿಗೆ ಒಂದಷ್ಟು ಪ್ರಶ್ನೆಗಳನ್ನು ಮುಂದಿಡುತ್ತಾನೆ. ಸೃಷ್ಟಿ ಮಾಡಿದ್ದು ಭಗವಂತನೇ ಆದರೆ, ಜಗತ್ತಿನಲ್ಲಿರುವ ಈ ದುಃಖ ಏತಕ್ಕೆ? ಎಂದೂ ಕೇಳುತ್ತಾನೆ. ಪ್ರತಿಯೊಬ್ಬ ಜಿಜ್ಞಾಸುವೂ ಕೇಳಬಹುದಾದ ಪ್ರಶ್ನೆ ಇದು. ರಾಮಕೃಷ್ಣರಂತಹ ಗುರುಗಳು ಸಿಕ್ಕ ನಂತರವೂ ವಿವೇಕಾನಂದರಿಗೆ ಈ ಪ್ರಶ್ನೆ ಇರಲಿಲ್ಲವೆಂದೇನೂ ಅಲ್ಲ. ಹೀಗಾಗಿ ಯಾವ ಮತ-ಪಂಥಗಳು ಈ ಪ್ರಶ್ನೆಗೆ ಉತ್ತರಿಸುವುದೋ ಇಲ್ಲವೋ ಗೊತ್ತಿಲ್ಲ, ಆದರೆ ಹಿಂದೂಧರ್ಮವಂತೂ ಸ್ಪಷ್ಟವಾದ ಉತ್ತರವನ್ನೇ ಕೊಡುತ್ತದೆ. ಕೃಷ್ಣ ಗೀತೆಯಲ್ಲೇ ಹೇಳುತ್ತಾನಲ್ಲ, ಸೃಷ್ಟಿ ಎಂದರೆ ಅವ್ಯಕ್ತವಾಗಿರುವುದು ವ್ಯಕ್ತವಾಗುವ ಪ್ರಕ್ರಿಯೆ ಅಷ್ಟೇ. ಭಗತ್ಸಿಂಗ್ ಈ ವಿಚಾರಗಳ ಆಳಕ್ಕೆ ಇಳಿಯದಿದ್ದುದರಿಂದ ಒಂದಷ್ಟು ಪ್ರಶ್ನೆಗಳೊಂದಿಗೆ ಆತ ನಾಸ್ತಿಕನಾಗಿಯೇ ಉಳಿದ. ಲಕ್ಷಾಂತರ ಜನ ಹಸಿವಿನಿಂದ ಸಾಯುವುದು ಏಕೆ? ಎಂಬ ಪ್ರಶ್ನೆ ಆತ ಓದುಗರ ಮುಂದಿರಿಸುತ್ತಾನೆ. ಅದನ್ನು ಲೀಲೆ ಎಂದೋ ಭಗವಂತ ಸೃಷ್ಟಿಸಿದ ಜಗತ್ತಿನ ನಿಯಮಗಳೆಂದೋ ತಳ್ಳಿ ಹಾಕುವುದನ್ನು ಆತ ಧಿಕ್ಕರಿಸುತ್ತಾನೆ. ಕೊನೆಗೆ ಭಗವಂತ ಶಕ್ತರಾದವರನ್ನು ಸೃಷ್ಟಿಸಿ, ನಿರ್ಬಲರನ್ನು ತುಳಿಯುವ ಅವಕಾಶವನ್ನು ಏಕೆ ಮಾಡಿಕೊಡುತ್ತಾನೆ ಎಂದೂ ಓದುಗರನ್ನು ಕೇಳುತ್ತಾನೆ. ಕೊನೆಗೆ ಪಾಪಿಗಳ ತಲೆಯಲ್ಲಿ ಕುಳಿತು ಭಗವಂತ ಪಾಪವನ್ನು ತಡೆಯುವುದಿಲ್ಲವೇಕೆ? ಬ್ರಿಟೀಷರ ಮನ ಪರಿವತರ್ಿಸಿ ಅವರಾಗಿಯೇ ಬಿಟ್ಟುಹೋಗುವಂತೆ ಮಾಡುವುದಿಲ್ಲವೇಕೆ? ಎಂಬ ಪ್ರಶ್ನೆಯನ್ನೂ ಕೇಳುತ್ತಾನೆ. ಇದರಲ್ಲಿ ಯಾವುವೂ ಉತ್ತರಿಸಲಾಗದ್ದಂಥದ್ದೇನೂ ಅಲ್ಲ. ಆದರೆ 24ರ ವಯಸ್ಸಿನಲ್ಲಿ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡುತ್ತಾ ಉರುಳಿನೆದುರಿಗೆ ಬಂದು ನಿಂತ ಭಗತ್ಸಿಂಗ್ ತನ್ನ ವ್ಯಾಪ್ತಿಯಲ್ಲಿ ಕಂಡುಕೊಂಡ ಗೊಂದಲಗಳಿವು. ಈ ಗೊಂದಲ ಧರ್ಮವನ್ನು ನಾಶಮಾಡಿಬಿಡುವ, ಬಹುಸಂಖ್ಯಾತರನ್ನು ತುಳಿದೇಬಿಡುವ ಇಂದಿನ ಕಮ್ಯುನಿಸ್ಟರ ವ್ಯವಸ್ಥಿತವಾದ ಗೊಂದಲದಂತಲ್ಲ. ಬದಲಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ-ಮತ-ಪಂಥಗಳನ್ನು ಮರೆತು ಎಲ್ಲರೂ ಒಟ್ಟಾಗಲು ಬೇಕಾದ ಸಾಮಾನ್ಯ ಭೂಮಿಕೆಯ ನಿಮರ್ಾಣ ಅಷ್ಟೇ. ಅವನ ನಾಸ್ತಿಕತೆಯ ಹಿಂದೆಯೂ ಒಂದು ಶುದ್ಧ ರಾಷ್ಟ್ರಭಕ್ತನ ಆಸ್ತಿಕ ಮನೋಗತವೂ ಕಂಡುಬರುತ್ತದೆ. ಆದರೆ ಕಾಮ್ರೇಡುಗಳೆಂದು ಎದೆ ಬಡಿದುಕೊಳ್ಳುವವರು ಭಾರತವನ್ನು ತುಂಡುಗೈದು ರಷ್ಯಾಕ್ಕೋ ಚೀನಾಕ್ಕೋ ಮಾರಿಬಿಟ್ಟರೂ ಆನಂದಿಸುತ್ತಾ ಸುಖಿಸಿಬಿಡುತ್ತಾರೆ.

ಇದೇ ಭಗತ್ ಈ ಕೃತಿ ಬರೆದ ಕೆಲವು ತಿಂಗಳುಗಳೊಳಗೆ ನೇಣಿಗೇರಬೇಕಾದ ಪರಿಸ್ಥಿತಿ ಬಂತು. ಆಗಲೇ ಕಾಂಗ್ರೆಸ್ಸು ಗಾಂಧಿ ಇವರ್ಿನ್ ಒಪ್ಪಂದದ ಮೇಜಿನಲ್ಲಿತ್ತು. ಗಾಂಧೀಜಿ ಹಠ ಹಿಡಿದರೆ ಭಗತ್ ಉಳಿಯುತ್ತಾರೆಂದು ದೇಶವೆಲ್ಲಾ ನಂಬಿತ್ತು. ಆದರೆ ಗಾಂಧೀಜಿ ಒಪ್ಪಂದಕ್ಕೂ ಭಗತ್ಸಿಂಗ್ ನೇಣಿಗೇರುವುದಕ್ಕೂ ಸಂಬಂಧವಿಲ್ಲವೆಂದುಬಿಟ್ಟರು. ಇಂದಿಗೂ ಈ ಕಾರಣಕ್ಕಾಗಿ ಗಾಂಧೀಜಿಯನ್ನು ಅನೇಕರು ದ್ವೇಷಿಸುತ್ತಾರೆ. ಆದರೆ ಹೀಗೊಂದು ನಿರ್ಣಯ ತೆಗೆದುಕೊಂಡಿದ್ದು ಗಾಂಧೀಜಿ ಒಬ್ಬರೇ ಅಲ್ಲ. ನೆಹರೂ ನೇತೃತ್ವದ ಇಡಿಯ ಕಾಂಗ್ರೆಸ್ಸು ಇದರ ಹಿಂದಿತ್ತು! ಅದೊಂದು ದೊಡ್ಡ ಕಥೆ. ಮತ್ತೊಮ್ಮೆ ಹೇಳುವೆ..

Comments are closed.